ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯ ಸರಿಸಮಾನವಾದ ಸ್ಥಾನಮಾನ ನೀಡುವುದು ರಾಷ್ಟ್ರಗೀತೆಯ ಘನತೆ ಹಾಗೂ ಸ್ಥಾನಮಾನವನ್ನೇ ಕುಗ್ಗಿಸುವ ಅಪಾಯಕಾರಿ ಪ್ರಯತ್ನ ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಕುರಿತು ಆರ್ಎಸ್ಎಸ್ ಆರಂಭದಿಂದಲೇ ಹೊಂದಿಕೊಂಡು ಬಂದಿರುವ ಅಸಮ್ಮತಿ ಹೊಸದಲ್ಲ. ಸಂಘ ಪರಿವಾರದ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು 1966ರಲ್ಲಿ ಪ್ರಕಟಿಸಿದ ಬಂಚ್ ಆಫ್ ಥಾಟ್ಸ್ ಕೃತಿಯಲ್ಲೇ ಈ ಭಿನ್ನಮತ ಸ್ಪಷ್ಟವಾಗಿ ದಾಖಲಾಗಿದೆ. ವಂದೇ ಮಾತರಂಗೆ ಆದ್ಯತೆ ನೀಡುವ ಆ ಮನೋಭಾವನೆ, ಆರು ದಶಕಗಳ ನಂತರ ಕೇಂದ್ರ ಸರ್ಕಾರದ ಅಧಿಕೃತ ಕ್ರಮಗಳ ಮೂಲಕ ಮತ್ತೆ ತಲೆದೋರುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
2026ರ ಫೆಬ್ರವರಿ 11ರಂದು ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ಕುರಿತಂತೆ 10 ಪುಟಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳಲ್ಲಿನ ಹಲವು ಅಂಶಗಳು, ರಾಷ್ಟ್ರಗೀತೆಗೆ ಸಂವಿಧಾನಾತ್ಮಕವಾಗಿ ಒದಗಿಸಿರುವ ಸ್ಥಾನಮಾನವನ್ನು ಪರೋಕ್ಷವಾಗಿ ಕುಂದಿಸುವ ಪ್ರಯತ್ನಗಳು ಸ್ಪಷ್ಟವಾಗಿ ಕಾಣುತ್ತವೆ ಎಂದಿರುವ ಅವರು, ಮಾರ್ಗಸೂಚಿಗಳ ಪ್ರಕಾರ, ಸಂವಿಧಾನ ಸಭೆ ಮಾನ್ಯತೆ ನೀಡಿರುವ ಎರಡು ಅಂತಸ್ತುಗಳ ಬದಲಾಗಿ ವಂದೇ ಮಾತರಂ ಅನ್ನು ಸಂಪೂರ್ಣ ಆರು ಅಂತಸ್ತುಗಳಲ್ಲಿ ಹಾಡಬೇಕೆಂದು ಸೂಚಿಸಲಾಗಿದೆ. ಶಾಲೆಗಳಲ್ಲಿ ತರಗತಿಗಳ ಆರಂಭಕ್ಕೂ, ಸಾರ್ವಜನಿಕವಾಗಿಯೂ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಯ ಆಗಮನ-ನಿರ್ಗಮನದ ಸಂದರ್ಭಗಳಿಗೂ ವಂದೇ ಮಾತರಂ ಕಡ್ಡಾಯವಾಗಬೇಕು ಎನ್ನಲಾಗಿದೆ. ಅಲ್ಲದೆ, ರಾಷ್ಟ್ರಗೀತೆ ಹಾಡುವ ಸಂದರ್ಭದ ಮೊದಲೇ ವಂದೇ ಮಾತರಂ ಹಾಡಿದ ನಂತರವೇ ರಾಷ್ಟ್ರಗೀತೆ ಹಾಡುವ ಕ್ರಮವನ್ನು ಸೂಚಿಸಲಾಗಿದೆ ಎಂದಿದ್ದಾರೆ.
ಈ ಸೂಚನೆಗಳು, ರಾಷ್ಟ್ರಧ್ವಜಾರೋಹಣದ ನಂತರ ಹಾಗೂ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಆಗಮನ-ನಿರ್ಗಮನದ ವೇಳೆ ರಾಷ್ಟ್ರಗೀತೆ ವಾದ್ಯಗೊಳ್ಳಬೇಕೆಂಬ ದೀರ್ಘಕಾಲದಿಂದ ಪಾಲಿಸಿಕೊಂಡು ಬಂದಿರುವ ಅಧಿಕೃತ ಶಿಷ್ಟಾಚಾರದ ವಿರುದ್ಧವಾಗಿವೆ. ಇದು ಕೇವಲ ವಿಧಾನಾತ್ಮಕ ಬದಲಾವಣೆ ಅಲ್ಲ; ರಾಷ್ಟ್ರಗೀತೆಯ ಪ್ರಾತಿನಿಧಿಕ ಹಾಗೂ ಸಂವಿಧಾನಾತ್ಮಕ ಸ್ಥಾನಮಾನವನ್ನು ಕುಗ್ಗಿಸುವ ಸ್ಪಷ್ಟ ಸೂಚನೆಯಾಗಿದೆ.
ರಾಷ್ಟ್ರಗೀತೆಯ ಗೌರವ ಮತ್ತು ರಕ್ಷಣೆಗೆ 1971ರಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ ಸ್ಪಷ್ಟವಾದ ಕಾನೂನು ಚೌಕಟ್ಟನ್ನು ಒದಗಿಸಿದೆ. ಈ ಕಾಯ್ದೆಯಲ್ಲಿ ರಾಷ್ಟ್ರಗೀತೆಗೆ ಪ್ರತ್ಯೇಕ ವಿಧಿಯನ್ನು ಮೀಸಲಿಟ್ಟಿರುವುದು ಅದರ ವಿಶಿಷ್ಟ ಸ್ಥಾನವನ್ನು ತೋರಿಸುತ್ತದೆ. 1976ರ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಸೇರಿಸಲಾದ ಕಲಂ 51-ಎಯಲ್ಲಿ, ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಲಾಗಿದೆ.
1950ರ ಜನವರಿ 24ರಂದು ಸಂವಿಧಾನ ಸಭೆ ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಏಕಮತದಿಂದ ಅವಿರೋಧವಾಗಿ ಅಂಗೀಕರಿಸಿತು. ಅದೇ ಸಂದರ್ಭದಲ್ಲಿ ವಂದೇ ಮಾತರಂ ಮತ್ತು ಸಾರೆ ಜಹಾನ್ ಸೆ ಅಚ್ಚಾ ಹಾಡನ್ನು ರಾಷ್ಟ್ರಗೀತೆಗಳೆಂದು ಗುರುತಿಸಲಾಯಿತು. ಈ ನಿರ್ಣಯದ ಸಂದರ್ಭದಲ್ಲಿ ದೇಶದ ಅಗ್ರಗಣ್ಯ ನಾಯಕರು ಹಾಜರಿದ್ದು, ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹಾಗಿದ್ದರೆ, ಇಂದಿನ ವಿವಾದದ ಅಗತ್ಯವೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.
ವಂದೇ ಮಾತರಂ ಕುರಿತು ಇತಿಹಾಸ ಸಂಪೂರ್ಣವಾಗಿ ಸ್ಪಷ್ಟವಾಗಿದೆ. 1875ರಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಮೂಲ ಗೀತೆಯಲ್ಲಿ ಕೇವಲ ಎರಡು ಅಂತಸ್ತುಗಳಿದ್ದವು. 1882ರಲ್ಲಿ ಅವರು ಬರೆದ ಆನಂದ ಮಠ ಕಾದಂಬರಿಯಲ್ಲಿ, ನಿರ್ದಿಷ್ಟ ಐತಿಹಾಸಿಕ-ಸಾಹಿತ್ಯಿಕ ಸನ್ನಿವೇಶಕ್ಕೆ ತಕ್ಕಂತೆ ನಾಲ್ಕು ಹೆಚ್ಚುವರಿ ಅಂತಸ್ತುಗಳನ್ನು ಸೇರಿಸಲಾಯಿತು. ಆದರೆ ಸಾರ್ವಜನಿಕ ಜೀವನದಲ್ಲಿ, ರಾಜಕೀಯ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ, ಸದಾ ಎರಡು ಅಂತಸ್ತುಗಳನ್ನೇ ಬಳಸಿಕೊಂಡು ಬರಲಾಗಿದೆ. 1896ರಲ್ಲಿ ಎಐಸಿಸಿ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರೂ, ಅದೇ ಎರಡು ಅಂತಸ್ತುಗಳ ರೂಪವೇ ಆಗಿತ್ತು. ಕಳೆದ 130 ವರ್ಷಗಳಿಂದ ಈ ಪದ್ಧತಿ ಅಚಲವಾಗಿ ಮುಂದುವರಿದಿದೆ.
1937ರ ಕೊಲ್ಕತ್ತಾ ಎಐಸಿಸಿ ಅಧಿವೇಶನದಲ್ಲಿಯೂ ಈ ವಿಷಯ ಚರ್ಚೆಗೆ ಬಂದಾಗ, ವಂದೇ ಮಾತರಂ ಎರಡು ಅಂತಸ್ತುಗಳಿಗೆ ಸೀಮಿತ ಎಂಬ ನಿರ್ಣಯವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಅಂದಿನ ನಾಯಕರ ಸ್ಪಷ್ಟ ನಿಲುವು ಈ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ವಂದೇ ಮಾತರಂ ಮತ್ತು ಜನ ಗಣ ಮನ—ಎರಡೂ ಬಂಗಾಳಿ ಭಾಷೆಯ ಶ್ರೇಷ್ಠ ಕವಿಗಳ ಸೃಷ್ಟಿಗಳು. ಒಂದನ್ನು ಮತ್ತೊಂದರ ವಿರುದ್ಧ ನಿಲ್ಲಿಸಿ ಕೃತಕ ವಿವಾದ ನಿರ್ಮಿಸುವ ಪ್ರಯತ್ನಗಳು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಗೆ ಅವಮಾನವೇ ಸರಿ ಎಂದಿರುವ ಹರಿಪ್ರಸಾದ್, ರವೀಂದ್ರನಾಥ ಟಾಗೋರ್ ರಚಿಸಿದ ಜನ ಗಣ ಮನ ಕೇವಲ ಒಂದು ಗೀತೆ ಅಲ್ಲ; ಅದು ಭಾರತದ ಭೌಗೋಳಿಕ ವೈವಿಧ್ಯ, ಸಾಂಸ್ಕೃತಿಕ ಸಮೃದ್ಧಿ ಮತ್ತು ಆಧ್ಯಾತ್ಮಿಕ ಏಕತೆಯನ್ನು ಪ್ರತಿಬಿಂಬಿಸುವ ರಾಷ್ಟ್ರಚೇತನೆಯ ಘೋಷಣೆ. ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳು, ದೇಶದ ಏಕತೆಗೆ ಧಕ್ಕೆಯುಂಟುಮಾಡುವ ಅಪಾಯವನ್ನು ಹೊತ್ತುಕೊಂಡಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿವಾದವನ್ನು ಉದ್ದೇಶಪೂರ್ವಕವಾಗಿ ಉತ್ಕರ್ಷಗೊಳಿಸಲಾಗುತ್ತಿದೆಯೇ ಎಂಬ ಅನುಮಾನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ರಾಷ್ಟ್ರಗೀತೆಯ ಬದಲಾವಣೆ ಅಥವಾ ಅದರ ಸ್ಥಾನಮಾನ ಕುಗ್ಗಿಸುವ ಪ್ರಯತ್ನಗಳು ಕೇವಲ ರಾಜಕೀಯ ತಂತ್ರವಾಗದೇ, ದೀರ್ಘಕಾಲೀನ ಸಂವಿಧಾನಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಹೊಂದಿವೆ ಎಂದು ವ್ಯಾಖ್ಯಾನಿಸಿದ್ದಾರೆ.
ರಾಷ್ಟ್ರಗೀತೆ ಕುರಿತಾಗಿ ಈಗ ನಡೆಯುತ್ತಿರುವ ಈ ಚರ್ಚೆ, ಕೇವಲ ಸಂಗೀತ ಅಥವಾ ಪದಗಳ ಪ್ರಶ್ನೆಯಲ್ಲ; ಅದು ಭಾರತೀಯ ಗಣರಾಜ್ಯದ ಆತ್ಮ ಮತ್ತು ಮೌಲ್ಯಗಳ ಕುರಿತ ಗಂಭೀರ ಪ್ರಶ್ನೆಯಾಗಿದೆ ಎಂದು ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯ ಸರಿಸಮಾನವಾದ ಸ್ಥಾನಮಾನ ನೀಡುವುದು ರಾಷ್ಟ್ರಗೀತೆಯ ಘನತೆ ಹಾಗೂ ಸ್ಥಾನಮಾನವನ್ನೇ ಕುಗ್ಗಿಸುವ ಅಪಾಯಕಾರಿ ಪ್ರಯತ್ನ.
ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಕುರಿತು ಆರ್ಎಸ್ಎಸ್ ಆರಂಭದಿಂದಲೇ ಹೊಂದಿಕೊಂಡು ಬಂದಿರುವ ಅಸಮ್ಮತಿ ಹೊಸದಲ್ಲ. ಸಂಘ ಪರಿವಾರದ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಾಲ್ಕರ್… pic.twitter.com/2jUpWBR2Cn
— Hariprasad.B.K. (@HariprasadBK2) February 16, 2026

























































