ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಜನ ಹಿತ ಕ್ರಮಗಳನ್ನು ಕೈಗೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ, ರಾಜ್ಯದ ಜನರನ್ನು ಲಾಕ್ಡೌನ್ ದಿಗ್ಬಂಧನದಿಂದ ಬಿಡುಗಡೆ ಮಾಡಲು ಕಸರತ್ತು ನಡೆಸುತ್ತಿದೆ. ಅನ್ಲಾಕ್ 2.0 ಪ್ರಕ್ರಿಯೆ ವೇಳೆ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಜನಸ್ನೇಹಿ ನಿರ್ಧಾರಕ್ಕೆ ಬರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಕೋವಿಡ್ 19 ವೈರಾಣು ಸೋಂಕು ತಡಯುವ ಸಂಬಂಧ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಕಠಿಣ ನಿಯಮ ಸಡಿಲಗೊಳಿಸಲಾಗುತ್ತಿದೆ. ಈ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು 11 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಕಡೆ ಭಾಗಶಃ ಲಾಕ್ಡೌನ್ ಭಾಗಶಃ ತೆರವಾಗಿದೆ.
ಈ ನಡುವೆ ಈ ತಿಂಗಳ 21ರಿಂದ ಜನರು ಮತ್ತಷ್ಟು ನಿರಾಳರಾಗಲಿದ್ದಾರೆ. ಈ ವರೆಗೂ ಅಗತ್ಯ ವಸ್ತುಗಳ ಮಾರಾಟಕ್ಕಷ್ಟೇ ಅನುಮತಿ ಇದೆ. ಜೂನ್ 21ರ ನಂತರ ಬಟ್ಟೆ ಅಂಗಡಿ, ಸಲೂನ್, ಸಣ್ಣ ಮಾರುಕಟ್ಟೆ ಸಹಿತ ವಾಣಿಜ್ಯ ಇತರೇ ಮಳಿಗೆಗಳನ್ನೂ ತೆರೆಯಲು ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ವಾಣಿಜ್ಯ ಚಟುವಟಿಕೆಗಳು ಪುನರಾರಂಭವಾಗುವ ನಿರೀಕ್ಷೆ ಇದೆ.
ಜೊತೆಗೆ, ಮದುವೆ ಸಮಾರಂಭಕ್ಕಿರುವ ನಿರ್ಬಂಧಗಳೂ ಸಡಿಲವಾಗಲಿದೆ. ಬಸ್ ಸಹಿತ ಸಾರಿಗೆ ವ್ಯವಸ್ಥೆಯನ್ನೂ ಸುಗಮಗೊಳಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.