ಬೆಂಗಳೂರು: ರಾಜ್ಯ ಸರ್ಕಾರ ಇದೀಗ ‘ಆಶಾ’ ವಿರೋಧಿಯಾಗಿದೆಯೇ? ಹೌದೆನ್ನುತ್ತಿದ್ದಾರೆ ಆಶಾ ಕಾರ್ಯಕರ್ತೆಯರು. ವೇತನ ವಿಚಾರದಲ್ಲಿ ಆಶಾ ಕಾರ್ಯಕರ್ತರನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಿರುವ ರಾಜ್ಯ ಸರ್ಕಾರ ಇದೀಗ ‘ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ’ ಹೆಸರಿನಲ್ಲೂ ಆಶಾ ಕಾರ್ಯಕರ್ತೆಯರಿಗೆ ಅನ್ಯಾಯ ಎಸಗುತ್ತಿದೆ ಎಂಬ ಆರೋಪ ಪ್ರತಿಧ್ವನಿಸಿದೆ. ಸರ್ಕಾರದ ನಿಲುವನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಗುರುವಾರ (ಜೂನ್ 26) ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ‘ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025’ ನಡೆಯುತ್ತಿದ್ದು, ಆಶಾ ಕಾರ್ಯಕರ್ತೆಯರನ್ನು ಈ ಜಾತಿ ಗಣತಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಆದರೆ ಸಮೀಕ್ಷೆಗೆ ನಿಗದಿಯಾಗಿರುವ ಭತ್ಯೆಯನ್ನು ನೀಡದೆ ಆಶಾ ಕಾರ್ಯಕರ್ತೆಯರಿಂದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಾಯಕಿ ಟಿ.ಸಿ.ರಮ್ಯಾ ಆರೋಪಿಸಿದ್ದಾರೆ.
ಆದ್ದರಿಂದ ಸಮೀಕ್ಷೆಗೆ ನಿಗದಿಯಾಗಿರುವ ಭತ್ಯೆ ನೀಡಿ ಹಾಗೂ ಬಾಕಿ ಉಳಿದಿರುವ ಆಶಾ ಪ್ರೋತ್ಸಾಹಧನವನ್ನು ಈ ಕೂಡಲೇ ಬಿಡುಗಡೆ ಮಾಡಿ ಎಂದು ಒತ್ತಾಯಿಸಲು ‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ಬಿಬಿಎಂಪಿ ಸಮಿತಿ ಜೂನ್ 26ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಬಿಎಂಪಿ ವಲಯ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಟಿ.ಸಿ.ರಮ್ಯಾ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆಗಳನ್ನೂ ಈಡೇರಿಸಬೇಕೆಂದು ಹಕ್ಕೊತ್ತಾಯ ಮಂಡಿಸಲಾಗುತ್ತದೆ ಎಂದು ಟಿ.ಸಿ.ರಮ್ಯಾ ತಿಳಿಸಿದ್ದಾರೆ.
ಹೋರಾಟದ ‘ಆಶಾ’ ಹಕ್ಕೊತ್ತಾಯಗಳು:
-
ಮುಖ್ಯಮಂತ್ರಿಗಳು ಈ ಜನವರಿಯಲ್ಲಿ ರಾಜ್ಯ ಮಟ್ಟದ ಆಶಾ ಹೋರಾಟದ ಸಂದರ್ಭದಲ್ಲಿ ಘೋಷಣೆ ಮಾಡಿದ, ಏಪ್ರಿಲ್ ತಿಂಗಳಿನಿಂದ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ ರೂ.10,000 ಗ್ಯಾರಂಟಿ ಗೌರವಧನ ಪಾವತಿ ಮಾಡುವ ‘ಸರ್ಕಾರಿ ಆದೇಶ’ವನ್ನು ಈ ಕೂಡಲೇ ಹೊರಡಿಸಬೇಕು.
-
ಜಾತಿ ಗಣತಿ ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿರುವ ಭತ್ಯೆ ಕೊಟ್ಟು ಸಮೀಕ್ಷೆ ಮಾಡಿಸಬೇಕು.
-
ಬಾಕಿಯಿರುವ ಆಶಾ ಪ್ರೋತ್ಸಾಹಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.