ಬೆಂಗಳೂರು: ರಾಜ್ಯಾದ್ಯಂತ ಇಂದು ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕರುನಾಡಿನ ಜನರ ಹೆಮ್ಮೆಯ ರಥ ಕೆಎಸ್ಸಾರ್ಟಿಸಿ ಪಾಳಯದಲ್ಲೂ ಭುವನೇಶ್ವರಿಯ ಕೈಂಕರ್ಯ ಗಮನಸೆಳೆಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೇಂದ್ರ ಕಚೇರಿಯಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಸ್ತ ಅಧಿಕಾರಿ/ ಸಿಬ್ಬಂದಿ ಕರುನಾಡಿಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಕೊಂಡಾಡಿದರು.

ಮೈಸೂರು ರಾಜ್ಯದಿಂದ ಕರ್ನಾಟಕವಾಗಿ ಹೆಸರಿಸಲಾದ ನಾಡು ಕರ್ನಾಟಕ. ಆಲೂರು ವೆಂಕಟರಾಯರು, ಕುವೆಂಪು, ಅನಕೃ, ಮೊದಲಾದ ಮಹನೀಯರುಗಳು ಕನ್ನಡ ನಾಡಿಗಾಗಿ ದುಡಿದಿದ್ದಾರೆ. ಅವರ ಸೇವೆಯನ್ನು ಆದರ್ಶವಾಗಿ ಕಂಡು, ಕನ್ನಡವೇ ನಮ್ಮಿಸಿರು’ ಎಂಬಂತೆ ಕನ್ನಡ ನಾಡು ನುಡಿಯನ್ನು ಗೌರವಿಸಿ, ಉಳಿಸಿ, ಬೆಳೆಸುವ ಸಂಕಲ್ಪವನ್ನು ಎಲ್ಲರೂ ಮೂಡಬೇಕು ಎಂದು ಪ್ರತಿಪಾದಿಸಿದರು. ಎಲ್ಲರನ್ನೂ ಪ್ರೋತ್ಸಾಹಿಸಿ ಭಾಷೆಯನ್ನು ಕಲಿಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ನೆಲದ ಬಗ್ಗೆ ಹೆಮ್ಮೆ ಮತ್ತು ಗೌರವವಿರಲಿ ಎಂದು ತಿಳಿಸಿದರು.







































































