ಬೆಂಗಳೂರು: ‘ಕೇಂದ್ರದ ವೈಫಲ್ಯಗಳನ್ನು ರಾಹುಲ್ ಬಯಲು ಮಾಡಿದರೆ ಉತ್ತರಿಸಲಾಗದ ಮೋದಿ ಸರ್ಕಾರ ಧರ್ಮದ ಹೆಸರಿನಲ್ಲಿ ರಕ್ಷಿಸಿಕೊಳ್ಳಲು ಮುಂದಾಗಿದೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ ಭಾಷಣದ ವೇಳೆ ‘ಹಿಂದೂ’ ಹೆಸರಲ್ಲಿ ಬಿಜೆಪಿ ಮಾಡುತ್ತಿರುವ ರಾಜಕಾರಣ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ, ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರ ಟೀಕೆಗಳಿಗೆ ಮಾಜಿ ಶಾಸಕರೂ ಆದ ರಮೇಶ್ ಬಾಬು ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆದ ರಾಹುಲ್ ಗಾಂಧಿ ರವರು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಾಯದ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರಂಕುಶ ಅಧಿಕಾರದ ಅಡಿಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಮಾನ್ಯ ಮಾಡದೆ ಇಡೀ ಆಡಳಿತ ವ್ಯವಸ್ಥೆಗೆ ಮಸಿ ಬಳಿದಿರುವ ಮೋದಿ ಸರ್ಕಾರ, ತನ್ನ ತಪ್ಪುಗಳನ್ನು ತಿದ್ದುಕೊಂಡು ಜನರ ಧ್ವನಿಗೆ ಮಾನ್ಯತೆ ಕೊಡುವ ಬದಲು ವಿರೋಧ ಪಕ್ಷದ ನಾಯಕರ ಮಾತುಗಳನ್ನು ಅಲ್ಲೆಗೆಳೆಯುವ ಉದ್ಧಟತನ ತೋರುತ್ತಿದೆ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರರವರು ರಾಹುಲ್ ಗಾಂಧಿ ರವರ ಭಾಷಣವನ್ನು ಆಧಾರ ರಹಿತ ಸುಳ್ಳು ಆರೋಪ ಎಂದು ಟೀಕಿಸಿದ್ದಾರೆ. ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳಿದಂತೆ ಎನ್ನುವ ಗಾದೆ ಮಾತಿಗೆ ಅನುಗುಣವಾಗಿ ವಿಜಯೇಂದ್ರ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದ್ದಾರೆ ರಾಹುಲ್ ಗಾಂಧಿ ರವರು 5ನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು ಭಾರತ್ ಜೋಡೋ/ ನ್ಯಾಯಯತ್ರೆ ಮುಖಾಂತರ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತಿದ್ದಾರೆ ಎಂದವರು ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಿಂದೂ ಧರ್ಮ ಯಾವತ್ತೂ ದ್ವೇಷ ಮತ್ತು ಭಯವನ್ನು ಹರಡುವುದಿಲ್ಲ ಎಂದು ಹೇಳಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಿದೆ ಮತ್ತು ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ. ದುರ್ಬಲರ, ದಲಿತರ ಮತ್ತು ಅಲ್ಪ ಸಂಖ್ಯಾತರ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ರವರು ಸರ್ಕಾರದ ವೈಫಲ್ಯಗಳನ್ನು ಬೆತ್ತಲೆಗೊಳಿಸಿದರೆ ಉತ್ತರಿಸಲಾಗದ ಮೋದಿ ಸರ್ಕಾರ ಧರ್ಮದ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಯತ್ನಾಳರಂತ ನಾಯಕರಿಗೆ ಉತ್ತರ ನೀಡಲು ಸಾಧ್ಯವಾಗದೆ ಕದ್ದು ಓಡಾಡುವ ವಿಜಯೇಂದ್ರ ರಾಹುಲ್ ಗಾಂಧೀ ರವರ ಟೀಕೆಗೆ ಮುಂದಾಗಿರುವುದು ಅವರ ಫಲಾಯನ ವಾಡದ ಸಂಕೇತವಾಗಿದೆ. ಎ.ಕೆ.ಸುಬ್ಬಯ್ಯ ಅವರಿಂದ ನಳಿನ್ ಕುಮಾರ್ ಕಟೀಲ್ ವರೆಗೆ ಬಿಜೆಪಿಯಲ್ಲಿ ಅನೇಕರು ಅಧ್ಯಕ್ಷರಾಗಿದ್ದು, ವಿಜಯೇಂದ್ರರಂತಹ ವೈಫಲ್ಯದ ನಾಯಕರನ್ನು ಬಿಜೆಪಿ ಯಾವತ್ತೂ ಕಂಡಿರಲಿಲ್ಲ. ಬಿಜೆಪಿ ಗುಂಪುಗಾರಿಕೆಯೇ ಇವರ ನಾಯಕತ್ವದಲ್ಲಿ ಮಿತಿ ಮೀರಿದ್ದು, ಇವರು ಮತ್ತು ಆರ್. ಅಶೋಕ್ ರವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಇಂತಹ ಪೊಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ಲೋಕಸಭೆಯ ಸಮರ್ಥ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧೀಯವರನ್ನು ಟೀಕೆ ಮಾಡಿ ಶ್ರೀ ಬಿ. ವೈ. ವಿಜಯೇಂದ್ರ ರವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವುದಾದರೆ ಕಾಂಗ್ರೆಸ್ ಪಕ್ಷ ಅವರಿಗೆ ಶುಭ ಹಾರೈಸುತ್ತದೆ ಎಂದು ರಮೇಶ್ ಬಾಬು ಕುಟುಕಿದ್ದಾರೆ.