ಬೆಂಗಳೂರು: ಸಹಕಾರ ಇಲಾಖೆಯಲ್ಲಿ ಅನಗತ್ಯ ತೊಡಕನ್ನುಂಟು ಮಾಡುವ ಕಾನೂನುಗಳು, ಸುಗಮ ಆಡಳಿತಕ್ಕೆ ತೊಡಕಾಗುವ ಕಾಯ್ದೆಗಳಿದ್ದರೆ, ನನ್ನ ಅಥವಾ ಇಲಾಖೆ ಗಮನಕ್ಕೆ ತಂದರೆ ಅದನ್ನು ಈ ಬಾರಿ ಸದನದಲ್ಲಿ ಚರ್ಚೆಗೆ ತಂದು ತಿದ್ದುಪಡಿ ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ರಸ್ತೆ ಬಳಿಯ ಗಾಯನ ಸಮಾಜದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ (ಬಿ.ಡಿ.ಸಿ.ಸಿ.) ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿದ ಸಚಿವರು, ಈಗಾಗಲೇ ಕೆಲವು ತೊಡಕುಗಳು ನನ್ನ ಗಮನಕ್ಕೆ ಬಂದಿದ್ದು, ಅವುಗಳ ತಿದ್ದುಪಡಿಗೆ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
21 ಡಿಸಿಸಿ ಬ್ಯಾಂಕ್ ಗಳಿಗೆ ಸರ್ಕಾರದ ಷೇರು ಬಂಡವಾಳ ಹೂಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ಬ್ಯಾಂಕ್ ಗಳಿಗೆ ತಲಾ 10 ಲಕ್ಷ ರೂಪಾಯಿ ಹೂಡಿಕೆ ಮಾಡುವ ಚಿಂತನೆ ಇದ್ದು, ಶೀಘ್ರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಹಾಲು ಒಕ್ಕೂಟ ಸೇರಿದಂತೆ ಹಲವು ಸಹಕಾರ ಇಲಾಖೆಯ ಅಂಗ ಸಂಸ್ಥೆಗಳಿಂದ ಕೋವಿಡ್ ಸಂದರ್ಭದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ ಮಾಡಬೇಕೆಂದು ಆದೇಶ ಕೊಟ್ಟಿದ್ದೆ. ಈಗ ಬೆಂಗಳೂರು ಹಾಲು ಒಕ್ಕೂಟದಿಂದ 279 ಹುದ್ದೆಗಳಿಗೆ ಅರ್ಜಿ ಆಹ್ವಾನುಸಲಾಗಿದೆ. ಇದೇ ರೀತಿ ಹಲವು ಕಡೆ ಒಂದೊಂದಾಗಿ ಹುದ್ದೆಗಳ ನೆಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ತಿಳಿಸಿದರು.
ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಲ ಕೊಡಬೇಕು. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಕಾರ ಕೊಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸುತ್ತೋಲೆಯನ್ನು ಸಹ ಹೊರಡಿಸಿತ್ತು. ಎಲ್ಲ ದೃಷ್ಟಿಯನ್ನು ಇಟ್ಟುಕೊಂಡು ನಾನು ಎಲ್ಲ 21 ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದರು.
ಈ ಬಾರಿ 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈವರೆಗೆ 22,02,931 ಲಕ್ಷ ರೈತರಿಗೆ 13739.28 ಕೋಟಿ ರೂಪಾಯಿ ಸಾಲ ನೀಡಿದ್ದೇವೆ. ಮಾರ್ಚ್ 31ರೊಳಗೆ ನೂರಕ್ಕೆ ನೂರು ಗುರಿ ತಲುಪುವೆವು ಎಂದು ಸಚಿವ ಸೋಮಶೇಖರ್ ತಿಳಿಸಿದರು.