ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು ‘ಕಡೆ ಚೆಂಡು’ ನಿಗದಿಯಾಗಿದೆ.
ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್ ಹೀಗಿದೆ:
ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ.
ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುವುದು. ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತಿರುವುದೇ ವಿಶೇಷ. ಈ ಬಾರಿ 28 ದಿನಗಳ ಕಾಲ ಪೊಳಲಿ ಜಾತ್ರಾ ವೈಭವ ನೆರವೇರಲಿದೆ ಎಂದು ಇಂದು (ಮಾರ್ಚ್15) ಬೆಳಿಗ್ಗೆ ಘೋಷಿಸಲಾಗಿದೆ.
ಒಂದು ತಿಂಗಳ ಕಾಲದ ಜಾತ್ರೆ ಸಂದರ್ಭದಲ್ಲಿ ಪ್ರತೀ ಐದು ದಿನಗಳಿಗೊಮ್ಮೆ ದಂಡಮಾಲೋತ್ಸವ ಗಮನಸೆಳೆಯಲಿದ್ದು, ಏಪ್ರಿಲ್ 5ರಂದು ಮೊದಲ ದಿನದ ಚೆಂಡಾಟ ಮಹೋತ್ಸವ ನೆರವೇರಲಿದೆ. ಐದು ದಿನಗಳ ಚೆಂಡಾಟ ಮಹೋತ್ಸವವು ಆಸ್ತಿಕ ಸಮೂಹದ ‘ಭಕ್ತಿ-ಶಕ್ತಿಯ ಕಾಳಗ’ಕ್ಕೆ ಸಾಕ್ಷಿಯಾಗಲಿದೆ. ಏಪ್ರಿಲ್ 9ರಂದು ‘ಕಡೇ ಚೆಂಡು’. ಮರುದಿನ ಅಂದರೆ ಏಪ್ರಿಲ್ 10ರಂದು ‘ಮಹಾರಥೋತ್ಸವ’ ಕೈಂಕರ್ಯ ಮೂಲಕ ಅದ್ದೂರಿ ವೈಭವದ ಸನ್ನಿವೇಶಕ್ಕೆ ಈ ಜಾತ್ರೆ ಸಾಕ್ಷಿಯಾಗಲಿದೆ. ಏಪ್ರಿಲ್ 11ರಂದು ಆರಾಟ ಮಹೋತ್ಸವ ಸಂದರ್ಭದಲ್ಲಿ ಧ್ವಜಸ್ಥಂಭದಿಂಧ ಗರುಡಧ್ವಜವನ್ನು ಇಳಿಸಿದ ನಂತರ ತಿಂಗಳ ಕಾಲದ ರಾಜರಾಜೇಶ್ವರಿ ಜಾತ್ರೆಗೆ ತೆರೆ ಬೀಳಲಿದೆ. ಆದರೂ ಜಾತ್ರೆಯ ಸಡಗರ ಮರುದಿನವೂ ಮುಂದುವರಿಯುತ್ತದೆ. ಆರಾಟ ಮಹೋತ್ಸವದ ಮರುದಿನ ದೇವಾಲಯದ ದೈವ ದೇವರಿಗೆ ಸಲ್ಲುವ ನೇಮೋತ್ಸವ ಕೂಡಾ ಪೊಳಲಿ ಕ್ಷೇತ್ರದ್ಧೇ ಆದ ವೈಶಿಷ್ಟ್ಯ.
ಏನಿದು ಪೊಳಲಿ ಚೆಂಡು?
ದುರ್ಗಾ ದೇವತೆಗಳ ನಾಡು ಎಂದೇ ಜನಜನಿತವಾಗಿರುವ ರಾಜ್ಯ ಕರಾವಳಿಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ನವದುರ್ಗೆಯರ ಪೈಕಿ ಹಿರಿಯವಳೇ ಪೊಳಲಿ ರಾಜರಾಜೇಶ್ವರಿ.

ಪುರಾಣ ಕಥೆಗಳಲ್ಲಿ ಉಲ್ಲೇಖವಿರುವಂತೆ ನಾಡಿಗೆ ಕಂಟಕವಾಗಿ ಪರಿಗಣಿಸಿದ್ದ ರಾಕ್ಷಸರನ್ನು ಈ ದೇವಿ ಯುದ್ಧದಲ್ಲಿ ಸೋಲಿಸಿ, ಅವರ ರುಂಡವನ್ನು ಚೆಂಡಾಡಿದ್ದಾಳೆ ಎನ್ನಲಾಗಿದೆ. ಯುದ್ಧ ಗೆದ್ದ ಸಂದರ್ಭದಲ್ಲಿ ರಾಕ್ಷಸರ ರುಂಡ ಚೆಂಡಾಟದ ಮೂಲಕ ಶ್ರೀ ದೇವಿ ಅಪೂರ್ವ ಖುಷಿ ಪಟ್ಟಲೆಂಬುದೂ ಪ್ರತೀತಿ. ಪುರಾಣದ ಪ್ರಸಂಗದಂತೆ ದೇವಿಯನ್ನು ಸಂತುಷ್ಟಗೊಳಿಸಲು ಭಕ್ತ ಸಮೂಹ ಜಾತ್ರೆಯ ಅಂತಿಮ ದಿನಗಳಲ್ಲಿ ಚೆಂಡಾಟ ಮೂಲಕ ಭಕ್ತಿ-ಶಕ್ತಿಯ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಟಿಪ್ಪು ಆಡಳಿತ ಸಂದರ್ಭದ ಸನ್ನಿವೃಶ, ಅಬ್ಬಕ್ಕ ರಾಣಿಯ ಕಾಲಾವಧಿಯ ಕುರುಹುಗಳು ಈ ಚೆಂಡು ಉತ್ಸವದ ಮಹಿಮೆಯ ಒಂದು ಭಾಗವಾಗಿ ಈಗಲೂ ಸ್ಮರಣೀಯವಾಗಿದೆ. ಜಾತಿ-ಧರ್ಮ-ಸೀಮೆ ಎಂಬ ಭೇದವಿಲ್ಲದೆ ಮನುಕುಲ ಈ ಉತ್ಸವದಲ್ಲಿ ಭಾಗವಹಿಸುತ್ತದೆ.
ಶತಮಾನದ ನಂತರ ಕೆಲವು ದಿನಗಳ ಹಿಂದಷ್ಟೇ ಮಹಾ ಶತಚಂಡಿಕಾ ಯಾಗದಿಂದ ಧಾರ್ಮಿಕ ವಲಯದಲ್ಲಿ ಗಮನಸೆಳೆದಿರುವ ಪೊಳಲಿ ಕ್ಷೇತ್ರ ಇದೀಗ ಪುರಾಣ ಪ್ರಸಿದ್ದ ‘ಚೆಂಡು ಉತ್ಸವ’ ಮೂಲಕ ವೈದ್ದಿಕ ಕೈಂಕರ್ಯಗಳಿಗೆ ಸಾಕ್ಷಿಯಾಗಲಿದೆ.