ಬೆಂಗಳೂರು: KSRTC ನೌಕರರ ಮಕ್ಕಳಲ್ಲಿ ಕಲಿಕೆಗೆ ಸ್ಪೂರ್ತಿ ತರುವ ವಿಶಿಷ್ಟ ಪ್ರಯತ್ನ ನಿಗಮದಿಂದ ನಡೆದಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಲಿಕೆಯಲ್ಲಿ ಪದಕ ಪಡೆದವರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿದ ಸನ್ನಿವೇಶ ವಿದ್ಯಾರ್ಥಿ ಸಮೂಹದಲ್ಲಿ ಸ್ಪೂರ್ತಿಯನ್ನು ಹೆಚ್ಚಿಸಿತು.
ಸಾರಿಗೆ ನಿಗಮದ ಸಿಬ್ಬಂದಿಗಳ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ, ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುವ 06 ವಿದ್ಯಾರ್ಥಿಗಳನ್ನು ಬುಧವಾರ ಸಾರಿಗೆ ಸಚಿವರು ಸನ್ಮಾನಿಸಿದರು. ಸಂಸ್ಥೆಯ ವತಿಯಿಂದ ರೂ.5,000 ಗೌರವಧನ, ಪ್ರಮಾಣ ಪತ್ರ (ಸಚಿವರು ವೈಯಕ್ತಿಕವಾಗಿ ಎಲ್ಲಾ 06 ವಿದ್ಯಾರ್ಥಿಗಳಿಗೆ ತಲಾ ರೂ.20,000 ನಗದು ಪುರಸ್ಕಾರ) ನೀಡಿ ಅಭಿನಂದಿಸಿದರು..
ಡಾ.ಗಗನ ಎಂ., ಎಂ.ಬಿ.ಬಿ.ಎಸ್., (ಶ್ರೀ ಮುನಿರಾಜಪ್ಪ ಕೆ.ಇ., ಕುಶಲಕರ್ಮಿ, ಪ್ರಾದೇಶಿಕ ಕಾರ್ಯಗಾರ, ಕೆಂಗೇರಿ, ಬೆಂಗಳೂರು ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
ಕು||ವಿಸ್ಮಯ ಟಿ.ಆರ್, M.Tech (ರೇಣುಕಾರ್ಯ ಟಿ.ಕೆ., ಚಾಲಕ ಕಂ ನಿರ್ವಾಹಕ, ಪುತ್ತೂರು ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
ಕು|| ರೂಫಿಯಾ ಕೆ.ಎಂ, M.Sc (ಮಹಬೂಬ್ ಸಾಬ್ ಹೆಚ್. ಸಂಚಾರ ನಿಯಂತ್ರಕರು, ಚಿಕ್ಕಬಳ್ಳಾಪುರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ 07 ಚಿನ್ನದ ಪದಕ ಪಡೆದಿರುತ್ತಾರೆ.
ಕು|| ಸತೀಶ್ ಕುಮಾರ್ ದೊಡ್ಡಮನಿ, Master of Performing Arts- Drama (ಪದ್ದವ್ವ ಗಣಿ, ಚಾಲಕ ಕಂ ನಿರ್ವಾಹಕಿ,, ಬೆಂಗಳೂರು ಕೇಂದ್ರೀಯ ವಿಭಾಗ, 6ನೇ ಘಟಕ ರವರ ಮಗ) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
ಡಾ.ಸಾನಿಯಾ ಬಿ.ಬಿ., Bachelor of Dental Surgery (BDS) (ಅಕ್ರಂ ಪಾಷ, ಚಾಲಕ-ಕಂ-ನಿರ್ವಾಹಕ, ಮೈಸೂರು ನಗರ ವಿಭಾಗ, ನಂಜನಗೂಡು ಘಟಕ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 07 ಚಿನ್ನದ ಪದಕ ಹಾಗೂ 02 ಬೆಳ್ಳಿ ಪದಕ ಪಡೆದಿರುತ್ತಾರೆ.
ಕು||ಟಿ.ಹರ್ಮೀನ್, B.Sc (ತಾಯಬ್ ಅಹ್ಮದ್, ನಿರ್ವಾಹಕ, ಮೈಸೂರು ಗ್ರಾಮಾಂತರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 06 ಚಿನ್ನದ ಪದಕ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಇವುಗಳೇ ಯಶಸ್ಸಿನ ಮಂತ್ರಗಳು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಅಥವಾ ಯಾವುದೇ ಕ್ಷೇತ್ರವಾಗಿರಲಿ – ನೀವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಪ್ರಯತ್ನಿಸಿ ಎಂದು ಹಿತವಚನ ನೀಡಿದರು.
ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ, ತಾಂತ್ರಿಕ ಸಿಬ್ಬಂದಿಗಳು ಬಹಳ ಶ್ರಮ ಜೀವಿಗಳಾಗಿದ್ದು, ಇವರುಗಳು ಸಾರ್ವಜನಿಕರ ಸೇವೆಗೆ ಹೆಚ್ಚಿನ ಅವಧಿಯನ್ನು ಮೀಸಲಿಟ್ಟು, ಕುಟುಂಬಕ್ಕೆ ಸಮಯವನ್ನು ನೀಡಲು ಕಷ್ಟಸಾಧ್ಯವಾಗಿದೆ. ಆದರೂ ಸಹ ತಾವು ಪೋಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಚಿನ್ನದ ಪದಕ ಗಳಿಸಿ ಅವರಿಗೆ ಗೌರವ ತಂದಿರುವುದು ಶ್ಲಾಘನೀಯ ಎಂದರು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯಲ್ಲಿ ಶ್ರಮವಹಿಸಿದ ಎಲ್ಲಾ ಪೋಷಕರಿಗೂ ಅಭಿನಂದನೆ ತಿಳಿಸಿದರು.
ನಿಮ್ಮ ಜ್ಞಾನವನ್ನು ಕೇವಲ ನಿಮ್ಮ ಲಾಭಕ್ಕಾಗಿ ಮಾತ್ರವಲ್ಲ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ನಿಮ್ಮ ಭವಿಷ್ಯ ಪ್ರಕಾಶಮಾನವಾಗಲಿ ಎಂದು ಹಾರೈಸಿದರು.
ಸಾರಿಗೆ ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ವಿದ್ಯಾಚೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಈವರೆಗೂ 5,450 ವಿದ್ಯಾರ್ಥಿಗಳಿಗೆ ರೂ.2.76 ಕೋಟಿಗಳ ವಿದ್ಯಾರ್ಥಿ ವೇತನ ನೀಡಲಾಗಿರುತ್ತದೆ.
ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಕೆಎಸ್ಸಾರ್ಟಿಸಿ ಅಧಿಕಾರಿಗಳಾದ ಮೊಹಮ್ಮದ್ ರಿಜ್ವಾನ್ ನವಾಬ್, ಅಕ್ರಂ ಪಾಷ, ಡಾ. ನಂದಿನಿದೇವಿ ಉಪಸ್ಥಿತರಿದ್ದರು.



















































