ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರಂಟಿ ಯೋಜನೆಗಳು ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರಕ್ಕಿಂತ ಬಹಳ ಉತ್ತಮ ಎಂದು ಅರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಬ್ ಹಾಗೂ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಚುನಾವಣೆ 4 ಗ್ಯಾರಂಟಿ ಯೋಜನೆ ಹಾಗೂ 40% ಕಮಿಷನ್ ನಡುವಣ ಸಮರ. ಹೀಗಾಗಿ ರಾಜ್ಯದ ಪ್ರಗತಿ, ಕನ್ನಡದ ಅಸ್ಮಿತೆ ಉಳಿಸಲು, ಕರ್ನಾಟಕ ಏಷ್ಯಾದ ಸಿಲಿಕಾನ್ ವ್ಯಾಲಿಯನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಜನರಿಗೆ ಅರಿವಾಗಿದೆ ಎಂದರು.
ಚಿಂತಾಮಣಿಯ ಡಾ.ವಿ. ಅಮರನಾಥ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಉಳಿದಂತೆ ಮಹದೇಪುರದಿಂದ ಹುಡಿ ರಾಮಚಂದ್ರ, ಡಾ.ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ.ಎಂ ಮುನಿರಾಜು, ಪರಮೇಶ್ವರ್ ಅವರು ಪಕ್ಷ ಸೇರುತ್ತಿದ್ದಾರೆ. ಆಮೂಲಕ 40% ಕಮಿಷನ್ ವಿರುದ್ಧದ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ ಎಂದು ಗೌರವ್ ವಲ್ಲಬ್ ತಿಳಿಸಿದರು.
ಎಲ್ ಹನುಮಂತಯ್ಯ ಮಾತನಾಡಿ, ಚಿಂತಾಮಣಿ ಹಾಗೂ ಮಹದೇಪುರ ಕ್ಷೇತ್ರದಿಂದ ಅತ್ಯಂತ ಕ್ರಿಯಾಶೀಲ ನಾಯಕರು ಪಕ್ಷ ಸೇರುತ್ತಿದ್ದಾರೆ. ಅಮರ್ ನನಗೆ ಬಹಳ ವರ್ಷಗಳಿಂದ ಪರಿಚಯವಿರುವ ವ್ಯಕ್ತಿ. ಜನತಾದಳದ ಎಸ್ ಸಿ ಮೋರ್ಚಾದ ಯುವ ಘಟಕ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಆಮೂಲಕ ನಮ್ಮ ಚಿಂತಾಮಣಿಯ ಅಭ್ಯರ್ಥಿ ಸುಧಾಕರ್ ಎಂಸಿಜಿ, ಅವರ ಗೆಲುವು ಇಂದು ಮತ್ತಷ್ಟು ನಿಶ್ಚಿತವಾಗಿದೆ ಎಂದರು.
ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ಒಪ್ಪಿ ರಾಮಚಂದ್ರ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಡಾ.ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ.ಎಂ ಮುನಿರಾಜು, ಪರಮೇಶ್ವರ್ ಅವರು ಯಾವುದೇ ಆಸೆ ಆಮೀಷಗಳಿಲ್ಲದೇ, ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಇದರಿಂದ ಪಕ್ಷದ ಬಲ ಹೆಚ್ಚಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದ ಅನೇಕ ಕ್ಷೇತ್ರಗಳ ನಾಯಕರು ಅದರಲ್ಲೂ ಯುವಕರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮುಂದಾಗಿರುವುದು ಬಹಳ ಉತ್ತಮ ಬೆಳವಣಿಗೆ. ಇಂದು ಪಕ್ಷ ಸೇರುತ್ತಿರುವವರು ಯುವಕರಾಗಿದ್ದು, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಹೆಚ್ಚಿಗಿದೆ ಎಂದರು.