ಬೆಂಗಳೂರು: ಈ ಚುನಾವಣಾ ಫಲಿತಾಂಶವು ಭ್ರಷ್ಟಾಚಾರ ವಿರುದ್ದದ ಗೆಲುವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಇದು ಭ್ರಷ್ಟಾಚಾರ ವಿರುದ್ಧದ ಗೆಲುವು. 40% ಕಮಿಷನ್, ಬೆಲೆ ಏರಿಕೆ, ರೈತರ ಸಂಕಷ್ಟಗಳ ವಿರುದ್ಧ, ಗೃಹಿಣಿಯರ ಕಣ್ಣೀರಿನ ವಿರುದ್ಧ, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್ ಗ್ಯಾರಂಟಿಗಳ ಪರ ಗೆಲುವು. ಇನ್ನು ಮುಂದೆ ಗೃಹಜ್ಯೋತಿ ಬೆಳಗಲಿದೆ. ಸರ್ಕಾರ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿಯಾಗಲಿದೆ. ಯುವನಿಧಿಯು ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ. ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸಲಿದೆ. ಮಹಿಳೆಯರು ಸುಖವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ನೆಮ್ಮೆದಿಯ ಉಸಿರು ಬಿಡಲಿದ್ದಾರೆ. ಕೊಟ್ಟ ಮಾತಿನಂತೆ ಈ ಯೋಜನೆgaಳನ್ನು ಜಾರಿ ಮಾಡೇ ಮಾಡುತ್ತೇವೆ ಎಂದರು.
ಭಾನುವಾರ ಶಾಸಕಾಂಗ ಪಕ್ಷದ ಸಭೆ:
ಪಕ್ಷದ ರಾಜ್ಯ ಅಧ್ಯಕ್ಷನಾಗಿ ಜವಾಬ್ದಾರಿ ನೀಡಿದ ನಂತರ ಎಲ್ಲ ನಾಯಕರು ನನಗೆ ಜತೆಜತೆಯಾಗಿ ಸಹಕಾರ ಕೊಟ್ಟು ಈ ಯಶಸ್ಸಿಗೆ ಕಾರಣರಾಗಿದ್ದಾರೆ. ಏನಾದರೂ ಮಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆದ್ದು ಅಧಿಕಾರಕ್ಕೆ ತರುತ್ತೇವೆ ಎಂದು ಸೋನಿಯಾ ಗಾಂಧಿ ಅವರಿಗೆ ಮಾತು ಕೊಟ್ಟಿದ್ದೆವು. ನಮ್ಮ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಕೆಲಸ ಮಾಡೋಣ ಎಂದ ಅವರು, ಭಾನುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನಮ್ಮ ಪದ್ಧತಿಯಂತೆ ಚರ್ಚೆ ಮಾಡಿ ನಂತರ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಡುತ್ತೇವೆ. ಮಾಧ್ಯಮ ಮಿತ್ರರು ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ. ಇಲ್ಲಿ ಯಾವ ವ್ಯಕ್ತಿ ಪೂಜೆಗೂ ಅವಕಾಶವಿಲ್ಲ, ಕೇವಲ ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದರು.