ಬೆಂಗಳೂರು: ಕಾಂಗ್ರೆಸ್ ಶಾಸಗ್ರಸ್ಥ ಪಕ್ಷವಾಗಿದೆ ಎಂದು ಬಣ್ಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘PayCM’ ಅಭಿಯಾನ ಕೈಗೊಂಡಿರುವ ಕಾಂಗ್ರೆಸ್ ವಿರುದ್ದ ಬಿಜೆಪಿ ಪಕ್ಷದ ವತಿಯಿಂದ ಮಾನನಷ್ಟ ಧಾವೆ ಹೂಡುವ ಸುಳಿವು ನೀಡಿದ್ದಾರೆ.
40% ಕಮೀಷನ್ ಆರೋಪ ಕುರಿತು ಕಾಂಗ್ರೆಸ್ ಪೇಸಿಎಂ ಅಭಿಯಾನ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷವು ಭ್ರಷ್ಟರ ಮೂಲ ಕೇಂದ್ರ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್ಗಿದೆ. ಅದೊಂದು ಶಾಸಗ್ರಸ್ಥ ಪಕ್ಷ ಎಂದರು.
ಡಿಕೆಶಿ ಡೀಲ್ ಮಾಸ್ಟರ್ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಇಲ್ಲಿಯೂ ಡಿಕೆಶಿ- ಸಿದ್ದರಾಮಣ್ಣ ನಡುವೆ ಜಗಳ ನಡೆಯುತ್ತಿದೆ ಎಂದರು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಡಿಐಜಿ ಮಟ್ಟದ ಅಧಿಕಾರಿಯನ್ನು ನಮ್ಮ ಸರಕಾರ ಬಂಧಿಸಿದೆ ಎಂದು ವಿವರ ನೀಡಿದರು.
ಭ್ರಷ್ಟಾಚಾರ ಕುರಿತು ಕೆಂಪಣ್ಣ ದಾಖಲೆ ಕೊಟ್ಟಿಲ್ಲ. ದಾಖಲೆ ನೀಡಲು ಕಾಲಾವಕಾಶ ಕೊಟ್ಟಿದ್ದೆವು. ಇಂದಿನ ವರೆಗೆ ಕಾಂಗ್ರೆಸ್ ಮತ್ತು ಅವರ ಏಜೆಂಟರು ದಾಖಲೆಗಳನ್ನು ಕೊಟ್ಟಿಲ್ಲ. ಸಾಕ್ಷಿ ಇಲ್ಲದೆ ತನಿಖೆ ಮಾಡಲು ಹೇಗೆ ಸಾಧ್ಯ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷದ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.