ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಅನೇಕ ಕಡೆ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಿದೆ. ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ನಾಯಂಡಹಳ್ಳಿ ಸರ್ಕಲ್ ಬಳಿ ತಗ್ಗು ಪ್ರದೇಶಗಳಿಗೆ ಇಂದು ಭೇಟಿ ಜನರ ಸಂಕಷ್ಟ ಆಲಿಸಿದರು. ಪಂತರಪಾಳ್ಯ, ನಾಯಂಡಹಳ್ಳಿ ಮೆಟ್ರೋ ಲೇಔಟ್ ಮತ್ತಿತರೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ಲ್ಯಾಟ್ಗಳಲ್ಲಿ ನೀರು ತುಂಬಿ ಅಲ್ಲಿನ ನಿವಾಸಿಗಳು ಹೋಟೆಲ್ ಗಳಲ್ಲಿ ಉಳಿಯುವ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದಲ್ಲೇ ಸಿಎಂ ಆಗಿದ್ದ ಜಿಲ್ಲೆಯಲ್ಲೇ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ಕೊಟ್ಟಿದ್ದಾರೆ. ಆದರೆ ಇವತ್ತು ಅವರು (ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ) ವಿದೇಶ ಪ್ರವಾಸದಲ್ಲಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಈಗಿನ ಶಾಸಕ ಮೂರು ಬಾರಿ ಎಂಎಲ್ ಎ ಆಗಿದ್ದಾರೆ. ಅಶ್ವತ್ಥ ನಾರಾಯಣ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಎಷ್ಟು ಅನುದಾನ
ಹೋಗಿದೆ? ಎಂದು ಅವರು ಪ್ರಶ್ನಿಸಿದರು.
ಎಲ್ಲವೂ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಸಿಎಂ ದಾವೋಸ್ ಪ್ರವಾಸದಲ್ಲಿದ್ದಾರೆ. ಯಾವ ಮುಖ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ವಿದೇಶಿ ಕಂಪನಿಗಳನ್ನು ಕೇಳುತ್ತಾರೆ. ಇಲ್ಲಿ ಉದ್ಯಮಿಗಳು ದಿನ ಬೆಳಗಾದರೆ ಸರಕಾರಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ಚಾಟಿ ಬೀಸಿದರು.
ಕಣ್ಣು ಹೊರೆಸುವ ತಂತ್ರವನ್ನು ಇವರು ಅನುಸರಿಸುತ್ತಿದ್ದಾರೆ. ವೋಟ್ ಹಾಕಿದವರಿಗೆ ಒಂದು, ವೋಟ್ ಹಾಕದವರಿಗೆ ಮತ್ತೊಂದು. ಶಾಸಕರಿಂದ ಜನರಿಗೆ ತಾರತಮ್ಯ ಧೋರಣೆಗೆ ಹೆಚ್ ಡಿಕೆ ಕಿಡಿಕಾರಿದರು. ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಏಳು ಬಾರಿ ದೆಹಲಿಗೆ ದಂಡೆತ್ತಿ ಹೋಗಿದ್ದಾರೆ. ಆದರೆ ಯಾವುದೂ ಕೆಲಸ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ಸ್ಥಳೀಯ ಮುಖಂಡರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.

























































