ಉಡುಪಿ: ಲೋಕಸಭಾ ಚುನಾವಣಾ ಇದೀಗ ಕ್ಲೈಮ್ಯಾಕ್ಸ್ ಹಂತದತ್ತ ಸಾಗಿದೆ. ಜನಸಾಮಾನ್ಯರ ಮತ ಗಳಿಕೆಗಾಗಿ ಸರ್ಕಸ್ ನಡೆಸುತ್ತಿರುವ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಾಯಕರು ಪ್ರಚಾರದ ಅಖಾಡದಲ್ಲಿ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಮೇಲಾಟವನ್ನು ಜನಸಾಮಾನ್ಯರೂ ತಮ್ಮದೇ ಆದ ರೀತಿಯಲ್ಲಿ ಗಮನಿಸುತ್ತಿದ್ದು ತಮ್ಮ ಮತ ಯಾರಿಗೆ ಎಂಬವುದನ್ನು ಗುಪ್ತವಾಗಿರಿಸಿದ್ದಾರೆ.
ಕರಾವಳಿ-ಮಲೆನಾಡನ್ನು ಹೊಂದಿಕೊಂಡಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಹಗ್ಗಜಗ್ಗಾಟವು ಕುತೂಹಲದ ಕೇಂದ್ರಬಿಂದುವಾಗಿದೆ. ಈ ವರೆಗೂ ಸಂಸದರಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಜನರ ಗೋಬ್ಯಾಕ್ ಅಭಿಯಾನ ನಂತರ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದಾರೆ. ಅವರ ಸ್ಥಾನಕ್ಕೆ ಬಿಜೆಪಿಯಿಂದ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಜಯಪ್ರಕಾಶ್ ಹೆಗ್ಡೆ ಸೆಣಸಾಟ ನಡೆಸುತ್ತಿದ್ದಾರೆ.
ಮತ್ತೊಮ್ಮೆ ಸಂಸತ್ ಪ್ರವೇಶದ ಆಸೆ..!
ಕಾಂಗ್ರೆಸ್ ಹುರಿಯಾಳು ಜಯಪ್ರಕಾಶ್ ಹೆಗ್ಡೆಯವರು ಈ ಭಾಗದ ಮುತ್ಸದ್ದಿ ರಾಜಕಾರಣಿ. ತಮ್ಮದೇ ಆದ ವ್ಯಕ್ತಿತ್ವದಿಂದ ನಾಡಿನ ಜನರ ಗಮನಕೇಂದ್ರೀಕರಿಸಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಮತದಾರರು ‘ಕೈ’ ಹಿಡಿಯುತ್ತಾರೆಯೇ ಎಂಬುದು ಅಖಾದಲ್ಲಿನ ಕುತೂಹಲ.
ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಒಂದೊಮ್ಮೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ನಂತರ ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ ಹೀಗೆ ವಿವಿಧ ಪಕ್ಷಗಳಲ್ಲಿ ಗುರುತಿಸಿ ವಿಧಾನಸಭೆ-ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷಾತೀತ ನಾಯಕರಾಗಿರುವ ಇವರು ಕರಾವಳಿ-ಮಲೆನಾಡಿನ ಜನರ ಪಾಲಿಗೆ ಪ್ರೀಯವಾದ ವ್ಯಕ್ತಿ ಎಂಬ ಮಾತಿದೆ. ಈ ವ್ಯಕ್ತಿತ್ವವೇ ಜಯಪ್ರಕಾಶ್ ಹೆಗ್ಡೆ ಅವರಿಗೆ ವರದಾನವಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಜಿ.ಎ.ಬಾವಾ.
ಕಳೆದೆರಡು ದಶಕಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಜಯಪ್ರಕಾಶ್ ಹೆಗ್ಡೆ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸುವವರು. ಸರಳ ವ್ಯಕ್ತಿತ್ವದ ಇವರು, ಜನರಿಗೆ ತಕ್ಷಣವೇ ಸಿಗುವ ಪ್ರತಿನಿಧಿ. ಹಿಂದೆ ಸಚಿವರಾಗಿದ್ದಾಗ ಕರಾವಳಿ ಮೀನುಗಾರರ ಬಹುತೇಕ ಆಶೋತ್ತರಗಳನ್ನು ಈಡೇರಿಸಿರುವ ಕೀರ್ತಿ ಇವರದ್ದು. ಹಾಗಾಗಿ ಮೀನುಗಾರ ಸಮೂಹ ಜಯಪ್ರಕಾಶ್ ಹೆಗ್ಡೆಅವರನ್ನೇ ನೆಚ್ಚಿಕೊಂಡಿದೆ ಎಂದು ಮಲ್ಪೆ ಮೀನುಗಾರರ ಸಂಘದ ಪ್ರಮುಖರು ಹೇಳಿಕೊಳ್ಳುತ್ತಿದ್ದಾರೆ.
ಹಿಂದೊಮ್ಮೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ಕೇವಲ ಎರಡು ವರ್ಷಗಳ ಅವಧಿಯಲ್ಲೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಕುಂದಾಪುರದಲ್ಲಿ ಮೇಲ್ಸೇತುವೆಗೆ ಕ್ರಮ, ಚತುಷ್ಪಥ ರಸ್ತೆ ನಿರ್ಮಾಣ, ಉಡುಪಿ-ಚಿಕ್ಕಮಗಳೂರು ನಡುವಿನ ರಾಜರಸ್ತೆ ವಿಸ್ತರಣೆ ಸಹಿತ ಹಲವಾರು ಯೋಜನೆಗಳಿಗೆ ಜಯಪ್ರಕಾಶ್ ಹೆಗ್ಡೆ ಅವರು ಮುನ್ನುಡಿ ಬರೆದಿದ್ದಾರೆ. ಸಮಾಜಸೇವಕರೂ, ಧರ್ಮನಿರಪೇಕ್ಷ ಆಸ್ತಿಕರೂ ಆಗಿರುವ ಇವರು ಎಲ್ಲಾ ಪಕ್ಷಗಳ ಕಾರ್ಯಕರ್ತರ ಪಾಲಿಗೆ ಅಜಾತ ಶತ್ರು ಎನಿಸಿಕೊಂಡವರು. ಹಾಗಾಗಿ ಎಲ್ಲಾ ಪಕ್ಷಗಳ ಮತದಾರರ ಆಶೀರ್ವಾದ ಜಯಪ್ರಕಾಶ್ ಹೆಗ್ಡೆಅವರ ಮೇಲಿದೆ ಎಂದು ಕ್ಷೇತ್ರದ ನಾಯಕರು ಹೇಳಿಕೊಂಡಿದ್ದಾರೆ.

ಪ್ರಚಾರದಲ್ಲಿ ಪ್ರತಿಧ್ವನಿ:
ಈ ನಡುವೆ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸೇರಿದಂತೆ ಅನೇಕ ನಾಯಕರು ನಿರಂತರ ಪ್ರಚಾರ ಕೈಗೊಂಡಿದ್ದಾರೆ. ಶುಕ್ರವಾರ ಉಡುಪಿ ಜಿಲ್ಲೆಯ ಹೆಬ್ರಿ ಸುತ್ತಮುತ್ತ ಮತಬೇಟೆ ಕೈಗೊಂಡ ಈ ನಾಯಕರು, ವಾರಾಂತ್ಯದ ಉಡುಪಿಯಲ್ಲಿ ಪ್ರಚಾರ ಸಭೆಯನ್ನು ನಡೆಸಿದ್ದಾರೆ. ಕಾರ್ಕಳದಿಂದ ಹೆಬ್ರಿಯವರೆಗೆ ವಾಹನ ಜಾಥಾ ನಡೆಯಿತು. ಕಾರ್ಕಳ ತಾಲೂಕಿನಲ್ಲಿ ಈ ಜಾಥಾ ಇತಿಹಾಸ ಎಂಬಂತಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದ ರೀತಿಯಲ್ಲೀ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಅಚ್ಚರಿಯ ಫಲಿತಾಂಶ ಬರಲಿದೆ ಎಂದರು. ಸಿದ್ದರಾಮಯ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿದ್ದು ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸ ಹೆಚ್ಚಿದೆ. ಜೊತೆಗೆ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಹಾಗಾಗಿ ಉಡುಪಿ-ಚಿಕ್ಕಮಗಳೂರು, ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಜಿ.ಎ.ಬಾವಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.