ಬೆಂಗಳೂರು: ಅದಾನಿಯ ಸಂಶಯಾಸ್ಪದ ಆದಾಯದ ಮೂಲ ಬಗ್ಗೆ ಪ್ರಶ್ನಿಸುವುದು ತಪ್ಪೇ? ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಹಿಂದೆದೂ ಕಾಣದಷ್ಟು ಅಪಾಯಕ್ಕೆ ಒಳಗಾಗಿದೆ. 1952ರಲ್ಲಿ ಆರಂಭವಾದ ದಿನದಿಂದ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲಾಗುತ್ತಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸುವ ಕೆಟ್ಟ ಸಂಸ್ಕೃತಿ ಆರಂಭವಾಗಿದೆ. ಯಾವುದೇ ಚರ್ಚೆಗೆ ಆಡಳಿತ ಪಕ್ಷ ಅವಕಾಶ ನೀಡುತ್ತಿಲ್ಲ. ಆಮೂಲಕ ಬಿಜೆಪಿ ಸರ್ಕಾರ ಭಯಭೀತವಾಗಿರುವುದು ಸ್ಪಷ್ಟವಾಗಿದೆ ಎಂದರು.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಚರ್ಚೆಗೆ ಎತ್ತಿರುವ ವಿಷಯಗಳು ಬಿಜೆಪಿಯ ನಿದ್ದೆಗೆಡಿಸಿದೆ. ಈಗ ಬಿಜೆಪಿ ಬಲಿಷ್ಠ ಸರ್ಕಾರ ಸಂಸತ್ತಿನಲ್ಲಿ ಚರ್ಚೆಗೆ ಹೆದರಿದರೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ಜನರೇ ನಿರ್ಧರಿಸಬೇಕು. ಚುನಾಯಿತ ಪ್ರತಿನಿಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ತಿರಸ್ಕರಿಸಲಾಗುತ್ತಿದೆ ಎಂದ ಅವರು, ರಾಹುಲ್ ಗಾಂಧಿ ಲಂಡನ್ ನಲ್ಲಿ ವಿದೇಶಗಳನ್ನು ಭಾರತಕ್ಕೆ ನೆರವಾಗಿ ಎಂದು ಕೇಳಿದ್ದಾರೆ ಎಂಬ ಸುಳ್ಳನ್ನು ಹೇಳಿದರು. ಸಂಸತ್ತು ಇರುವುದೇ ಚರ್ಚೆ ಮಾಡಲು. ಆದರೆ ಈ ವಿಚಾರವಾಗಿ ಸಂಸತ್ತಿನಲ್ಲಿ ಉತ್ತರ ನೀಡಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದರು.
ದೇಶದಲ್ಲಿ ಅನೇಕ ಗಂಭೀರ ಪ್ರಕರಣಗಳ ವಿಚಾರವಾಗಿ ಸಂಸತ್ತಿನಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿದೆ. ಆಗೆಲ್ಲಾ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್, ಮನಮೋಹನ್ ಸಿಂಗ್ ಪ್ರಧಾನಮಂತ್ರಿಗಳಾಗಿದ್ದಾಗ ಜಂಟಿ ಸದನ ಸಮಿತಿ ರಚನೆ ಮಾಡಿದ್ದರು. ಬೋಫೋರ್ಸ್ ಹಗರಣ, ಷೇರುಪೇಟೆ ಹಗರಣ, 2ಜಿ ಹಗರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಜೆಪಿಸಿ ರಚನೆ ಮಾಡಲಾಗಿತ್ತು. ನಂತರ ಈ ಪ್ರಕರಣಗಳಲ್ಲಿ ಸುಳ್ಳು ಆರೋಪ ಮಾಡಲಾಗಿತ್ತು ಎಂಬುದು ಸಾಬೀತಾಯಿತು ಎಂದು ವಿಶ್ಲೇಷಿಸಿದರು.
ಈಗ ದೇಶದ ಅತಿ ದೊಡ್ಡ ವ್ಯಾಪಾರ ಸಂಸ್ಥೆ ಅದಾನಿ ಸಮೂಹದ ವಿರುದ್ಧ ಪ್ರಶ್ನೆ ಮೂಡಿದೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಈ ಸಂಸ್ಥೆ ಮೇಲೆ ಅಕ್ರಮ ಹಣಕಾಸು ವ್ಯವಹಾರ ಸೇರಿದಂತೆ ಅನೇಕ ಆರೋಪ ಕೇಳಿ ಬಂದಿದೆ. 45 ಸಾವಿರ ಕೋಟಿಯಷ್ಟು ಹಣ ಅಕ್ರಮವಾಗಿ ಬಂದಿದ್ದು, ಇದರ ಮೂಲವನ್ನು ಪ್ರಶ್ನಿಸಬಾರದೇ? ಈ ಪ್ರಕರಣಗ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಮಾಡಬೇಕಲ್ಲವೇ? ಭಾರತ ಜಿ20 ಶೃಂಗಸಸಭೆ ನಡೆಯುವ ಸಮಯದಲ್ಲಿ ಈ ಆರೋಪ ಬಂದಿರುವಾಗ ತನಿಖೆ ಯಾಕೆ ಮಾಡುತ್ತಿಲ್ಲ? ಬಿಜೆಪಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ ತನಿಖೆಗೆ ಆದೇಶಿಸಿದೆ ಎಂದು ಬಿಜೆಪಿ ಹೇಳಬಹುದು. ಆದರೆ ಇದಕ್ಕೆ, ಸೆಬಿ ಸಂಸ್ಥೆಯ ತನಿಖೆಗೆ ಅದರದೇ ಆದ ಮಿತಿ ಇರುತ್ತದೆ. ಆದರೆ ಜಂಟಿ ಸದನ ಸಮಿತಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಈ ಸಮಿತಿ ಸರ್ಕಾರದ ದಾಖಲೆಗಳನ್ನು ಇತರೆ ಸಂಸ್ಥೆಗಳಿಗಿಂತ ಸುಲಭವಾಗಿ ಪಡೆಯಬಹುದು. ಆಮೂಲಕ ವಿಸ್ತೃತ ತನಿಖೆ ನಡೆಸಬಹುದಾಗಿದೆ. ಎಸ್ಬಿಐ, ಎಲ್ಐಸಿಯಲ್ಲಿ ಜನಸಮಾನ್ಯರ ಹಣವಿದೆ. ಆ ಹಣವನ್ನು ಒಬ್ಬ ವ್ಯಕ್ತಿಯ ಕಂಪನಿ ಮೇಲೆ ಹೂಡಿಕೆ ಮಾಡಲಾಗಿದೆ. ಆಗ ಕಾರ್ಮಿಕರ ಪಿಎಫ್ ಹಣವನ್ನು ಕೂಡ ಇದರಲ್ಲಿ ಹೂಡಿಕೆ ಮಾಡಿರುವ ವರದಿ ಬರುತ್ತಿವೆ. ಇದರ ಬಗ್ಗೆ ನಾವು ಪ್ರಶ್ನಿಸಬಾರದೇ? ಎಂದು ಆನಂದ್ ಶರ್ಮಾ ಪ್ರಶ್ನಿಸಿದರು.
ಮತ್ತೊಂದು ವಿಚಾರ ಎಂದರೆ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿರುವ ರೀತಿ ಖಂಡನೀಯ. ಇಂತಹ ಅನರ್ಹತೆ ಹಿಂದೆಂದೂ ಆಗಿರಲಿಲ್ಲ. ಮಾರ್ಚ್ 13, 2019ರಲ್ಲಿ ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯವನ್ನು ಟೀಕೆ ಮಾಡಿರಲಿಲ್ಲ. ಹೀಗಾಗಿ ಕ್ರಿಮಿನಲ್ ಮಾನಹಾನಿಗೆ ಅವಕಾಶವೇ ಇರಲಿಲ್ಲ. ರಾಹುಲ್ ಗಾಂಧಿ ಅವರು ನೀರವ್ ಮೋದಿ ಹಾಗೂ ಲಲತಿ ಮೋದಿ ಅವರ ಕುರಿತಾಗಿ ಮಾಡಿರುವ ಭಾಷಣವಾಗಿತ್ತು. ಹಿಂದೂ, ಮುಸಲ್ಮಾನ ಹಾಗೂ ಪಾರ್ಸಿಗಳಲ್ಲಿ ಮೋದಿ ಎಂಬ ಉಪನಾಮ ಹೊಂದಿವೆ. ರಾಹುಲ್ ಗಾಂಧಿ ಅವರು ಮೋದಿಯನ್ನು ಟೀಕೆ ಮಾಡಿ ಹಿಂದುಳಿದ ವರ್ಗಗಳನ್ನು ಅವಮಾನಿದ್ದಾರೆ ಎಂದು ಹೇಳಿದ್ದಾರೆ. ಆದರೆ ನೀರವ್ ಮೋದಿ ಆಗಲಿ, ಲಲಿತ್ ಮೋದಿ ಆಗಲಿ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹಾಗಾದರೆ ರಾಹುಲ್ ಗಾಂಧಿ ಹೇಗೆ ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದಂತಾಗುತ್ತದೆ? ಎಂದರು.
ಸರ್ಕಾರ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಿದರೆ ಇದೆಲ್ಲವನ್ನು ಬಹಿರಂಗಪಡಿಸುತ್ತೇವೆ. ಈ ಪ್ರಕರಣದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ದೂರುದಾರನೆ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರುತ್ತಾನೆ. ಫೆ.7ರಂದು ರಾಹುಲ್ ಗಾಂಧಿ ಅವರು ಅದಾನಿ ವಿಚಾರವಾಗಿ ಮೋದಿ ಅವರನ್ನು ಪ್ರಶ್ನಿಸಿದ ಕೆಲ ದಿನಗಳಲ್ಲಿ ತಡೆಯಾಜ್ಞೆ ತೆರವುಗೊಳಿಸಿ ವಿಚಾರಣೆ ನಡೆಸಬೇಕು ಎಂದು ದೂರುದಾರ ಕೇಳುತ್ತಾನೆ. ನಂತರ ವಿಚಾರಣೆ ನಡೆದು ಮಾ.23ರಂದು ಗರಿಷ್ಠ ಶಿಕ್ಷೆ 2 ವರ್ಷ ಜೈಲುವಾಸ ಹಾಗೂ ದಂಡ ವಿಧಿಸಲಾಗಿದೆ. ಕೊಲೆ, ಡಕಾಯತಿ, ರೇಪ್ ಮಾಡಿ ಶಿಕ್ಷೆಯಾದರೆ ಅನರ್ಹಗೊಳಿಸುತ್ತಾರೆ. ಆದರೆ ಮಾನಹಾನಿಯ ಸುಳ್ಳು ಆರೋಪ ಪ್ರಕರಣ 3 ವಾರದಲ್ಲಿ ತೀರ್ಪು ಪ್ರಕಟವಾಗಿ, ತೀರ್ಪು ಬಂದ 24 ಗಂಟೆಗಳಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹ ಮಾಡಲಾಗುತ್ತದೆ. ಇದು ದೋಷಪೂರಿತ ತೀರ್ಪಾಗಿದೆ. ನಾವು ಭಾರತೀಯ ಕಾನೂನು ನ್ಯಾಯಾಂಗ ಪ್ರಕ್ರಿಯೆ ಮೇಲೆ ನಂಬಿಕೆ ಇಟ್ಟಿದ್ದು, ಕಾನೂನು ತಿಳಿದಿರುವ ನಾನು ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ತಿರಸ್ಕರಿಸಲಾಗುತ್ತದೆ ಎಂದವರು ಹೇಳಿದರು.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ 1,2,3,4 ನಲ್ಲಿ ಯಾವ ಅಪರಾಧಕ್ಕೆ ಅನರ್ಹತೆ ಮಾಡಲಾಗುವುದು ಎಂದು ವಿವರಣೆ ನೀಡಲಾಗಿದೆ. ಇಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೊದಲೇ ಅನರ್ಹತೆ ಮಾಡಲಾಗಿದೆ. ಹೀಗಾಗಿ ಈ ಅನರ್ಹತೆ ಊರ್ಜಿತವಾಗುವುದಿಲ್ಲ. ಭಾರತದ ಸಂವಿಧಾನದ ಪ್ರಕಾರ ಸಂಸತ್ತಿನ ಮುಖ್ಯಸ್ಥರು ರಾಷ್ಟ್ರಪತಿಗಳು, ಅವರು ಅನರ್ಹತೆಯ ಕುರಿತು ತೀರ್ಮಾನ ಮಾಡಬೇಕು. ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ರಾಷ್ಟ್ರಪತಿಗಳಿಗೆ ಅನರ್ಹತೆಯ ಪ್ರಸ್ತಾವನೆ ಸಲ್ಲಿಕೆಯಾಗದೇ ಅನರ್ಹತೆ ಮಾಡಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಮುಂದಿನ ಒಂದು ತಿಂಗಳು ದೇಶದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಇದು ಕೇವಲ ಒಂದು ಪಕ್ಷದ ನಾಯಕರ ಪ್ರಶ್ನೆಯಲ್ಲ. ಇದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಶ್ನೆಯಾಗಿದೆ ಎಂದವರು ಹೇಳಿದರು.


















































