ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4ರಂದು ಬೆಂಗಳೂರಿನಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಕಸಾಯಿಖಾನೆಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚಿಸಿದೆ.

ಅಲ್ಲದೆ, ಚಿಕನ್, ಮಟನ್, ಬೀಫ್ ಹಾಗೂ ಮೀನು ಮಾರಾಟ ಮಾಡುವ ಚಿಲ್ಲರೆ ಅಂಗಡಿಗಳನ್ನೂ ಸೆಪ್ಟೆಂಬರ್ 4ರಂದು ತೆರೆಯದಂತೆ ಆದೇಶಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್ಗಳಲ್ಲಿಯೂ ಹಸಿ ಮಾಂಸದ ಮಾರಾಟ ಅಥವಾ ಸಂಸ್ಕರಣೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಧಾರ್ಮಿಕ ಹಬ್ಬದ ಹಿನ್ನೆಲೆಯಲ್ಲಿ ಈ ನಿರ್ಬಂಧ ಜಾರಿಗೊಳಿಸಲಾಗಿದ್ದು, ಸುತ್ತೋಲೆಯನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಜನ್ಮಾಷ್ಟಮಿ ದಿನ ಬೆಂಗಳೂರಿನಲ್ಲಿ ಮಾಂಸಾಹಾರ ಪ್ರಿಯರಿಗೆ ಮಾಂಸ ಸಿಗುವುದು ಕಷ್ಟವಾಗಲಿದೆ. ಮಾಂಸ ಮಾರಾಟಕ್ಕೆ ಸಂಬಂಧಿಸಿದ ಅಂಗಡಿಗಳು ಹಾಗೂ ಕಸಾಯಿಖಾನೆಗಳು ಒಂದು ದಿನ ಬಂದ್ ಆಗಲಿವೆ.







































































