ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳು ಅತಿವೃಷ್ಠಿಯಿಂದ ತತ್ತರಿಸುತ್ತಿವೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನ ಪ್ರವಾಹ ಅವಾಂತರವನ್ನೇ ಸೃಷ್ಟಿಮಾಡಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸುರತ್ಕಲ್, ಮಂಗಳೂರು ನಗರ ಉತ್ತರದ ನೇರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು, ಸಚಿವರುಗಳು “ಬಂದ ಪುಟ್ಟ ಹೋದ ಪುಟ್ಟ” ಎಂಬಂತೆ ನೆರೆ ಪೀಡಿತ ಪ್ರದೇಶಗಳಿಗೆ ಫ್ಯಾಶನ್ ಶೋ ಗೆ ಭೇಟಿ ಕೊಟ್ಟಿದ್ದು ಮಾತ್ರ. ಆದರೆ ಇಲ್ಲಿವರೆಗೂ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ನೊಂದವರಿಗೆ ನೆರವು ನೀಡಲಿಲ್ಲ. ನಿರಾಶ್ರಿತರಿಗೆ ನೀಡಿರುವ ಭರವಸೆಗಳು ನಿರಾಸೆಗೊಳಿಸಿವೆ ಎಂದವರು ಹೇಳಿದ್ದಾರೆ.
ಪಚ್ಚನಾಡಿ, ಗುರುಪುರ, ಮಿನಕಳಿ, ಉಳ್ಳಾಲ, ಸುರತ್ಕಲ್, ಸೋಮೇಶ್ವರ ಗ್ರಾಮ, ಬೆಟ್ಟಂಪಾಡಿ, ಬೈಕಂಪಾಡಿ, ಅದ್ಯಪಾಡಿ ಸೇರಿದಂತೆ ಇನ್ನಿತರೆ ಮಳೆಯಿಂದ ಹಾನಿಗೊಳಿಗಾಗಿರುವ ಹಾಗೂ ಕಡಲ್ಕೊರೆತದಿಂದ ಅಪಾಯದಲ್ಲಿರುವ ಪ್ರದೇಶಗಳಿಗೆ ಭೇಟಿ ಮಾಡಿದೆ. ಬಹುತೇಕ ಕಡೆ ಇಲ್ಲಿವರೆಗೂ ನಿರಾಶ್ರಿತರಿಗೆ ಪ್ರಾಥಮಿಕ ಸೌಲಭ್ಯವೂ ಕಲ್ಪಿಸದೆ ಅಮಾನವೀಯವಾಗಿ ನಡೆದುಕೊಂಡಿರುವುದು ದುರಂತ ಎಂದವರು ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ನೆರೆ ಸಂದರ್ಭದಲ್ಲಿ ಗುರುಪುರದ ಗ್ರಾಮಪಂಚಾಯಿತಿ ವ್ಯಾಪ್ತಿಯ 70ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಿಸುವಾಗ ಮನೆ ಕಟ್ಟಿ ಕೊಡುವ ಭರವಸೆಯನ್ನ ನೀಡಿ, ಬಾಡಿಗೆ ಮನೆ ನಿವಾಸಿಗಳಿಗೆ ತಿಂಗಳಿಗೆ ಹತ್ತು ಸಾವಿರ ರೂಗಳ ಸಹಾಯ ನೀಡುವ ಭರವಸೆ ನೀಡಿತ್ತು. ಆದ್ರೆ ಇಲ್ಲಿವರೆಗೂ ಈ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ. ಪರಿಹಾರ ನೀಡುವುದರಲ್ಲಿಯೂ ಬೆರಳಣಿಕೆ ಕುಟುಂಬಗಳಿಗೆ ಪರಿಹಾರ ನೀಡಿ ತಾರತಮ್ಯ ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದೆ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ನೀಡಿದ್ದ ಭರವಸೆಯನ್ನ ಈಡೇರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಡಲ್ಕೊರೆತ ಪ್ರದೇಶಗಳ ಕುಟುಂಬಗಳು ಪ್ರತಿ ಕ್ಷಣವೂ ಜೀವ ಕೈಲಿ ಹಿಡಿದುಕೊಂಡಿವೆ. ಜಿಲ್ಲಾಡಳಿತ ಕೂಡಲೇ ಅಂತಹ ಪ್ರದೇಶಗಳನ್ನ ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ನಿರಾಶ್ರಿತರು ಹಾಗೂ ಅಪಾಯದಲ್ಲಿರುವವರಿಗೆ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ನಿಧಿ ಕೇವಲ ಎರಡೊತ್ತಿನ ಊಟಕ್ಕೆ ಮಾತ್ರ ಸೀಮಿತವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ವಿಶೇಷ ಪರಿಹಾರ ನಿಧಿಯನ್ನ ಘೋಷಿಸಿ, ಸಂಪೂರ್ಣವಾಗಿ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಸಂಪೂರ್ಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರದ ಶಾಸಕರುಗಳೇ ತಮ್ಮ ಸರ್ಕಾರ ಹಾಗೂ ಮಂತ್ರಿಗಳ ಕಾರ್ಯವೈಖರಿಯನ್ನ ಬಹಿರಂಗವಾಗಿ ಖಂಡಿಸುತ್ತಿದ್ದಾರೆ. ಇಡೀ ಸರ್ಕಾರ ಹಾಗೂ ಮಂತ್ರಿ ಮಂಡಲ ಬರೀ ಕಮಿಷನ್ ವ್ಯವಹಾರಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಬಹುತೇಕ ಮಂತ್ರಿಗಳು ಬೆಂಗಳೂರು ಬಿಟ್ಟು ಅಲುಗಾಡುತ್ತಿಲ್ಲ. ಕೂಡಲೇ ಮೈ ಚಳಿ ಬಿಟ್ಟು ನೆರೆಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ನೆರವಾಗಬೇಕೆಂದು ಆಗ್ರಹಿಸಿದ್ದಾರೆ.


















































