ಬೆಂಗಳೂರು: ಉದ್ಯಮಿಗಳು ಆವಿಷ್ಕಾರ ಮಾಡುವುದರ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಿ ಸರ್ಕಾರಕ್ಕೂ ಅದಾಯ ತರುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಉದ್ಘಾಟಿಸಿದ ಬೆಂಗಳೂರು ಟೆಕ್ ಸಮ್ಮಿಟ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೃಜನಶೀಲತೆ ಹಲವಾರು ಆಯಾಮಗಳನ್ನು ಒಳಗೊಂಡಿದೆ. ನಾವು ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಜಗತ್ತು ಸಮಸ್ಯೆಗಳಿಂದ ಮುಳುಗುತ್ತಿದೆ. ಹಣಕಾಸು ಮೂಲಗಳು ಪ್ರತಿ ಕ್ಷಣವೂ ಇಳಿಮುಖವಾಗುತ್ತಿದೆ. ನಾವು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದರಿಸಬೇಕಾಗುತ್ತದೆ. ನಮ್ಮ ಪೂರ್ವಜರು ವ್ಯವಸ್ಥಿತವಾದ ಜೀವನ ಮಾಡುತ್ತಿದ್ದರು. ನಾವು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ವನ್ನು ನೀಡಬೇಕು. ಭವಿಷ್ಯ ದಿಂದ ನಾವು ಕಳ್ಳತನ ಮಾಡಬಾರದು. ಭವಿಷ್ಯಕ್ಕಾಗಿ ಭೂಮಿಯನ್ನು ಉಳಿಸಬೇಕು. ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಚಿಂತನೆ ಅಗತ್ಯ. ಯಾವುದೇ ತಂತ್ರಜ್ಞಾನ ಬಂದರೂ ಈ ಪರಿಸರವನ್ನು ಉಳಿಸುವ ಗಣ ಹೊಂದಿರಬೇಕು. ಡಿಜಿಟಲ್ ಅಂತರ ವನ್ನು ಕಡಿಮೆ ಮಾಡುವತ್ತಲೂ ನಾವು ಗಮನಹರಿಸಬೇಕು. ಪರಿಸರ ಸ್ನೇಹಿ ವಾತಾವರಣ ಹೊಂದಬೇಕು. ಪರಿಸರ ಸ್ನೇಹಿ ತಂತ್ರಜ್ಞಾನ, ನಾವೀನ್ಯತೆ ಹಾಗೂ ಇಕೋ ಇಕನಾಮಿಕ್ಸ್ ನ್ನು ಸಾಧ್ಯವಾಗಿಸಬೇಕು.
ಐಟಿ ಬಿಟಿ, ಕೃತಕ ಬುದ್ಧಿಮತ್ತೆ ನಮ್ಮ ಸಂಪನ್ಮೂಲಗಳನ್ನು ಉಳಿಸಿ ರಕ್ಷಣೆ ಮಾಡುವ ಸಾಧ್ಯತೆ ಇದೆ. ಮಾನವ ಕುಲಕ್ಕೆ ಯಾವುದು ಅನುಕೂಲವಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷಿಸಬೇಕು. ತಂತ್ರಜ್ಞಾನ ನಮಗೆ ಮಾಹಿತಿಯ ಕಣಜವನ್ನೇ ನಮ್ಮ ಮುಂದಿರಿಸಿದೆ. ನವೀಕರಿಸಬಹುದಾದ ಇಂಧನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಮೈಸೂರು ಮಹಾರಾಜರು ವಿಜ್ಞಾನ ತಂತ್ರಜ್ಞಾನಕ್ಕೆ , ಶಿಕ್ಷಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ . ನಂತರ ಉದ್ಯಮಕ್ಕೆ ಆದ್ಯತೆ ನೀಡಿದ್ದಾರೆ. ಈಗ ಐಟಿ ಬಿಟಿ ಬಂದಿದೆ. ಬೆಂಗಳೂರಿಗೆ ಬಂದವರು ಐಟಿ ಬಿಟಿ ಕಂಪನಿಗಳಿಗೆ ಭೇಟಿ ನೀಡುತ್ತಾರೆ. ಮೊದಲು ಸಂಪತ್ತು ಉಳ್ಳವರ ಕಾಲವಿತ್ತು. ಈಗ ಜ್ಞಾನ ಇರುವವರ ಕಾಲ. ಬೆಂಗಳೂರಿಗೆ ಪ್ರತಿದಿನ 5000 ಕ್ಕೂ ಹೆಚ್ಚು ಇಂಜನೀಯರ್ ಗಳು ಬಂದು ಹೋಗುತ್ತಾರೆ. ಬೆಂಗಳೂರಿನಲ್ಲಿ ಸುಮಾರು 400 ಆರ್ ಆಂಡ್ ಡಿ ಸೆಂಟರ್ ಇವೆ. ಬಿಯಾಂಡ್ ಬೆಂಗಳೂರು ಸಾಕಾರಗೊಳಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ ಐಟಿ ಉದ್ಯಮಕ್ಕೆ ಆದ್ಯತೆ ನೀಡುತ್ತೇವೆ. ಮುಂದಿನ 10 ವರ್ಷದಲ್ಲಿ ನಗರೀಕರಣ ಹೆಚ್ಚಳವಾಗಲಿದೆ. ಭಾರತದಲ್ಲಿ ಶೇ 40% ರಷ್ಟು ನಗರೀಕರಣವಾಗಲಿದೆ. ಹೀಗಾಗಿ ಐಟಿ ಬಿಟಿ ಕಂಪನಿಗಳು ಸರಳ ನಗರೀಕರಣ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಲು ಕರೆ ನೀಡಿದರು.
ಕರ್ನಾಟಕದಲ್ಲಿ ಶೀಘ್ರವೇ 6 ಹೊಸ ಹೈಟೆಕ್ ನಗರಗಳನ್ನು ಸೃಷ್ಟಿ ಮಾಡಲಾಗುತ್ತದೆ, ಅವುಗಳು ಕರ್ನಾಟಕದ ಪ್ರಗತಿಯ ಕೇಂದ್ರಬಿಂದು ಆಗಲಿವೆ ಎಂದು ಶ್ರೀ @BSBommai ಘೋಷಣೆ ಮಾಡಿದ್ದಾರೆ.#BTS2022 #Tech4NexGen #BengaluruTechSummit2022 pic.twitter.com/YybByVnhd4
— BJP Karnataka (@BJP4Karnataka) November 16, 2022
ಆರೋಗ್ಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು. ದೇಶದಲ್ಲಿ ಒಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ 7 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ ಮಾಡಲಾಗುತ್ತಿದೆ. ಕಲಬುರ್ಗಿ, ಹುಬ್ಬಳ್ಳಿ ಧಾರವಾಡ, ಮೈಸೂರು, ಮಂಗಳೂರು ಸುತ್ತ ಹೊಸ ನಗರಗಳು ಬರಲಿವೆ. ಬೆಂಗಳೂರಿನ ಪಕ್ಕ ಹೊಸ ನಗರ ನಿರ್ಮಾಣ ಮಾಡಲಾಗುತ್ತದೆ. ಜ್ಞಾನ, ವಿಜ್ಞಾನ ಹಾಗೂ ಟೆಕ್ ಸಿಟಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ವಿಮಾನ ನಿಲ್ದಾಣಕ್ಕೆ ಹತ್ತಿರವಿರಲಿದೆ. ಆರು ತಿಂಗಳೊಳಗೆ ಈ ನಗರ ನಿರ್ಮಾಣ ದ ಬಗ್ಗೆ ಘೋಷಣೆ ಮಾಡಲಿದ್ದು, ಯೋಜನೆಯನ್ನು ರೂಪಿಸಲಾಗುವುದು.ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳಿದ್ದು, ಸರ್ಕಾರದ ವತಿಯಿಂದ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಇದೂ ಕೂಡ ಆರು ತಿಂಗಳಲ್ಲಿ ಸ್ಥಾಪಿಸಲಾಗುವುದು. ನಮ್ಮ ಪ್ರಧಾನಿಗಳು ಬಿಐಎಎಲ್ ನ 2 ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದಾರೆ. ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಟರ್ಮಿನಲ್ ಇದಾಗಿದೆ. ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ. ತಂತ್ರಜ್ಞಾನಗಳೆಲ್ಲವೂ ವಿಶ್ವದ ಭವಿಷ್ಯಕ್ಕೆ ಮಾನವ ಅಭಿವೃದ್ಧಿ ಸಮಾವೇಶದ ಧ್ಯೇಯವಾಗಲಿ ಎಂದರು.























































