ಬೆಂಗಳೂರು, ಡಿಸೆಂಬರ್ 03: ಕರ್ನಾಟಕದಲ್ಲಿ ಅತಿ ದೊಡ್ಡ ಕಬ್ಬಿಣದ ಕಾರ್ಖಾನೆ ಇದ್ದು 4-5 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಕಬ್ಬಿಣ ಅದಿರು ಉತ್ಪಾದನೆ ಮಾಡುವ ರಾಜ್ಯವಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಒರಿಸ್ಸಾ ಗಣಿಗಾರಿಕೆಯ ರಾಜ್ಯವಾಗಿದೆ. ಅಲ್ಲಿ ಗಣಿಗಾರಿಕೆ ಪ್ರಮುಖ ಉದ್ಯಮ, ಅದನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನೀತಿಗಳನ್ನೇ ಇತರೆ ರಾಜ್ಯಗಳಿಗೆ ಅನ್ವಯಿಸುವುದು ಕೂಡ ಸೂಕ್ತವಲ್ಲ. ರಾಜ್ಯದಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರ ಉತ್ಪಾದನೆ ಸಾಧ್ಯವಾಗಲಿದೆ ಎಂದರು.
ಇಂಧನ, ಗಣಿ ಹಾಗೂ ಉಕ್ಕು ಸಚಿವಾಲಯಗಳು ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಹಾಗೂ ಬೇಡಿಕೆಯಲ್ಲಿರುವ ಖನಿಜಗಳ ಉತ್ಪಾದನೆಗೆ ತೊಡಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಮನವಿ ಸಲ್ಲಿಸಿವೆ. ಗಣಿ ನೀತಿಯಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಸರಳಿಕರಣಗೊಳಿಸಿದೆ. ಗಣಿ ಉದ್ಯಮಿಗಳು ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಆಗಮಿಸಿ ಈ ಮೂಲಕ ರಾಜ್ಯದ ಆದಾಯ ವೃದ್ಧಿಗೆ ಕೊಡುಗೆ ನೀಡಬೇಕೆಂದರು.
ಭಗವಂತನ ಪಂಚಭೂತದಲ್ಲಿ ಭುಮಿತಾಯಿ ಒಬ್ಬಳು. ಭೂ ತಾಯಿ ಗರ್ಭದಲ್ಲಿ ಮನುಷ್ಯನ ಭವಿಷ್ಯ ಇದೆ. ಪಂಚಭೂತಗಳನ್ನು ದೈವ ಸಾಕ್ಷಿಯಾಗಿ ಕಾಣುತ್ತೇವೆ. ಭೂಮಿಯಲ್ಲಿ ದೇವರ ಅಸ್ತಿತ್ವ ಕಾಣುತ್ತೇವೆ. ದೇವರ ಅಸ್ತಿತ್ವ ಮನುಕುಲದ ಒಳಿತಿಗಾಗಿ ಇದೆ. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎನ್ನುವುದರ ಮೇಲೆ ಮನುಕುಲದ ಭವಿಷ್ಯ ಅಡಗಿದೆ ಎಂದರು.
ಗಣಿಗಳ ರಚನೆಯೇ ನಮಗೆ ಅವುಗಳ ಅನ್ವೇಷಣೆಯ ವಿಧಾನದ ಬಗ್ಗೆ ಹಾಗೂ ಶೋಷಣೆ ಮಾಡಬಾರದು ಎಂಬ ಪಾಠ ಕಲಿಸುತ್ತವೆ. ಅನ್ವೇಷಣೆ ಮತ್ತು ಶೋಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಇದನ್ನು ಸಾಧಿಸಿದಾಗ ಸುಸ್ಥಿರತೆ ಸಾಧಿಸಬಹುದು. ಸುಸ್ಥಿರತೆ ಪ್ರಮುಖ ವಿಷಯವಾಗಿದ್ದು, ಈ ವಲಯದಲ್ಲಿ ಸುಸ್ಥಿರತೆಯನ್ನು ತರಬೇಕಿದೆ. ಅತ್ಯುತ್ತಮ ಗಣಿ ಸಂಸ್ಕೃತಿಯನ್ನು ಜಾರಿಗೆ ತರಬೇಕಿದೆ. 5 ಸಾವಿರಕ್ಕೂ ಹೆಚ್ವು ಜನರಿಗೆ ಉದ್ಯೋಗ ಕಲ್ಪಿಸುವ ಗಣಿಗಾರಿಕೆ ವಲಯ, ಸರ್ಕಾರ ಕ್ಕೂ ಆದಾಯ ತರಲಿದೆ. ಗಣಿಗಾರಿಕೆ ಸಂಸ್ಕೃತಿ. ಹೆಚ್ವಿನ ಚಿನ್ನ, ಗಣಿ ಹಾಗೂ ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುತ್ತದೆ ಹಾಗೂ ಸುಸ್ಥಿರತೆ ಯನ್ನೂ ತರಲಿದೆ. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡದಿದ್ದರೆ, ಉತ್ಪಾದನೆಯನ್ನು ಹೆಚ್ಚುಗೊಳಿಸಲಾಗುವುದಿಲ್ಲ ಹಾಗೂ ಭವಿಷ್ಯಕ್ಕೆ ಉಳಿಯುವುದೂ ಇಲ್ಲ. ಅನ್ವೇಷಣೆ ಮಾಡಿದರೆ ದೇಶ ಹಾಗೂ ದೇಶದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಶೋಷಣೆ ಮಾಡಿದರೆ ಭವಿಷ್ಯದಿಂದ ಕಳುವು ಮಾಡಿದಂತಾಗುತ್ತದೆ ಎಂದರು.





















































