ಕರಾವಳಿ ಜಿಲ್ಲೆಯಲ್ಲಿನ ಕೋವಿಡ್ ಡೆತ್ ಎಂದು ಮನೆ ಸೇರಿದ ಶವದ ಅಸಲಿಯತ್ತೇ ಬೇರೆ. ಆಸ್ಪತ್ರೆ ಸಿಬ್ಬಂದಿಯ ಯಡವಟ್ಟಿನಿಂದಾಗಿ ಜನರಲ್ಲಿ ಗೊಂದಲ ಉಂಟಾಗಿ ಇಡೀ ಆಡಳಿತ ವ್ಯವಸ್ಥೆಯೇ ಹಿಡಿಶಾಪಕ್ಕೆ ಗುರಿಯಾಗಬೇಕಾಯಿತು. ಆದರೆ ಕೋವಿಡ್ ಸೋಂಕಿತನ ಮೃತ್ಯುವಿನ ಹಿಂದಿನ ಮರ್ಮವೇ ಬೇರೆ. ಇಲ್ಲಿದೆ ನೋಡಿ ಅಸಲಿಯತ್ತು..
ಏನಿದು ಪ್ರಕರಣ..?
ಕೋವಿಡ್ ಸೋಂಕಿತ ಬೆಳೇನಳ್ಳಿಯ 69 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಉತ್ತರಕನ್ನಡ ಜಿಲ್ಲೆ ಶಿರಸಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬಂತೆ ತರಾತುರಿಯಲ್ಲೇ ಮೃತದೇಹವನ್ನು ಪ್ಯಾಕ್ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿತ್ತು. ಕೋವಿಡ್ ರೋಗಿಯ ಸಾವು ಅದಾಗಿದ್ದರಿಂದ ಶವಸಂಸ್ಕಾರಕ್ಕೆ ಹೆಚ್ಚೇನು ಜನ ಸೇರುವಂತಿರಲಿಲ್ಲ. ಸಂಪ್ರದಾಯವೂ ಅಷ್ಟೇನೂ ಇಲ್ಲ. ಹಾಗಾಗಿ ಕುಟುಂಬದ ಬೆರಳೆಣಿಕೆಯ ಮಂದಿ ಈ ಶವವನ್ನು ಚಿತೆಯಲ್ಲಿಟ್ಟು ಇನ್ನೇನು ಅಗ್ನಿ ಸ್ಪರ್ಷ ಮಾಡಬೇಕೆನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಈ ಶವದ ತಲೆ ಭಾಗದಲ್ಲಿ ರಕ್ತದ ಕಲೆ ಗಮನಿಸಿದ್ದಾರೆ. ಈ ಬಗ್ಗೆ ಪರಾಮರ್ಶಿಸಿದಾಗ ಅನುಮಾನ ಉಂಟಾಗಿದೆ. ದೈರ್ಯದಿಂದಲೇ ಶವದ ಪ್ಯಾಕ್ ಬಿಡಿಸಿ ಪರೀಕ್ಷಿಸದಾಗ ಬೆಚ್ಚಿ ಬೀಳುವಂತಹಾ ಸಂಗತಿ ಗೊತ್ತಾಯಿತು. ಮೃತ ವ್ಯಕ್ತಿಯ ತಲೆಯ ಮೇಲೆ ಬಲವಾದ ಏಟು ಬಿದ್ದಂತಿತ್ತು. ಆ ದೊಡ್ಡ ಗಾಯದಲ್ಲಿ ರಕ್ತ ಸುರಿಯುತ್ತಿತ್ತು. ಇದರಿಂದ ಗಾಬರಿಯಾದ ಜನ ವೀಡಿಯೋ ಮಾಡಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಮಂಗಳವಾರದ ಈ ಘಟನೆ, ಮರುದಿನ ಭಾರೀ ಸುದ್ದಿಯಾಗಿದೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತಲ್ಲಣ ಸೃಷ್ಟಿಯಾಗಿದೆ.
ಅಂತೆ ಕಂತೆಗಳ ಜೊತೆ ಸೇರಿಕೊಂಡ ಸುದ್ದಿ..?
ಅದಾಗಲೇ ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಸಾಯಿಸಲಾಗಿದೆ ಎಂಬ ಹಲವಾರು ವೀಡಿಯೋಗಳ ಬಗ್ಗೆ ಚರ್ಚೆಗಳು ನಡೆದಿರುವಾಗಲೇ ಅದರ ಜೊತೆ ಈ ಸುದ್ದಿಯೂ ಸೇರಿಕೊಂಡು ತಲ್ಲಣ ಸೃಷ್ಟಿಯಾಯಿತು. ಅಷ್ಟೇ ಅಲ್ಲ, ಶಿರಸಿಯ ಆ ಆಸ್ಪತ್ರೆ ವೈದ್ಯರ ವಿರುದ್ದ ಜನರ ಆಕ್ರೋಶವೂ ಸ್ಫೋಟಗೊಂಡಿತು.
ಆಸ್ಪತ್ರೆ ಪ್ರಮುಖರ ಸ್ಪಷ್ಟನೆ..
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಪ್ರಮುಖರು, ಮೃತ ವ್ಯಕ್ತಿ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಆ ಸಂದರ್ಭದಲ್ಲಿ ತಲೆಗೆ ಏಟು ಬಿದ್ದಿದೆ. ತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಮೃತದೇಹ ಹಸ್ತಾಂತರ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಈ ವಿಚಾರವನ್ನು ಮರೆಮಾಚಿದ್ದೇಕೆ? ಈ ಕಿಟ್ ಓಪನ್ ಮಾಡಬೇಡಿ ಎಂದು ಹೇಳಿದ್ದರಾದರೂ ಆಸ್ಪತ್ರೆಯಲ್ಲಿನ ಘಟನೆ ಬಗ್ಗೆ ಹೇಳಿಕೊಂಡಿಲ್ಲವೇಕೆ? ಎಂದು ಮೃತನ ಕುಟುಂಬದವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.