ಬೆಂಗಳೂರು: ಹಂತ ಹಂತದಲ್ಲೂ ವಿದ್ಯಮಾನಗಳಿಗೆ ರೋಚಕತೆ ತುಂಬುತ್ತಿರುವ ಕಾಂಗ್ರೆಸ್ನಲ್ಲೇ ಇದೀಗ ಸಂಚಲನ ಉಂಟಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಲೇ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯವೇ ಮತ್ತೊಮ್ಮೆ ರಾಜ್ಯ ಪರ್ಯಟನೆ ಕೈಗೊಳ್ಳಲಿದ್ದಾರೆ. ಈ ಬಾರಿಯೂ ಅವರು ಅಹಿಂದ ಮಂತ್ರದೊಂದಿಗೆ ರಾಜ್ಯಯಾತ್ರೆ ಕೈಗೊಳ್ಳಲಿದ್ದಾರೆ ಎನ್ನುವುದೇ ವಿಶೇಷ.
ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಹೋರಾಟ ಸಾಗಿದ್ದು ಬಿಜೆಪಿಯ ಸಿದ್ದಾಂತದ ಎದುರು ಕಾಂಗ್ರೆಸ್ ಮಂಕಾಗಿದೆ. ಹಾಗಾಗಿ ಸಮುದಾಯದ ಏಳಿಗೆಯ ಚಿಂತನೆಯ ಹಾದಿಯೇ ಸುಗಮ ಎಂಬುದು ಸಿದ್ದರಾಮಯ್ಯರ ಅಭಿಪ್ರಾಯ. ಹಾಗಾಗಿ ಅಲ್ಲಸಂಖ್ಯಾತರ, ಹಿಂದುಳಿದ ವರ್ಗದವರ ಹಾಗೂ ದಳಿತರ ನಾಯಕರಾಗಿ ಹೆಗ್ಗುರುತಾಗಲೇಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಮತ್ತೊಮ್ಮೆ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ಗದ್ದುಗೆಯೇ ಸಿದ್ದು ಗುರಿ?
ಮತ್ತೊಮ್ಮೆ ಅಹಿಂದ ಯಾತ್ರೆ ಕೈಗೊಳ್ಳಲು ಸರಣಿ ರಹಸ್ಯ ಸಭೆಗಳ ಮೂಲಕ ಮುನ್ನುಡಿ ಬರೆದಿರುವ ಸಿದ್ದಾರಾಮಯ್ಯ ವಿಧಾನಮಂಡಲ ಅಧಿವೇಶನದ ನಂತರ ಪರ್ಯಟನಾ ಕಾರ್ಯಕ್ರಮ ನಡೆಸಲು ರೂಪುರೇಷೆ ಸಿದ್ಧಗೊಳಿಸಿದ್ದಾರೆ ಎನ್ನಲಾಗುತ್ತಿದೆ. ನೂರಕ್ಕೂ ಹೆಚ್ಚು ಕಡೆ ಸಮಾವೇಶಗಳನ್ನು ನಡೆಸಲು ಕಾರ್ಯತಂತ್ರ ರೂಪಿಸಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹಮತ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹೈಕಮಾಂಡ್ ಒಪ್ಪಿಗೆ ಸಿಗುವುದಂತೂ ಖಚಿತ ಎಂಬ ಆಶಾವಾದ ಸಿದು ಬಳಗದ್ದು. ಹಾಗಾಗಿ ಈ ಸಂಬಂಧ ಸೋನಿಯಾ, ರಾಹುಲ್ ಜೊತೆ ಚರ್ಚಿಸಲು ಸಿದ್ದರಾಮಯ್ಯನವರು ದೆಹಲಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾರೆಂಬುದೂ ಕೆಪಿಸಿಸಿ ಗರಡಿಯಿಂದ ಕೇಳಿಬರುತ್ತಿರುವ ಸದ್ದು.
ಏನಿದು ಸಿದ್ದು ತಂತ್ರ?
ಕೆಲವು ದಿನಗಳಿಂದ ಕುರುಬರ ಮೀಸಲಾತಿ ಹೋರಾಟ ರಾಜ್ಯ ಸರ್ಕಾರದಲ್ಲಿ ತಳಮಳ ಸೃಷ್ಟಿಸಲು ಕಾರಣವಾಗಿದೆ. ಕುರುಬ ಸಮುದಾಯದ ಇತಿಹಾಸದಲ್ಲೇ ಇಂತಹ ಹೋರಾಟ ನಡೆದಿಲ್ಲ. ಈ ಹೋರಾಟದ ಮುಂದಾಳುತ್ವವಹಿಸಿದ್ದು ಸಿದ್ದರಾಮಯ್ಯ ಆಪ್ತರೇ ಆಗಿದ್ದಾರೆ. ರಾಯಣ್ಣ ಬ್ರಿಗೇಡ್ ಮೂಲಕ ಈ ಹೋರಾಟದಲ್ಲಿ ಈಶ್ವರಪ್ಪ ಟೀಂ ಭಾಗಿಯಾಗಿತ್ತಾದರೂ ಸಮುದಾಯದ ವಿಚಾರಕ್ಕೆ ಬಂದಾಗ ಕುರುಬ ಸಮುದಾಯಕ್ಕೆ ಸಿದ್ದರಾಯಮಯ್ಯನವರೇ ನಾಯಕರು ಎಂಬುದು ಪ್ರಚಲಿತ ಸತ್ಯ. ಈ ವಿಚಾರದಲ್ಲಿ ಮೊನ್ನೆಯವರೆಗೂ ಈಶ್ವರಪ್ಪ ಜೊತೆಗಿದ್ದು ಕುರುಬರ ಪರ ಹೋರಾಟದಲ್ಲಿದ್ದ ಅನೇಕರು ಸಿದ್ದರಾಮಯ್ಯರ ಮುಂದಿನ ಹೋರಾಟದಲ್ಲಿ ಕೈ ಜೋಡಿಸಲು ನಿರ್ಧರಿಸಿದ್ದಾರೆನ್ನಲಾಗಿದೆ.
ಇದೀಗ ಕುರುಬರು ಹೋರಾಟದ ಹುಮ್ನಸ್ಸಿನಲ್ಲಿರುವುದರಿಂದ ಈ ಕಿಚ್ಚನ್ನು ಬಳಸಿಕೊಂಡೇ ಅಹಿಂದವನ್ನು ಗಟ್ಟಿಗೊಳಿಸಲು ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಪರ್ಯಟನೆ ಯಶಸ್ಸಿಯಾದರೆ ಮುಂದೆ ಸಿಎಂ ಪಟ್ಟ ಒಲಿಯುತ್ತೆ ಎಂಬ ದೂರಾಲೋಚನೆಯೂ ಅವರದ್ದಾಗಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.