ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ವಿವಿಧೆಡೆ ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಸಾವನ್ನಪ್ಪಿದ್ದಾತೆ. ಬಹುತೇಕ ಮಂದಿ ಮತದಾನ ಮಾಡಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿದೆ. ದೇಶದಲ್ಲಿ ಎರಡನೇ ಹಂತದ ಮತದಾನವಾಗಿದ್ದರೂ ಕರ್ನಾಟಕದಲ್ಲಿ ಇದು ಆರಂಭದ ಹಂತದ ಮತದಾನ. ಈ ಸಂದರ್ಭದಲ್ಲಿ ಹೃದಯಾಘಾತ, ವಯೋಸಹಜ ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ದೊಡ್ಡಬಳ್ಳಾಪುರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ 35 ವರ್ಷದ ಕವಿತಾ ಎಂಬವರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಟ್ಟೆಪ್ಪನ ಹಳ್ಳಿ ಸಮೀಪದ ಮತಗಟ್ಟೆಯಲ್ಲಿ ಚುನಾವಣ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ 58 ವರ್ಷದ ಯಶೋದಮ್ಮ ಎಂಬವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆ ತಿಪ್ಪೂರಿನಲ್ಲಿ 90 ವರ್ಷದ ಪುಟ್ಟಮ್ಮ ಎಂಬವರು ಮತದಾನ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೊಡಗು ಜಿಲ್ಲೆ ಕೊಂಗಣ ಗ್ರಾಮದ ನಿವಾಸಿ 58 ವರ್ಷದ ಪದಾರ್ಥಿ ಮನೋಹರ್ ಎಂಬವರು ಮತದಾನ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಸಮೀಪದ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಶತಾಯುಷಿ, 103 ವರ್ಷ ಹರೆಯದ ಸತ್ತೇಗೌಡ ದೊಡ್ಡೇಗೌಡ ಎಂಬವರು ಮತದಾನ ಮಾಡಿ ಮರಳಿದ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಜಿಲ್ಲೆ ಎಚ್.ಕೆ.ವಿ. ನಗರದ ನಿವಾಸಿ 92 ವರ್ಷ ಹರೆಯದ ಕುಂದೂರಯ್ಯ ಎಂಬವರು ಮತ ಚಲಾಯಿಸಿದ ನಂತರ ವಿಧಿವಶರಾಗಿದ್ದಾರೆ. ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ಬಟ್ಟೆ ವ್ಯಾಪಾರಿ 54 ವರ್ಚದ ರಮೇಶ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.







































































