ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಅನನ್ಯ ನುಡಿಸುಗ್ಗಿಯ ಸಂಭ್ರಮ. ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಶ್ರೀಮಂತಿಕೆ ತುಂಬಿರುವ ಮಂಡ್ಯದ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಭಾನುವಾರ (ಜೂನ್10, 2024) ನಡೆದ ವಾರ್ಷಿಕ ನುಡಿಸುಗ್ಗಿ ಸಮಾರಂಭ ನಾಡಿನ ಗಮನಸೆಳೆಯಿತು. ಈ ಅನನ್ಯ ಕಾರ್ಯಕ್ರಮ ವಿವಿಧ ಕ್ಷೇತ್ರಗಳ ಗಣ್ಯರ ಸಮಾಗಮಕ್ಕೂ ಸಾಕ್ಷಿಯಾಯಿತು.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಒರೆಗಲ್ಲು’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಎಲ್ಲಿಲ್ಲದ ಸಮಾರಂಭ;
ಎಂದಿಲ್ಲದ ಸಂಭ್ರಮ
ಸರಸ್ವತ ಲೋಕದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಪ್ರತೀ ವರ್ಷವೂ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಪುಣ್ಯಸ್ಮರಣೆ ನಡೆಯುತ್ತದೆ. ಹಿರಿಯ ಐಪಿಎಸ್ ಅಧಿಕಾರಿ ಡಾ.ರವಿಕಾಂತೇಗೌಡ ಅವರ ಸಾರಥ್ಯದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಹೆಸರಲ್ಲಿ ಕಥಾಸಂಕಲನ ಪ್ರಶಸ್ತಿ ನೀಡಲಾಗುತ್ತಿದೆ. ಖ್ಯಾತ ಅಂಕಣಕಾರರೂ, ಕಥೆಗಾರರೂ ಆದ ಡಾ.ಬೆಸಗರಹಳ್ಳಿ ರಾಮಣ್ಣ ಅವರು ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದವರು. ಹಾಗಾಗಿ ಅವರ ಹೆಸರಲ್ಲಿ ಪ್ರತೀ ವರ್ಷ ಪ್ರಶಸ್ತಿ ಪ್ರದಾನದ ಜೊತೆ ಕಥಾಸಂಕಲನವನ್ನೂ ಅನಾವರಣ ಮಾಡಲಾಗುತ್ತಿದೆ. 2003ರಲ್ಲಿ ಇದು ಆರಂಭವಾಗಿರುವ ನುಡಿಸುಗ್ಗಿ. 2007ರಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಬಾರಿ 17ನೇ ಪ್ರಶಸ್ತಿಯನ್ನು ಪ್ರದಾನ ಮಾಡಿದ ಸನ್ನಿವೇಶ ನಾಡಿನ ಕುತೂಹಲದ ಕೇಂದ್ರಬಿಂದುವಾಯಿತು.
ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಹಿತಿಯೂ ಆದ ಡಾ.ಬಿ.ಆರ್.ರವಿಕಾಂತೇಗೌಡ, ಯುವ ಸಾಹಿತಿಗಳಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರನ್ನು ಗೌರವಿಸುವ ಉದ್ದೇಶ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಉದ್ದೇಶವಾಗಿದೆ ಎಂದರು. ಈ ವರೆಗೆ ನೀಡಿರುವ 17 ಪ್ರಶಸ್ತಿಗಳ ಪೈಕಿ ಹೆಚ್ಚಿನ ಪುರಸ್ಕಾರಗಳು ಲೇಖಕಿಯರಿಗೆ ನೀಡಲಾಗಿದೆ ಎಂದರು.
ಡಾ.ಬೆಸಗರಹಳ್ಳಿ ರಾಮಣ್ಣ ಅವರ ‘ಒರೆಗಲ್ಲು’ ಕೃತಿ ಸಂಕಲನದ ಮರು ಮುದ್ರಣವನ್ನು ಖ್ಯಾತ ಲೇಖಕ ಪ್ರೊ.ಕಾಳೇಗೌಡ ನಾಗವಾರ ಅವರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕನ್ನಂಬಾಡಿಯಿಂದ ಸಿರಿವಂತವಾಗಿರುವ ಮಂಡ್ಯದ ಲೇಖಕ ಡಾ.ಬೆಸಗರಹಳ್ಳಿ ರಾಮಣ್ಣರಿಂದ ಕಥಾಲೋಕವೂ ಸಿರಿವಂತಗೊಂಡಿದೆ ಎಂದರು. ಕುವೆಂಪು ಅವರು ಮಲೆನಾಡಿನ ದಿಗ್ಗಜರಾದರೆ, ಕಾರಂತರು ಕರಾವಳಿಯ ಹಿರಿಯರು. ಅವರಂತೆಯೇ ಡಾ.ರಾಮಣ್ಣ ಅವರು ಕಥಾಲೋಕದ ಸೊಬಗು ಎಂದು ಕೋಟಿಗಾನ ರಾಮಯ್ಯ ಬಣ್ಣಿಸಿದರು.
ಸಾಹಿತಿ ಪುಟ್ಟಸ್ವಾಮಿ ಮಾತನಾಡಿ, ದಿವಂಗತ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸಾಹಿತ್ಯ ಕೃಷಿಗೆ ನೀರೆರೆದ ಮಾಧ್ಯಮಗಳ ಹಾಗೂ ಲೇಖಕರ ಪ್ರಯತ್ನವನ್ನು ತೆರೆದಿಟ್ಟರು. ಜಾತಿ ವ್ಯವಸ್ಥೆಯ ವಿರುದ್ದದ ಪ್ರತಿಪಾದನೆ ಮೂಲಕ ವೈದ್ಯರೂ ಆದ ಬೆಸಗರಹಳ್ಳಿ ರಾಮಣ್ಣ ಅವರು ಕಥಾ ಪ್ರಪಂಚಕ್ಕೆ ಬಂದರು. ಮಾನವೀಯತೆಯ ಉದ್ದೀಪನೆಯ ಗುರಿ ಅವರದ್ದಾಗಿತ್ತು. ಸಮಕಾಲೀನ ಬರಹಗಳಿಗೆ ರಾಮಣ್ಣರು ಸೀಮಿತವಾಗಿರದೆ ಸಾಹಿತ್ಯ, ಸಂಸ್ಕೃತಿ, ಬದುಕಿನ ಚಿಂತನೆಗಳನ್ನು ಕೃತಿಗಳಲ್ಲಿ ಪ್ರತಿಬಿಂಭಿಸಿದರು ಎಂದು ವಿಮರ್ಷಿಸಿದ ಪುಟ್ಟಸ್ವಾಮಿ, ಡಾ.ಬೆಸಗರಹಳ್ಳಿ ರಾಮಣ್ಣರ ಬರಹಗಳು ವ್ಯಕ್ತಿಗಳನ್ನು ಪಾತಕದಿಂದ ಪಾರು ಮಾಡುವಂತಿದೆ ಎಂದರು.
ಪ್ರಶಸ್ತಿ ವಿಜೇತ ಕೃತಿ ಕುರಿತು ಮಾತನಾಡಿದ ವಿಮರ್ಶಕರಾದ ಆರ್.ಸುನಂದಮ್ಮ, ಹಣ ಅಧಿಕಾರದ ಹಿಂಸೆ ಹೆಚ್ಚಿದೆ. ಧ್ವೇಷವತನಿಸುವ ಪ್ರಯತ್ನ ಸಾಹಿತ್ಯದ ಮೂಲಕ ಸಾಧ್ಯವಿದೆ. ಹಾಗಾಗಿ ಪ್ರಸಕ್ತ ಸಂದರ್ಭದಲ್ಲಿ ಕಥೆಗಳು ಮೌಲ್ಯಯುತ ಎಂದೆನಿಸುತ್ತವೆ ಎಂದರು.
ಸಾಹಿತ್ಯಾಸಕ್ತರ ಈ ಜಾತ್ರೆಯಲ್ಲಿ ಸಂಗೀತ ಸಂಭ್ರಮವನ್ನು ಮುದನೀಡಿತು. ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಅವರ ಭಾವಗಾಯನಕ್ಕೆ ಸಭಿಕರು ತಲೆದೂಗಿದರು.
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಆರ್. ಸುಜಾತಾ, ಪ್ರತಿಷ್ಠಾನದ ಪ್ರಮುಖರಾದ ಡಿ.ಪಿ. ರಾಜಮ್ಮ, ಪ್ರಶಸ್ತಿ ಪುರಸ್ಕೃತ ಕೃತಿಯ ಲೇಖಕರಾದ ಸ್ವಾಮಿ ಪೊನ್ನಾಚಿ ಅವರನ್ನು ಸನ್ಮಾನಿಸಲಾಯಿತು.