ಬೆಂಗಳೂರು: ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಿರಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ. ನಮ್ಮ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಮೇಲಿರುವ ಕಳಂಕ ಮರೆಮಾಚಿಕೊಳ್ಳಲು ಇದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಸಂಚು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಈಗಾಗಲೇ ಇತ್ಯರ್ಥ ಆಗಿರುವ ವಿಚಾರ. ನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಗಡಿಯೊಳಗಿನ ಪ್ರದೇಶ ಅವರದ್ದು. ಇಲ್ಲಿರುವವರೆಲ್ಲ ನಮ್ಮವರೇ ಎಂದರು. ಬೆಳಗಾವಿಯಲ್ಲಿ ನಾವು ಸುವರ್ಣಸೌಧ ಕಟ್ಟಿದ್ದು, ಯಾರೂ ಶಾಂತಿ ಭಂಗ ಕೆಲಸ ಮಾಡಬಾರದು ಎಂದವರು ಹೇಳಿದರು.
ಬಿಜೆಪಿಗೆ ಸಾಲು, ಸಾಲು ರೌಡಿ ಶೀಟರ್ ಗಳ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಅವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲಿ ಬಿಡಿ ‘ ಎಂದು ಡಿಕೆಶಿ ಛೇಡಿಸಿದರು.
ಚುನಾವಣೆಗಾಗಿ ಬಿಜೆಪಿ ಸಿದ್ಧಾಂತ ಮರೆಯುತ್ತಿದೆಯೇ ಎಂಬ ಪ್ರಶ್ನೆಗೆ, ‘ ಬಿಜೆಪಿಗೆ ಯಾವಾಗ ಯಾವ ಸಿದ್ಧಾಂತ ಇತ್ತು? ಅವರು ಸಿದ್ಧಾಂತದ ಬಗ್ಗೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಭಾವನೆಗೂ, ಬದುಕಿಗೂ ವ್ಯತ್ಯಾಸವಿದೆ. ಬದುಕಿನ ಮೇಲೆ ರಾಜಕಾರಣ ಮಾಡಿಲ್ಲ. ಜನರ ಹೊಟ್ಟೆ ತುಂಬಿಸಿ, ಅವರಿಗೆ ಉದ್ಯೋಗ ಕೊಟ್ಟು, ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು ಎಂಬುದು ಅವರಲ್ಲಿ ಇಲ್ಲ. ಕೊಟ್ಟ ಮಾತಿನಂತೆ ರೈತರ ಆದಾಯ ಡಬಲ್ ಮಾಡಲಿಲ್ಲ. ಅವರಿಗೇನಿದ್ದರೂ ಭಾವನೆಗಳ ವಿಚಾರದ ಮೇಲಷ್ಟೇ ಆಸಕ್ತಿ’ ಎಂದರು.



















































