ಬೆಂಗಳೂರು: ಇಂಧನ ಇಲಾಖೆಯಲ್ಲಿ ಹುದ್ದೆಗೆ ತಲಾ 10 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನೇರ ಆರೋಪ ಮಾಡಿದ್ದಾರೆ.
ಈ ಸರಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಪೂರ್ಣವಾಗಿ ನಿರತವಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿದೆ ಎಂದು ಹೇಳಿ ತಮ್ಮ ಬಳಿ ಮಹತ್ವದ ದಾಖಲೆ ಇದೆ ಎಂದು ಒಂದು ಪೆನ್ ಡ್ರೈವ್ ಪ್ರದರ್ಶಿಸಿದರು.
ವಿಧಾನಸೌಧದಲ್ಲಿ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ವಿರುದ್ಧ ತೀವ್ರ ರೀತಿಯಲ್ಲಿ ಹರಿಹಾಯ್ದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆ ಒಂದು ಇದೆ ಎಂದು ಯಾರೊ ಹೇಳಿದರು. ಅದನ್ನು ‘ನಗದು ಅಭಿವೃದ್ಧಿ ‘ ಇಲಾಖೆ ಅಂತ ಯಾಕೆ ಕರೆಯಬಹುದು ಎಂದು ಅವರು ವಿವರಿಸಿದರು. ಅದು ನಿಜ ಆಗುತ್ತಿರುವ ರೀತಿಯಲ್ಲಿಯೇ ನಗರವನ್ನು ಅಭಿವೃದ್ಧಿ ಮಾದರಿ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗೆ ಒಬ್ಬರು, ಬೆಂಗಳೂರು ಹೊರಗೆ ಒಬ್ಬರು ‘ನಗದು ಅಭಿವೃದ್ಧಿ ‘ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಎಂದರೆ ನಗದು ಅಭಿವೃದ್ಧಿ ಮಾತ್ರ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ನಿನ್ನೆ ಇಂಧನ ಇಲಾಖೆಯಲ್ಲಿ ಎರಡು ವರ್ಗಾವಣೆಗಳು ಆಗಿವೆ. ಆ ಎರಡು ಹುದ್ದೆಗಳನ್ನು ತಲಾ 10 ಕೋಟಿ ರೂಪಾಯಿಗೆ ಮಾರಿಕೊಳ್ಳಲಾಗಿದೆ. ಅಲ್ಲಿಗೆ ಬಂದು ಕೂತಿರುವ ಆ ಅಧಿಕಾರಿ ಒಂದು ದಿನಕ್ಕೆ 50 ಲಕ್ಷ ಕಮಿಷನ್ ಹೊಡೆಯುತ್ತಾನೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಅಸಹ್ಯಕ್ಕೆ ಸರ್ಕಾರ ಏನು ಉತ್ತರ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದರು. ಇದೇ ವೇಳೆ ಅವರು ಇಂಧನ ಇಲಾಖೆಯಲ್ಲಿ ವರ್ಗಾವಣೆ ಅದವರ ವರ್ಗಾವಣೆ ಪತ್ರಗಳನ್ನು ಮಾಧ್ಯಮಗಳಿಗೆ ನೀಡಿದರು.




























































