ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ NWRTC ಸಿಬ್ಬಂದಿಗೆ ವಿಶಿಷ್ಟ ಯೋಜನೆ ಜಾರಿಯಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉಪಸ್ಥಿತಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಾರಿಗೆ ಸಂಜೀವಿನಿ’ ಯೋಜನೆ ಜಾರಿಗೆ ಮುನ್ನುಡಿ ಬರೆಯಲಾಯಿತು. ಹುಬ್ಬಳ್ಳಿಯ ಪ್ರತಿಷ್ಠಿತ ‘ಕಿಮ್ಸ್’ ಸಹಯೋಗದಲ್ಲಿ ‘ಸಾರಿಗೆ ಸಂಜೀವಿನಿ’ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಸಂಬಂಧ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.
NWKRTC ಸಂಸ್ಥೆಯು ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಒಟ್ಟು 21120 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು 15000 ನೌಕರರು ಚಾಲಕ-ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೇ ವೇಳೆ, ಸಾರಿಗೆ ನಿಗಮವು ಈ ವರೆಗೂ ಅಗತ್ಯ ಸೌಲಭ್ಯ ಕಲ್ಪಿಸುತ್ತಾ ಬಂದಿದೆ ಎಂದ ಅವರು, ನೌಕರರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅವಶ್ಯಕತೆಯನುಸಾರ ವೈದ್ಯಕೀಯ ಮುಂಗಡ ನೀಡಲಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗಗಳಿಂದ 4401 ಪ್ರಕರಣಗಳಲ್ಲಿ ರೂ.523.47 ಲಕ್ಷ ಮೊತ್ತದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲಾಗಿದೆ ಎಂದು ವಿವರಿಸಿದರು.
ನೌಕರರಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ದರ್ಜೆಯ ಚಿಕಿತ್ಸೆಗಾಗಿ 106 ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರವು ಗುರುತಿಸಿರುವ 380 ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ ಎಂದವರು ತಿಳಿಸಿದರು.
ನೌಕರರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರುಪಾವತಿಗಾಗಿ ಸಲ್ಲಿಸುವ ಬಿಲ್ಲುಗಳು CGHS-2014 ದರಗಳಲ್ಲಿ ಪರಿಗಣಿಸುವುದರಿಂದ ವಾಸ್ತವಿಕ ವೆಚ್ಚದಷ್ಟು ಮೊತ್ತವು ಮರುಪಾವತಿ ಆಗದೇ ಇರುವುದರಿಂದ ನೌಕರರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಕಂಡು ಬಂದಿರುತ್ತದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕಿಮ್ಸ್ ಸಂಸ್ಥೆಯವರೊಂದಿಗೆ ಈ ನಗದು ರಹಿತ ಚಿಕಿತ್ಸಾ ಸೌಲಭ್ಯದ ಒಪ್ಪಂದವನ್ನು ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಕರಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ಹುಬ್ಬಳ್ಳಿ ಕಿಮ್ಸ್ ನಿರ್ದೇಶಕರಾದ ಡಾ|| ಎಸ್. ಎಫ್.ಕಮ್ಮಾರ, ಕಿಮ್ಸ್ ಪ್ರಾಂಶುಪಾಲರಾದ ಡಾ|| ಈಶ್ವರ ಹೊಸಮನಿ ಹಾಗೂ , ಡಾ|| ಲಕ್ಷ್ಮೀಕಾಂತ ಲೋಕರೆ ಸೇರಿದಂತೆ ಕಿಮ್ಸ್ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.