ಗಾಂಧಿ ಕುಟುಂಬದಿಂದ ಮಾತ್ರ ಈ ದೇಶವನ್ನು ಒಟ್ಟಾಗಿ ಮುಂದೆ ಕೊಂಡೊಯ್ಯಲು ಸಾಧ್ಯ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದಿಗೂ ಬದಲಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ನಡುವೆ ಮೈಸೂರಿನ ಬದನವಾಳುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮಹಾತ್ಮ ಗಾಂಧಿ, ನೆಹರೂ, ಸರೋಜಿನಿ ನಾಯ್ಡು, ಭಗತ್ ಸಿಂಗ್ ಸೇರಿದಂತೆ ಹಲವು ವೀರ ಹೋರಾಟಗಾರರು ದೇಶವನ್ನು ಒಗ್ಗೂಡಿಸಿದ್ದರು. ಈಗ ದೇಶದ ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿ ಅವರು ಈ ಭಾರತ ಐಕ್ಯತಾ ಯಾತ್ರೆ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ನಿರ್ಮಾಣವಾಗಿರುವುದೇಕೆ ಎಂಬುದರ ಬಗ್ಗೆ ಜನರ ಜತೆ ರಾಹುಲ್ ಗಾಂಧಿ ಚರ್ಚಿಸುತ್ತಿದ್ದಾರೆ ಎಂದರು.
ಗಾಂಧಿ ಕುಟುಂಬದಿಂದ ಮಾತ್ರ ಈ ದೇಶವನ್ನು ಒಟ್ಟಾಗಿ ಮುಂದೆ ಕೊಂಡೊಯ್ಯಲು ಸಾಧ್ಯ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದಿಗೂ ಬದಲಾಗುವುದಿಲ್ಲ. ದೇಶದ ಏಳಿಗೆಗೆ ಕಾಂಗ್ರೆಸ್ ಶ್ರಮಿಸಲಿದ್ದು, ಇಡೀ ದೇಶ ಕಾಂಗ್ರೆಸ್ ಗೆ ಬೆಂಬಲವಾಗಿ ನಿಲ್ಲಲಿದೆ. ನಮಲ್ಲಿ ಜಾತಿ, ಧರ್ಮ, ಭಾಷೆ, ಬಣ್ಣದ ತಾರತಮ್ಯವಿರುವುದಿಲ್ಲ. ನಾವೆಲ್ಲರೂ ಒಂದೇ ಎಂದರು.
ಪೇಸಿಎಂ ಟಿಶರ್ಟ್ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಬಂಧನದ ಬಗ್ಗೆ ಪ್ರಶ್ನಿಸಿದಾಗ, ‘ನಾವು ಶಕ್ತಿಶಾಲಿಯಾದಷ್ಟು ಶತ್ರುಗಳು ಹೆಚ್ಚು, ಬಿಜೆಪಿಯವರ ಬಳಿ ಅಧಿಕಾರ ಇರಬಹುದು, ಅವರು ಸಮಾಜ ಒಡೆಯಲು ಪ್ರಯತ್ನಿಸಬಹುದು, ನಮಗೆ ನಿತ್ಯ ಕಿರುಕುಳ ನೀಡಬಹುದು. ಆದರೆ ಕಾಂಗ್ರೆಸ್ ಪಕ್ಷದ ಶಕ್ತಿಗೆ ಸರಿಸಮನಾಗಲು ಸಾಧ್ಯವಿಲ್ಲ. ಬಿಜೆಪಿ ಏನೇ ಮಾಡಿದರೂ ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.
ಯಾತ್ರೆಯಲ್ಲಿ ಭಾಗವಹಿಸುವ ಜನರು ಮತವಾಗಿ ಪರಿವರ್ತನೆ ಆಗುತ್ತಾರಾ ಎಂಬ ಪ್ರಶ್ನೆಗೆ, ‘ಮತದಾನ ಬೇರೆ ವಿಚಾರ. ನಾವು ನಮ್ಮ ಸಿದ್ಧಾಂತವನ್ನು ಬಿಟ್ಟುಕೊಡುವುದಿಲ್ಲ’ ಎಂದರು.
ಇಷ್ಟು ದೊಡ್ಡ ಯಾತ್ರೆ ಆಯೋಜನೆ ಸಮಯದಲ್ಲಿ ಇಡಿ, ಸಿಬಿಐ ವಿಚಾರಣೆ ಕುರಿತು ಕೇಳಿದಾಗ, ‘ನನ್ನ ವಿರುದ್ಧ ಯಾವುದೇ ಪ್ರಕರಣ ಇದ್ದರೂ ಅದರ ವಿಚಾರಣೆಗೆ ನಾನು ಸಹಕಾರ ನೀಡುತ್ತೇನೆ. ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಪ್ರಕರಣವನ್ನು ಮಾತ್ರ ಸಿಬಿಐಗೆ ವಹಿಸಿದ್ದಾರೆ. ಆದರೆ ಬೇರೆಯವರ ಪ್ರಕರಣಗಳನ್ನು ಎಸಿಬಿ ಮಟ್ಟದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಿಬಿಐಗೆ ವಹಿಸುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರು ಸಲಹೆ ನೀಡಿದ್ದರೂ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ರಾಜಕೀಯವಾಗಿ ನನಗೆ ಕಿರುಕುಳ ನೀಡಲು ಈರೀತಿ ಮಾಡುತ್ತಿದ್ದಾರೆ. ನನ್ನ ಕುಟುಂಬ ಸದಸ್ಯರ ಆಸ್ತಿ ಸರ್ಕಾರಿ ಆಸ್ತಿಯಲ್ಲ. ಪ್ರಕಿಯೊಬ್ಬರೂ ತಮ್ಮದೇ ಆದ ಆದಾಯ ಹೊಂದಿದ್ದು, ಪ್ಯಾನ್ ಸಂಖ್ಯೆ ಹೊಂದಿದ್ದಾರೆ. ನಾನು ಎಲ್ಲವನ್ನು ತನಿಖಾಧಿಕಾರಿಗಳಿಗೆ ವಿವರಿಸಿದ್ದು, ಅವರು ಈ ನೆಲದ ಕಾನೂನನ್ನು ಅರ್ಥಮಾಡಿಕೊಳ್ಳಬೇಕು. ನನಗೆ ಕಿರುಕುಳ ನೀಡುವ ಬದಲು ಕಾನೂನು ರೀತಿಯಲ್ಲಿ ವಿಚಾರಣೆ ಮಾಡಬೇಕು’ ಎಂದು ತಿಳಿಸಿದರು.
ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ನನಗೆ ಅ. 7 ರಂದು ವಿಚಾರಣೆಗೆ ಬರುವಂತೆ ನೊಟೀಸ್ ನೀಡಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಿದ ನಂತರ ನನಗೆ ವಿಚಾರಣೆಗೆ ಕರೆದಿದ್ದಾರೆ. ನನ್ನ ಮೇಲೆ ಬೇರೆ ಪ್ರಕರಣಗಳ ಜತೆಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ಜೋಡೋ ಯಾತ್ರೆ ಸಮಯದಲ್ಲಿ ನನಗೆ ಹಾಗೂ ನನ್ನ ಸಹೋದರನಿಗೆ ನೊಟೀಸ್ ನೀಡಲಾಗಿದೆ. ನಾನು ವಿಚಾರಣೆಗೆ ಸಹಕಾರ ನೀಡುತ್ತೇನೆ. ಆದರೆ ಅ. 7 ರಂದು ರಾಹುಲ್ ಗಾಂಧಿ ಅವರ ಜತೆಗೆ ನಮ್ಮ ಸಮಾಜದ ಆದಿ ಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಇದು ಬಹಳ ಮುಖ್ಯ ಕಾರ್ಯಕ್ರಮ. ನಾನು ಮಠದಲ್ಲಿ ಇರಲೇಬೇಕಾದ ಅನಿವಾರ್ಯವಿದೆ. ಈಗಿನ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲಾವಕಾಶ ಕೇಳುತ್ತೇನೆ. ಇಡಿ ಅಧಿಕಾರಿಗಳು ನಮ್ಮ ಪರಿಸ್ಥಿತಿ ಅರಿತು ಸಮ್ಮತಿಸುವ ವಿಶ್ವಾಸವಿದೆ’ ಎಂದರು.



















































