ಮಂಗಳೂರು: ನಗರದ ಮೋರ್ಗನ್ ಗೇಟ್ ಬಳಿ ಶೂಟೌಟ್ ನಡೆದಿದ್ದು ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಮಗನಿಗೇ ಬಿದ್ದು ಅವಾಂತರಕ್ಕೆ ಕಾರಣವಾಗಿದೆ.
ಖಾಸಗಿ ಕಾರ್ಗೋ ಕಂಪನಿಯ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ. ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರು ಸಂಬಳ ಕೇಳಲು ಬಂದಿದ್ದು ಈ ವೇಳೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ.
ಕಚೇರಿ ಹೊರ ಭಾಗದಲ್ಲಿ ಘಟನೆ ನಡೆದಿದ್ದು ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿದ್ದು ಗಾಯಗೊಂಡಿದ್ದಾನೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಬೇಟಿ ನೀಡಿದ್ದಾರೆ.