ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ನಮ್ಮಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿರವರ ಮೇಲೆ ವಿಶ್ವಾಸ ಇದೆ ಎಂದು ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಸನುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಸತ್ಯಾಗ್ರಹವು ಯುಗಾದಿ ದಿನವಾದ ಇಂದು 68ನೇ ದಿನದವೂ ಮುಂದುವರಿಯಿತು. ಕೆಲವು ದಿನಗಳ ಹಿಂದೆ ಶಿವರಾತ್ರಿ ಹಬ್ಬವನ್ನು ಹೋರಾಟದ ಅಖಾಡದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಆಚರಿಸಿದ ಸಮುದಾಯದ ಮಂದಿ, ಇಂದು ಯುಗಾದಿ ಹಬ್ಬವನ್ನೂ ಸತ್ಯಾಗ್ರಹ ಸ್ಥಳದಲ್ಲೇ ಆಚರಿಸಿದರು.
ಇದನ್ನೂ ಒಮ್ಮೆ ಓದಿ.. ಅಂದಿನ ‘ಶಿವಾರತ್ರಿ’ ಇಲ್ಲೇ.. ಈಗ ‘ಯುಗಾದಿ’ಯೂ ಇಲ್ಲೇ.. ಪಂಚಮಸಾಲಿ ಅಖಾಡದಲ್ಲಿನ ಸನ್ನಿವೇಶ ಹೇಗಿತ್ತು ಗೊತ್ತಾ..?
ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಿಂದೆ ಹಲವು ಬಾರಿ ರಾಷ್ಟೀಯ ನಾಯಕರು ಸಿಎಂ ಅವರಿಗೆ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಲು ಒತ್ತಾಯ ಮಾಡಿದ್ದರೂ ಅದು ಪ್ರಯೋಜನವಾಗಲಿಲ್ಲ. ಹಾಗಾಗಿ ಈಗ ಅನಿವಾರ್ಯ ಕಾರಣದಿಂದ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕ ಮಾಡಬೇಕಾಯಿತು ಎಂದರು.
ಪ್ರಧಾನಿ ಕಾರ್ಯಾಲಯ ಮಧ್ಯಸ್ಥಿಕೆ ವಹಿಸಿರುವ ಕಾರಣ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವ ಭರವಸೆ ಇದೆ ಎಂದ ಶ್ರೀಗಳು, ಪ್ರಧಾನಿ ಮೋದಿಯವರ ಸಾಮಾಜಿಕ ಕಳಕಳಿಯ ಕಾರಣ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಸಾಮಾಜಿಕ ಹಿಂದುಳಿದ ಬಡವರ ನೋವು ಅತ್ಯಂತ ಕಷ್ಟದಿಂದ ಬಂದಿರುವ ಮೋದಿಯವರಿಗೆ ಅರ್ಥ ಆಗುತ್ತದೆ. ಅವರು ಸೂಕ್ತ ನಿರ್ದೇಶನ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ ಎಂದು ಶ್ರೀಗಳು ಹೇಳಿದರು.