ಬೆಂಗಳೂರು; ಭಾರತೀಯರು ಒಂದು ಎಂಬ ಸಂದೇಶ ಸಾರುವುದು ಹರ್ ಘರ್ ತಿರಂಗಾ ಅಭಿಯಾನದ ಉದ್ದೇಶ. ಎಲ್ಲರೂ ಒಂದಾಗಿ, ಜಾತಿ ಮತ ಪಂಥ ಎಂಬ ಬೇಧವಿಲ್ಲದೆ ಸ್ವಾತಂತ್ರೋತ್ಸವವನ್ನು ಆಚರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ಅಭಿಯಾನ ಪ್ರಾರಂಭವಾಗಿದೆ. ಹರ್ ಘರ್ ತಿರಂಗಾ ಮತ್ತು 75 ನೇ ಸ್ವಾತಂತ್ರೋತ್ಸವದ ಆಚರಣೆ ಈಗಾಗಲೇ ಪ್ರಾರಂಭವಾಗಿದೆ.ಪ್ರತಿ ಊರಿನಲ್ಲೂ ಕೂಡ ಜಿಲ್ಲೆಗಳಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಧ್ವಜವನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ, ಉತ್ಸಾಹವಿದೆ. ಇಂದಿನಿಂದ15 ರವರೆಗೆ ಪ್ರತಿ ಮನೆಯಲ್ಲಿ ಧ್ವಜ ಹಾರಾಡಬೇಕು ಎನ್ನುವುದು ನಮ್ಮ ಆಶಯ. ರಾಜ್ಯ ಸರ್ಕಾರ 1ಕೋಟಿ 8 ಲಕ್ಷ ಧ್ವಜಗಳನ್ನು ವಿತರಣೆ ಮಾಡಿದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ 400 ರಿಂದ 500 ಧ್ವಜ ವಿತರಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳೂ ಧ್ವಜ ವಿತರಣೆ ಮಾಡಿದ್ದು, 1 ಕೋಟಿ 20 ಲಕ್ಷ ಧ್ವಜ ಕರ್ನಾಟಕದಲ್ಲಿ ವಿತರಣೆಯಾಗಿದೆ. ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತೀಯರು ಒಂದು. ದೇಶಭಕ್ತರು ಭಾರತದ ಭವ್ಯ ಭವಿಷ್ಯಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದು ನಿರೂಪಿಸಬೇಕು ಎಂದರು.
75 ವರ್ಷ ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡಿಕೊಳ್ಳಲು ಮಹತ್ವದ ಘಟ್ಟ. ಇನ್ನು 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಮಂತ್ರಿಗಳು ಕರೆದಿದ್ದಾರೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ, ಸಂಪದ್ಭರಿತವಾಗಿಸಿ, ಭಾರತ್ ವಿಶ್ವಮಾನ್ಯವಾಗುವ ರೀತಿಯಲ್ಲಿ ಮಾಡುವ ಸಂಕಲ್ಪ ನಮ್ಮದು. ಅದೇ ರೀತಿ ಆಗಸ್ಟ್ 15 ರಂದು ಕೂಡ ವಿಜ್ರಂಭಣೆಯಿಂದ ಆಚರಣೆ ಮಾಡಲಾಗುವುದು ಎಂದರು


























































