ಬೆಂಗಳೂರು: ಐಟಿಐಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಮೂಲಭೂತ ಹಕ್ಕಿನಡಿ ಸಂಘಟನೆ ಮಾಡಿದ್ದಕ್ಕಾಗಿ ಮತ್ತು ಕಾನೂನು ಬದ್ಧವಾದ ಹಕ್ಕುಗಳಿಗಾಗಿ ಒತ್ತಾಯಿಸಿದ್ದಕ್ಕಾಗಿ ಐಟಿಐ ಲಿಮಿಟೆಡ್ನವರು ಮಹಿಳೆಯರು ಸೇರಿದಂತೆ ಒಟ್ಟು 80 ಕಾರ್ಮಿಕರಿಗೆ ಕಾನೂನುಬಾಹಿರವಾಗಿ ಉದ್ಯೋಗವನ್ನು ನಿರಾಕರಿಸಿದ್ದಾರೆ ಎಂಬುದು ಕಾರ್ಮಿಕರ ಆರೋಪ.
ಸುಮಾರು 3ರಿಂದ 30 ವರ್ಷಗಳ ವರೆಗೂ ಸುದೀರ್ಘ ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಹಠಾತ್ ಕೆಲಸದಿಂದ ವಜಾಗೊಳಿಸಿದ್ದರಿಂದ ಈ ಶ್ರಮಿಕ ವರ್ಗವು ಬೀದಿಪಾಲಾಗಿದೆ. ಕೇಂದ್ರ ಸರ್ಕಾರದ ಪ್ರಾದೇಶಿಕ ಕಾರ್ಮಿಕ ಇಲಾಖೆಯ ಆಯುಕ್ತರ ಮುಂದೆ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವುದಾಗಿ ಐಟಿಐ ಆಡಳಿತ ಮಂಡಳಿಯು ಒಪ್ಪಿದ್ದು, ಈಗ ನಕಾರ ಮಾಡುತ್ತಿದೆ ಎಂದು ಹೋರಾಟಿ ನಿರತರು ದೂರಿದ್ದಾರೆ.
ಈ ನಡುವೆ, 29.04.2022 ರಂದು ಕಾರ್ಮಿಕರ ಅಹೋರಾತ್ರಿ ಹೋರಾಟವು 150ನೇ ದಿನಕ್ಕೆ ಕಾಲಿಡುತ್ತಿದೆ. ಅಂದು ಸಂಜೆ 4.30 ಗಂಟೆಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ಪ್ರಗತಿಪರ ಚಿಂತಕರಾದ ಬಿ.ಸುರೇಶರವರು ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.