ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ.ಗಳನ್ನು ಕೆ.ಕೆ.ಆರ್.ಡಿ.ಬಿ ವಿವೇಚನಾ ನಿಧಿಯಿಂದ ಕೂಡಲೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ
ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ 80 ಕೋಟಿ ರೂ.ಗಳ ಬೇಡಿಕೆಯಲ್ಲಿ ಉಳಿದ ಮೊತ್ತವನ್ನು ಹಂತ ಹಂತವಾಗಿ ನೀಡಲಾಗುವುದು ಎಂದರು. 2-3 ವಿಭಾಗಗಳನ್ನು ಮಾಡಿ ಅವುಗಳನ್ನು ಪೂರೈಸುವುದಾಗಿ ಭರವಸೆಯಿತ್ತರು.
ವಿವಿಗಳು ಕ್ಯಾಂಪಸ್ಸಿಗೆ ಸೀಮಿತವಾಗಿರಬಾರದು. ಕಾಲ ಬದಲಾವಣೆಯಾಗಿದೆ, ಜಾಗತೀಕರಣ, ಉದಾರೀಕರಣವಾಗಿದೆ. ಕನ್ನಡ ಮುಚ್ಚಿಡುವ ವಸ್ತು ಅಲ್ಲ. ಬಿಚ್ಚಿಡುವ ವಸ್ತು. ಬಹಳಷ್ಟು ಜನ ಸಾಹಿತಿಗಳು ಅದನ್ನು ಮುಚ್ಚಿಡುವ ಪ್ರಯತ್ನದಲ್ಲಿಯೇ ಬಂಡಾಯ ಸಾಹಿತ್ಯ ಹುಟ್ಟಿರುವುದು. . ತುಳಿತಕ್ಕೆ ಒಳಗಾದವರ ಧ್ವನಿ ಬಂಡಾಯ ಸಾಹಿತ್ಯ ಎಂದರು.
ಕನ್ನಡ ನಾಡು, ನುಡಿ, ನಮ್ಮ ಸಂಸ್ಕøತಿಗೆ ಮಹತ್ವದ ಕೊಡುಗೆ ನೀಡುತ್ತದೆ. ಭಾಷೆಯಿಂದ ಭಾವನೆ ಬಂತು. ಹೀಗಾಗಿ ಭಾಷೆಯಿಲ್ಲದೇ ನಮ್ಮ ಬದುಕೇ ಇಲ್ಲ. ಕನ್ನಡ ನಾಡನ್ನು ಸುಸಂಸ್ಕೃತ ರಾಜ್ಯವನ್ನಾಗಿ ಮಾಡುವ ಹಂಬಲವೂ ಕನ್ನಡ ಭಾಷೆಯಿಂದಲೇ ಬಂದಿದೆ. ನಮ್ಮ ಬದುಕನ್ನು ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಕನ್ನಡ ಭಾಷೆಯನ್ನು ನಿತ್ಯದ ವ್ಯವಹಾರದ ಬಳಕೆಗೆ ಮಾತ್ರ ಸೀಮಿತಗೊಳಿಸಿದ್ದು, ಭಾಷೆಯ ಮೌಲ್ಯವನ್ನು ಕಡಿಮೆ ಮಾಡಲಾಗಿದೆ. ಈ ಮೌಲ್ಯವನ್ನು ಹೆಚ್ಚಿಸಬೇಕಾದರೆ ಭಾಷೆಯ ಬೆಳವಣಿಗೆ, ಸಂಶೋಧನೆ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಬೇಕು. ಯಾವುದೇ ರಂಗದಲ್ಲಿ ಕನ್ನಡ ಹಿಂದುಳಿಯಬಾರದು. ಸಂಶೋಧನಾ ಕ್ಷೇತ್ರದಲ್ಲಿಯೂ ಕನ್ನಡ ಬಳಕೆಯಾಗಬೇಕು ಎಂದರು.
ಹಂಪಿ ವಿಶ್ವವಿದ್ಯಾಲಯಲ್ಲಿ ಭಾಷೆ ಮತ್ತು ಸಂಸ್ಕøತಿ ಎರಡೂ ಬೆಸೆದುಕೊಂಡು ಸಂಶೋಧನೆ ನಡೆಯಬೇಕು. ವಿಭಿನ್ನ ವಿಚಾರಣೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕು. ಸ್ಥಾಪಿತವಾಗಿರುವ ಹಾದಿಯ ಮೂಲಕ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಹೊಸ ಚಿಂತನೆಯ ವಿಭಿನ್ನ ಧ್ವನಿಗಳಿಗೂ ಅವಕಾಶವಿರಬೇಕು. ಈ ವಿಶ್ವವಿದ್ಯಾಲಯ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕು. 10 ಕೇಂದ್ರಗಳಿಗೆ ವಿಶೇಷ ಅನುದಾನ ನೀಡಿ, ಒಂದು ಕೇಂದ್ರ ಮೂರು ಜಿಲ್ಲೆಗಳನ್ನು ತೆಗೆದುಕೊಂಡು, ಕನ್ನಡ ಹಂಪಿ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಭಾಷೆ , ಸಾಹಿತ್ಯ ಮತ್ತು ಜನರ ಭಾವನೆಗಳನ್ನು ಅರಿತು ಕೆಲಸ ಮಾಡುಬೇಕು. 10 ಕೇಂದ್ರಗಳು ಚಟುವಟಿಕೆಗಳು ಪೂರ್ತಿಯಾಗಿ ಮಾಡಬೇಕು. ಎಂ.ಪಿ. ಪ್ರಕಾಶ್ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಮಾಡಲಾಗುವುದು. ಈ ಯೋಜನೆಗೆ ವಿಶೇಷ ಸಹಾಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.
ಜ್ಞಾನವನ್ನು ಬಳಕೆ ಮಾಡಿ ವಿವಿಧ ರಂಗದಲ್ಲಿ ವಿದ್ಯಾರ್ಥಿಗಳು ಬಳಸಿಕೊಂಡರೆ ದೊಡ್ಡ ಪ್ರಮಾಣ ಅನುಕೂಲವಾಗಲಿದೆ. ಈ ಬಗ್ಗೆ ಹೊಸ ಚಿಂತನೆ ಮಾಡಬೇಕು. ಯುವಜನತೆಯ ಕೈಯಲ್ಲಿ ಕನ್ನಡದ ಅತ್ಯುತ್ತಮ ಭವಿಷ್ಯ ಅಡಗಿದೆ ಎಂದರು.
ಕೇವಲ ನಾಗರಿಕತೆಯ ಬೆಳವಣಿಗೆಗೆ ನಮ್ಮ ಸಂಸ್ಕøತಿಯ ಬೆಳವಣಿಗೆ ಎನ್ನುವ ಕಲ್ಪನೆ ತಪ್ಪು ಎನ್ನುವುದನ್ನು ಈ ವಿಶ್ವವಿದ್ಯಾಲಯ ಪದೇ ಪದೇ ಬೇರೆ ಬೇರೆ ಪ್ರಸಂಗಗಳ ಮೂಲಕ ತೋರಿಸಿಕೊಟ್ಟಿದೆ. ನಮ್ಮ ಭಾಷೆ ಮತ್ತು ಸಂಸ್ಕøತಿ ಬಹಳ ಗಟ್ಟಿಯಾಗಿದೆ. ಕನ್ನಡಿಗನೊಬ್ಬ ಏನಾಗಿದ್ದ, ಈಗ ಏನಾಗಿದ್ದಾನೆ, ಏನಾಗಬೇಕು, ವಿಶ್ವದ ಭೂಪಟದಲ್ಲಿ ಕನ್ನಡ ಏನಾಗಿದೆ, ಕನ್ನಡಿಗನ ಸ್ಥಾನ ಏನು ಎನ್ನುವ ತೀರ್ಮಾನಗಳನ್ನು ಈ ವಿಶ್ವವಿದ್ಯಾಲಯದಲ್ಲಿ ಆಗಬೇಕು. ಕನ್ನಡ ಬಹಳ ಶ್ರೀಮಂತ ಭಾಷೆ, ಕನ್ನಡವನ್ನು ಪ್ರೀತಿ ಮಾಡಿ ನಿಮ್ಮ ಸಂಶೋಧನೆಗೆ ನೂರಾರು ಅವಕಾಶಗಳನ್ನು ಕೊಡುತ್ತದೆ ಎಂದರು.
ನನ್ನ ಪ್ರಕಾರ ಒಂದು ಜೀವಂತಿಕೆ ಇರುವ ವಿಶ್ವವಿದ್ಯಾಲಯ. ಉತ್ಕೃಷ್ಟವಾದ ಅವಕಾಶ ತಮಗೆ ಸಿಕ್ಕಿದೆ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಬದಲಾಯಿಸುವ ಅಗತ್ಯವಿದೆ. ಕನ್ನಡದ ಇತಿಹಾಸ ಮತ್ತು ಕನ್ನಡದ ಭವಿಷ್ಯ ಎರಡನ್ನೂ ನಿರ್ಣಯ ಮಾಡಬೇಕಾದರೆ ವರ್ತಮಾನದಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು. ಇದೊಂದು ವಿಶಿಷ್ಟಪೂರ್ಣ ಸ್ಥಳ. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಸುಮಾರು ಏಳೆಂಟು ವರ್ಷ ಚಿಂತನೆ ಮಾಡಿ, ಈ ಸ್ಥಳ ಇಷ್ಟು ಸುಂದರವಾಗಿ ನಿರ್ಮಿಸಲು ಪರಿಕಲ್ಪನೆ ಹುಟ್ಟಿತು. ಚಂದ್ರಶೇಖರ ಕಂಬಾರರು ಕನ್ನಡ ವಿವಿ ಮೊದಲ ಕುಲಪತಿಗಳು ನನಗೆ ಮಾರ್ಗದರ್ಶಕರೂ ಆತ್ಮೀಯರೂ ಹೌದು ಎಂದು ಸ್ಮರಿಸಿದರು.
ಕನ್ನಡ ಹಲವಾರು ಆಯಾಮಗಳಲ್ಲಿವೆ. ಜಾನಪದದಲ್ಲಿ, ದಾಸ ಸಾಹಿತ್ಯ, ವಚನ ಸಾಹಿತ್ಯ, ಹಳೆಗನ್ನಡ, ನವಗನ್ನಡ,ವೈಚಾರಿಕ, ವ್ಯವಹಾರಿಕ, ಬಂಡಾಯ ಮುಂತಾದ ಪ್ರಾಕಾರಗಳಲ್ಲಿದೆ. ಇವೆಲ್ಲವೂ ವಿವಿಯ ಒಂದು ಪ್ರಮುಖ ಅಂಗವಾಗಬೇಕು, ಆಗ ಇಡೀ ವಿಶ್ವಕ್ಕೆ ವಿವಿಯ ಚಟುವಟಿಕೆ ಪರಿಚಯವಾಗುತ್ತದೆ. ಕನ್ನಡ ನಾಡಿನಲ್ಲಿ , ಜಾನಪದ, ಕನ್ನಡ ಸಂಗೀತ, ಸಾಂಸ್ಕøತಿಕ ವಿಶ್ವವಿದ್ಯಾಲಯ ಇದೆ. ವಿವಿಗೆ ದೊಡ್ಡ ಶಕ್ತಿಯನ್ನು ತುಂಬುವ ಅವಕಾಶ ಒದಗಿಬಂದಿದೆ ಎಂದರು.





















































