ಮಂಗಳೂರು: ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೊಳ್ಳಲಿದೆ. ಮುಂದಿನ ವರ್ಷ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಕಂಬಳ ಆಯೋಜಿಸಲಾಗುತ್ತದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಮಾಡಿದ ಘೋಷಣೆಯು ತುಳುನಾಡ ಜನರ ಸಂತಸಕ್ಕೆ ಕಾರಣವಾಗಿದೆ.
ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ಶನಿವಾರ ಹೊನಲು ಬೆಳಕಿನ “ಗುರುಪುರ ಕಂಬಳೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಡಿಕೆಶಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಬಳ ಕ್ರೀಡೆಯಿಂದ ನಮ್ಮ ಸಂಪ್ರದಾಯ- ಪರಂಪರೆ ಬೆಳೆಯುತ್ತಿದೆ. ಹಾಗಾಗಿ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಸಂರಕ್ಷಿಸಬೇಕಾಗಿದೆ ಎಂದರು.
ನಮ್ಮ ಸರ್ಕಾರ ಕಂಬಳಕ್ಕೆ ಪ್ರೋತ್ಸಾಹ ನೀಡುತ್ತದೆ. ಮುಂದಿನ ವರ್ಷ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಕಂಬಳ ಆಯೋಜಿಸುತ್ತೇವೆ ಎಂದ ಡಿಕೆಶಿ, ಮುಂದೆ ಇದು ಪರಂಪರೆಯಾಗಿ ಉಳಿದು ಮುಂದುವರಿಯುವ ರೀತಿಯಲ್ಲಿ ಪ್ರೋತ್ಸಾಹಿಸೋಣ ಎಂದರು.