ಬೆಂಗಳೂರು: ಚಿತ್ರದುರ್ಗ ನಗರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಭಾರೀ ದಾಳಿಯಲ್ಲಿ ಅಕ್ರಮ ಆನ್ಲೈನ್–ಆಫ್ಲೈನ್ ಬೆಟ್ಟಿಂಗ್ ಜಾಲ ಬಯಲಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ.
ಇಡಿ ಪ್ರಕಟಣೆಯ ಪ್ರಕಾರ, ಚಿತ್ರದುರ್ಗ ಜಿಲ್ಲೆಯಲ್ಲಿ ಆರು, ಬೆಂಗಳೂರಿನಲ್ಲಿ 10, ಹುಬ್ಬಳ್ಳಿಯಲ್ಲಿ ಒಂದು, ಮುಂಬೈನಲ್ಲಿ ಎರಡು, ಜೋಧ್ಪುರದಲ್ಲಿ ಮೂರು ಹಾಗೂ ಗೋವಾದಲ್ಲಿ ಎಂಟು ಆವರಣಗಳ ಮೇಲೆ ದಾಳಿ ನಡೆದಿದೆ. ಗೋವಾದ ಐದು ಕ್ಯಾಸಿನೊಗಳು — ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ — ಕೂಡಾ ಶೋಧಕ್ಕೆ ಒಳಪಟ್ಟಿವೆ.
ಆನ್ಲೈನ್ ಸೈಟ್ಗಳ ಮೂಲಕ ಬೆಟ್ಟಿಂಗ್
ತನಿಖೆಯಲ್ಲಿ ಶಾಸಕರೇ King567, Raja567, Puppy’s003 ಮತ್ತು Rathna Gaming ಎಂಬ ಹೆಸರಿನಲ್ಲಿ ಆನ್ಲೈನ್ ಬೆಟ್ಟಿಂಗ್ ಸೈಟ್ಗಳನ್ನು ನಿರ್ವಹಿಸುತ್ತಿದ್ದ ವಿಚಾರ ಬಯಲಾಗಿದೆ.
ವೀರೇಂದ್ರ ಅವರ ಸಹೋದರ ಕೆ.ಸಿ. ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್ಎಸ್ ಟೆಕ್ನಾಲಜೀಸ್, ಪ್ರೈಮ್9 ಟೆಕ್ನಾಲಜೀಸ್ ಎಂಬ ಮೂರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇವು ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ಕಾರ್ಯಾಚರಣೆಗಳಿಗೆ ಸಂಪರ್ಕ ಹೊಂದಿವೆ ಎಂದು ಇಡಿ ಹೇಳಿಕೆ ತಿಳಿಸಿದೆ.
ದಾಳಿಯ ಸಂದರ್ಭದಲ್ಲಿ, ರಾಜರಾಜೇಶ್ವರಿನಗರದ ಕಾಂಗ್ರೆಸ್ ನಾಯಕಿ ಕುಸುಮಾ ಎಚ್. ಅವರ ಸಹೋದರ ಅನಿಲ್ ಗೌಡರಿಗೂ ಈ ಜಾಲದ ಸಂಪರ್ಕವಿದೆ ಎಂದು ಪತ್ತೆಯಾಗಿದೆ.
2016ರಲ್ಲಿ ವೀರೇಂದ್ರ ಜೆಡಿಎಸ್ ಶಾಸಕರಾಗಿದ್ದಾಗ, ಚಳ್ಳಕೆರೆಯ ಮನೆಯಲ್ಲಿ ನಡೆದ ದಾಳಿಯಲ್ಲಿ 5.7 ಕೋಟಿ ರೂ. ನಗದು, 32 ಕೆಜಿ ಚಿನ್ನದ ಬಿಸ್ಕತ್ತುಗಳು ಮತ್ತು 90 ಲಕ್ಷ ರೂ. ಹಳೆಯ ನೋಟುಗಳು ಪತ್ತೆಯಾಗಿದ್ದವು. ಸ್ನಾನಗೃಹದ ಗೋಡೆಯೊಳಗೆ ಅಡಗಿಸಿಟ್ಟಿದ್ದ ಈ ಆಸ್ತಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಆ ಪ್ರಕರಣದಲ್ಲಿ ವೀರೇಂದ್ರ, ಇಬ್ಬರು ಮಧ್ಯವರ್ತಿಗಳು ಹಾಗೂ ನಾಲ್ಕು ಬ್ಯಾಂಕ್ಗಳ ಅಜ್ಞಾತ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ನಂತರದ ಸಿಬಿಐ ತನಿಖೆಯಲ್ಲಿ, 5.76 ಕೋಟಿ ರೂ. ರದ್ದಾದ ನೋಟುಗಳನ್ನು 2000 ಮತ್ತು 500 ರೂಪಾಯಿ ಹೊಸ ನೋಟುಗಳಿಗೆ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಬದಲಾಯಿಸಿದ್ದ ಆರೋಪ ಹೊರಬಂದಿತ್ತು.




























































