ಬೆಂಗಳೂರು: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜಧರ್ಮವನ್ನು ಸರ್ಕಾರ ಪಾಲಿಸಿಲ್ಲ. ಹಾಗಾಗಿ ಸರ್ಕಾರ ಆಯೋಜಿಸಿರುವ ‘ಅಮೃತ ಮಹೋತ್ಸವ’ ಕಾರ್ಯಕ್ರವನ್ನು ಪ್ರತಿಪಕ್ಷ ಬಹಿಷ್ಕರಿಸಬೇಕಿದೆ ಎಂದು ಪ್ರದೇಶ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಶಾಸನಸಭೆಯ ಪ್ರತಿಪಕ್ಷ ನಾಯಕರಿಗೆ ಪತ್ರ ಬರೆದಿರುವ ರಾಜಕೀಯ ವಿಶ್ಲೇಷಕ ರಮೇಶ್ ಬಾಬು..
ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಪ್ರದೇಶ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಚನಕ್ಕೆ ವಿರುದ್ಧವಾಗಿ ಸರ್ಕಾರ ನಡೆಸುವುದು ಲಜ್ಜೆಗೆಡಿತನದ ಪರಮಾವದಿ ಎಂದು ಬೊಮ್ಮಾಯಿ ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನೀಡಿರುವ ಜಾಹಿರಾತಿನಲ್ಲಿ ಸ್ವತಂತ್ರ ಸೇನಾನಿ, ಮಾಜಿ ಪ್ರಧಾನಿ ಪಂಡಿತ್ ಜವಹರ್ ಲಾಲ್ ಭಾವಚಿತ್ರ ಮತ್ತು ವಿವರ ಪ್ರಜ್ಞಾ ಪೂರ್ವಕವಾಗಿ ಕೈ ಬಿಡಲಾಗಿದೆ ಎಂಬ ಸಂಗತಿಯತ್ತ ನಾಯಕರ ಗಮನಸೆಳೆದಿದ್ದಾರೆ.
ರಾಜಕೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಅವರ ಈ ಪತ್ರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಎಲ್ಲರಿಗೂ ಸ್ಪೂರ್ತಿಯಾಗಲಿ. ಅವರ ದೇಶಪ್ರೇಮದ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ.#AzadiKaAmritMahotsav @BSBommai pic.twitter.com/Vlv7YlMbAA
— CM of Karnataka (@CMofKarnataka) August 14, 2022
-
ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಶಾಸನ ಸಭೆಯ ಪ್ರತಿಪಕ್ಷ ನಾಯಕರಿಗೆ ಬರೆದಿರುವ ಪತ್ರ ಹೀಗಿದೆ :
-
ಯಾವುದೇ ರಾಜಕೀಯ ಪಕ್ಷ ಅಧಿಕಾರ ನಡೆಸುವಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜಧರ್ಮ ಪಾಲಿಸಬೇಕು. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಚನಕ್ಕೆ ವಿರುದ್ಧವಾಗಿ ಸರಕಾರ ನಡೆಸುವುದು ಲಜ್ಜೆಗೆಡಿತನದ ಪರಮಾವದಿ.ರಾಜ್ಯ ಬಿಜೆಪಿ ಸರ್ಕಾರ ಈ ದಿನ 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಜಾಹಿರಾತು ನೀಡಿರುತ್ತದೆ. ಈ ಜಾಹಿರಾತಿನಲ್ಲಿ ಸ್ವತಂತ್ರ ಸೇನಾನಿ ಮಾಜಿ ಪ್ರಧಾನಿ ಪಂಡಿತ್ ಜವಹರ್ ಲಾಲ್ ಭಾವಚಿತ್ರ ಮತ್ತು ವಿವರ ಪ್ರಜ್ಞಾಪೂರ್ವಕವಾಗಿ ಕೈ ಬಿಡಲಾಗಿದೆ. ಇದು ಈ ದೇಶದ ಸ್ವತಂತ್ರ ಹೋರಾಟಕ್ಕೆ ಮಾಡಿದ ಅತಿ ದೊಡ್ಡ ಅಪಚಾರ. ನೆಹರು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ. ಇತಿಹಾಸ ತಿರುಚುವ ಸಂಚು.
-
ಕಾಶ್ಮೀರ ಪಂಡಿತ್ ಕುಟುಂಬದ ನೆಹರು 1912ರಲ್ಲಿ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದು ಸ್ವತಂತ್ರ ಚಳುವಳಿಯಲ್ಲಿ ತೊಡಗಿಸಿಕೊಂಡರು. ನೆಹರು ಮಹಾತ್ಮಾ ಗಾಂಧೀಜಿಯವರ ಪ್ರತಿ ಹೋರಾಟದ ಬಾಗವಾಗಿದ್ದರು. 1916ರ ಸ್ವದೇಶೀ ಚಳುವಳಿ, 1920ರ ಅಸಹಕಾರ ಚಳುವಳಿ,1930 ಉಪ್ಪಿನ ಸತ್ಯಾಗ್ರಹ,1940 ನಾಗರೀಕ ಅವಿಧೇಯತೆ ಹೋರಾಟ, 1943-45ರ ಜೈಲು ವಾಸದ ಮೂಲಕ ಸ್ವತಂತ್ರ ಚಳುವಳಿಯ ಗಾಂಧೀಜಿ ನಂತರದ ಮುಂಚೂಣಿ ನಾಯಕರಾಗಿದ್ದರು. ಆರು ವರ್ಷ ವಿವಿಧ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರು, 18 ವರ್ಷ ಈ ದೇಶದ ಪ್ರಧಾನಿ ಆಗಿ ದೇಶದ ಉನ್ನತಿಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅವರ ಪ್ರಗತಿಪರ ಚಿಂತನೆಗಳು ಸಂಸದೀಯ ಮೌಲ್ಯಗಳು ಜನತಂತ್ರದ ಆಶಯಗಳು ಗಾಂಧೀಜಿ ಚಿಂತನೆಗಳೊಂದಿಗೆ ಸಮೀಕರಣಗೊಂಡಿದ್ದು ಭಾರತ ನಿರಂತರ ಅಭಿರುದ್ಧಿಯತ್ತ ಮುಖ ಮಾಡಲು ಕಾರಣವಾಗಿದೆ. ಇಂತಹ ಮಹಾನ್ ಚೇತನ ಪಂಡಿತ್ ಜವಾಹರ್ ನೆಹರು ಅವರ ಭಾವಚಿತ್ರ ಮತ್ತು ವಿವರಣೆ ಸರ್ಕಾರದ ಜಾಹಿರಾತಿನಲ್ಲಿ ನೀಡದೆ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ! ಲಜ್ಜೆಗೆಟ್ಟವರಿಗೆ ಬೆತ್ತಲಾಗುವುದು ಸಾಮಾನ್ಯ ಕ್ರಿಯೆ ಇರಬಹುದು?
-
ರಾಜ್ಯ ಬಿಜೆಪಿ ಸರ್ಕಾರದ ಈ ಲಜ್ಜೆಗೇಡಿ ಕೃತ್ಯವನ್ನು ಕಾಂಗ್ರೆಸ್ ಮತ್ತು ನಾಡಿನ ಸಮಸ್ತ ಜನ ಖಂಡಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಲು ಮನವಿ ಮಾಡುತ್ತೇನೆ. ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಇಡೀ ರಾಜ್ಯದಲ್ಲಿ ಪಕ್ಷದ ವತಿಯಿಂದ 75ನೇ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಕರೆ ನೀಡಿ. ಪಕ್ಷದ ಶಾಸಕರು, ಸಂಸದರು ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಪಕ್ಷದ ಪ್ರತಿಭಟನೆ ದಾಖಲಿಸಬೇಕಾಗಿ ಮನವಿ ಮಾಡುತ್ತೇನೆ. ಇದು ಈ ಸಂದರ್ಭದ ಅನಿವಾರ್ಯತೆ ಎಂದು ಭಾವಿಸುತ್ತೇನೆ.
-
ರಮೇಶ್ ಬಾಬು, ಕೆಪಿಸಿಸಿ ವಕ್ತಾರರು.



















































