ಬೆಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಸ್ತುತ ಸಾಲಿನಲ್ಲಿ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು 2022 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
- ಕೊಂಕಣಿ ಸಾಹಿತ್ಯ ಪ್ರಶಸ್ತಿ : ಎಚ್. ಎಂ. ಪೆರ್ನಾಲ್, ಮಂಗಳೂರು,
- ಕೊಂಕಣಿ ಕಲಾ ಪ್ರಶಸ್ತಿ: ರಮೇಶ್ ಕಾಮತ್, ಬೆಂಗಳೂರು,
- ಕೊಂಕಣಿ ಜಾನಪದ ಪ್ರಶಸ್ತಿ : ಕುಮುದಾ ಗಡಕರ್, ಕಾರವಾರ.
ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಮೂವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಮುಖರು ಆಭಿನಂದಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು 18.09.2022, ಭಾನುವಾರ, ಬೆಂಗಳೂರಿನ ಮಲ್ಲೇಶ್ವರಂನ, ಕಾಶೀಮಠದಲ್ಲಿ ನೆರವೇರಲಿದೆ. ಬೆಳಿಗ್ಗೆ 9.00 ರಿಂದ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮದಿಂದ ಪ್ರಾರಂಭವಾಗಲಿದೆ ಹಾಗೂ ದಿನವಿಡೀ ಕೊಂಕಣಿಯ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳೊಂದಿಗೆ ಅದೇ ದಿನ ಸಂಜೆ 5.00 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಸಹಿತ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಉದ್ಯಮಿ ಡಾ.ಪಿ.ದಯಾನಂದ ಪೈ, ಅಕಾಡೆಮಿಯ ಅಧ್ಯಕ್ಷರಾದ ಡಾ.ಕೆ. ಜಗದೀಶ್ ಪೈ, ಸಂಸದ ಡಿ. ವಿ ಸದಾನಂದ ಗೌಡ, ಶಾಸಕರಾದ ಪ್ರತಾಪಸಿಂಹ ನಾಯಕ್ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಲಿದೆ. ಈ ಸಂದರ್ಭದಲ್ಲಿ ಅಕಾಡೆಮಿ ತ್ರೈಮಾಸಿಕ ಪತ್ರಿಕೆ “ಕೊಂಕಣಿ ಸಿರಿಸಂಪದ” ಹಾಗೂ ಪ್ರಶಸ್ತಿ ಪುರಸ್ಕ್ರೃತರ “ಪರಿಚಯ ಪುಸ್ತಕ”, ಅಕಾಡೆಮಿ ಪ್ರಕಟಣೆಗಳಾದ ಭುಂಯ್ಕಾಂಪ್, ಭೃಂಗಾನ ಸಾಂಗಿಲೆ ಪುಲ್ಲಾ ಕಾಣ್ಯೊ, ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ. ಪುತ್ತೂರು ನರಸಿಂಹ ನಾಯಕ ಇವರಿಂದ ಕೊಂಕಣಿ ಸಂಗೀತ ಕಚೇರಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಹಲವು ಸಂಘಸಂಸ್ಥೆಗಳ, ಕೊಂಕಣಿ ಭಾಂದವರ ಸಹಕಾರವಿರುತ್ತದೆ ಎಂದವರು ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರ ವಿವರ:
ಎಚ್ ಎಂ ಪೆರ್ನಾಲ್ (ಕೊಂಕಣಿ ಸಾಹಿತ್ಯ)
’ಯುವಕ್’ಕೊಂಕಣಿ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿ ಸಾಹಿತ್ಯಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ನಂತರದ ದಿನಗಳಲ್ಲಿ ಕತೆ, ಕವಿತೆ, ವ್ಯಂಗ್ಯಚಿತ್ರ ಹಾಗೂ ವಿಶೇಷ ಅಂಕಣಗಳ ಮೂಲಕ ಪ್ರಾರಂಭವಾದ ಇವರ ಪಯಣ ಒಬ್ಬ ಕವಿ, ಕತೆಗಾರ, ವಿಮರ್ಶಕ, ಪ್ರಬಂಧಕಾರ, ಅಂಕಣಕಾರ, ತೀರ್ಪುಗಾರ, ಸಂಪಾದ? ಹಾಗೂ ಪ್ರಕಾಶಕರಾಗಿ 38 ವರ್ಷಗಳ ಸುದೀರ್ಘ ಅವಧಿಯನ್ನು ಪೂರೈಸಿದೆ. ಈ ಸುದೀರ್ಘ ಪಯಣದಲ್ಲಿ 750 ಕ್ಕೂ ಹೆಚ್ಚು ಕವಿತೆ, 1೦೦ಕ್ಕೂ ಮಿಕ್ಕಿ ಸಣ್ಣಕತೆ, 2೦೦೦ ಕ್ಕೂ ಹೆಚ್ಚು ಲೇಖನ, ಅಧ್ಯಯನ ಲೇಖನ, ಪ್ರಬಂಧ ಹಾಗೂ ಅಂಕಣ ಬರಹಗಳು ವಿವಿಧ ಪತ್ರಿಕೆ ಮತ್ತು ಜಾಲತಾಣಗಳಲ್ಲಿ ಪ್ರಕಟವಾಗಿವೆ. ಇವರು ಸ್ಥಾಪಿಸಿದ ಕಿಟಾಳ್ ಜಾಲತಾಣ ಹಾಗೂ ಆರ್ಸೊ ಪತ್ರಿಕೆಗಳಲ್ಲಿ ಸಾವಿರಕ್ಕೂ ಮಿಕ್ಕಿ ಸಂಪಾದಕೀಯ ಲೇಖನಗಳನ್ನು ಬರೆದಿರುತ್ತಾರೆ. ಇವರ ಕಿಟಾಳ್ ಜಾಲತಾಣವು ಕೊಂಕಣಿ ಸಾಹಿತ್ಯದ ಸರ್ವ ಪ್ರಕಾರಗಳಿಗೆ ಪೂರಕ ಜಾಲತಾಣ ಎಂಬ ದಾಖಲೆ ನಿರ್ಮಿಸಿದೆ. ಕಿಟಾಳ್ ಮತ್ತು ಎವರ್ಶೈನ್ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಮುಂದಾಳುತ್ವದಲ್ಲಿ ಪ್ರಕಟಿಸಿದ ಪುಸ್ತಕಗಳಿಗೆ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ ಶ್ರೀಮತಿ ವಿಮಲಾ ಪೈ ಪ್ರಶಸ್ತಿ ಸತತ ಮೂರು ವರ್ಷ ನಿರಂತರವಾಗಿ ಲಭಿಸಿರುತ್ತದೆ. ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ವಿಶ್ವವಿದ್ಯಾಯಲಗಳಲ್ಲಿ ಅಧ್ಯಯನಾತ್ಮಕ ಪ್ರಬಂಗಳನ್ನು ಮಂಡಿಸಿದ್ದಾರೆ. ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಡೆದ ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಕವಿಯಾಗಿ ಭಾಗವಹಿಸಿದ್ದಾರೆ. ಮಾತ್ರವಲ್ಲ ಕವಿಗೋಷ್ಠಿ, ವಿಚಾರಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುಂಬಯಿ ಹಾಗೂ ಮಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತವೆ. ಚಲ್ಯಾಂಕ್ ಚತ್ರಾಯ್, ಕಯ್ದ್ಯಾಚೊ ಕವಿತಾ, ಭಾಮುಣಾಂಚೆಂ ಚೆಡುಂ-ಇವರ ಪ್ರಕಟಿತ ಕವನ ಸಂಕಲನಗಳು. ದೆವಾಕ್ ಸೊಡ್ಲ್ಲೊ ಪಾಡೊ, ಬೀಗ್ ಆನಿ ಬಿಗಾತ್-ಇವರ ಪ್ರಕಟಿತ ಕಥಾ ಸಂಕಲನಗಳು. ಕೊಂಕಣಿ ಕಾವ್ಯೆಂ-ರುಪಾಂ ಆನಿ ರುಪಕಾಂ-ಆಧುನಿಕ ಕೊಂಕಣಿ ಕಾವ್ಯ ಮೀಮಾಂಸೆಯ ಪುಸ್ತಕವಾಗಿದೆ. 2018 ರಲ್ಲಿ ’ಬೀಗ್ ಆನಿ ಬಿಗಾತ್’ಕೃತಿಗೆ ರೂ. ಒಂದು ಲಕ್ಷ ಮೌಲ್ಯದ ಶ್ರೀಮತಿ ವಿಮಲಾ ಪೈಅತ್ಯುತ್ತಮ ಸಾಹಿತ್ಯ ಕೃತಿ ಪ್ರಶಸ್ತಿ ಲಭಿಸಿರುತ್ತದೆ. ಕೊಂಕಣಿ ಕಾವ್ಯಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕವಿತಾಟಸ್ಟ್ ಮಥಾಯಸ್ ಕುಟಮ್ ಕವಿತಾ ಪ್ರಶಸ್ತಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ರಮೇಶ್ ಕಾಮತ್ (ಕೊಂಕಣಿ ಕಲೆ)
ನಾಟಕ, ಸಿನಿಮಾ, ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಇವರ ಹೆಸರು ಚಿರಪರಿಚಿತ. ಪ್ರತಿಷ್ಠಿತ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಚಲನಚಿತ್ರ ಪದವಿ ಪಡೆದ ಕರ್ನಾಟಕದ ಏಕೈಕ ಕೊಂಕಣಿ ವ್ಯಕ್ತಿ. ಈಜಿಪ್ಟ್ನಲ್ಲಿ ಚಿತ್ರೀಕರಿಸಲಾದ ಇತ್ತೀಚಿನ ಮಕ್ಕಳ ಚಲನಚಿತ್ರ ಅಪ್ಸರಾಧಾರ ಸೇರಿದಂತೆ ಮೂರು ಕೊಂಕಣಿ ಚಲನಚಿತ್ರಗಳನ್ನು ನಿರ್ಮಿಸಿ ಮತ್ತು ನಿರ್ದೇಶಿಸಿರುತ್ತಾರೆ. 1971 ರಿಂದ 1975 ಪುಣೆಯಲ್ಲಿ ತಮ್ಮ ವ್ಯಾಸಾಂಗದ ಸಮಯದಲ್ಲಿ ಜಿ.ಎಸ್.ಬಿ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತಿಷ್ಠಿತ ಬಾಲ ಗಂಧರ್ವ ರಂಗ ಮಂದಿರದಲ್ಲಿ 5ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದರು. 1980 ರಲ್ಲಿ ಕೊಂಕಣಿಯನ್ನು ಸಾಹಿತ್ಯಿಕ ಭಾಷೆ ಅಥವಾ ರಾಷ್ಟ್ರೀಯ ಭಾಷಾ ಸ್ಥಾನಮಾನವೆಂದು ಗುರುತಿಸುವ ಮೊದಲೇ ಪ್ರಥಮ ಬಾರಿಗೆ ಸಾರಸ್ವತ ಕೊಂಕಣಿ ಚಲನಚಿತ್ರ ಜನ ಮನ ವನ್ನು ನಿರ್ಮಿಸಿ ನಿರ್ದೇಶಿಸಿದರು, ಪತ್ರಿಕಾ ಮತ್ತು ಸಾರ್ವಜನಿಕರಿಂದ ಹೆಚ್ಚು ಮೆಚ್ಚುಗೆ ಗಳಿಸಿ, ದೂರದರ್ಶನದ ರಾಷ್ಟ್ರೀಯ ನೆಟ್ವರ್ಕ್ನಲ್ಲಿ ಪ್ರಸಾರವಾದ ಮೊದಲ ಕೊಂಕಣಿ ಚಲನಚಿತ್ರ ಇದಾಗಿದೆ. 1982 ರಲ್ಲಿ ಕೊಂಕಣಿ ಜಾನಪದ ಗೀತೆಗಳಿಗೆ ಸಂಬಂಧಿಸಿದ ಕೆಲವು ಕೊಂಕಣಿ ದ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಶ್ರೀ ಪ್ರವೀಣ್ ನಾಯಕ್ ನಿರ್ದೇಶನದ ಬೆಂಗಳೂರು ದೂರದರ್ಶನದಲ್ಲಿ ಅನೇಕ ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಂಜನಾ ಆರ್ಟ್ಸ್ ಅಧ್ಯಕ್ಷರಾಗಿದ್ದು ಮೈಸೂರು, ಮಂಗಳೂರು, ಬೆಂಗಳೂರು, ಚೆನ್ನೈ, ಪುಣೆ, ಮುಂಬೈ, ದೆಹಲಿ ಹೀಗೆ ಭಾರತದಾದ್ಯಂತ 30 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ನಾಟಕ ಕಮ್ಮಟಗಳನ್ನು ನಡೆಸಿ ತರಬೇತಿ ನೀಡುತ್ತಿದ್ದಾರೆ. NAKA ಅಸೋಸಿಯೇಷನ್ ಆಫ್ ಯುಎಸ್ ಇವರಿಗೆ 2016 ರಲ್ಲಿ ಕೊಂಕಣಿಗಾಗಿ Life Time Achivement ಪ್ರಶಸ್ತಿಯನ್ನು ನೀಡಿದೆ. 2016 ರಲ್ಲಿ ಆ ವೈ ಜಾ ಸಾ ಎಂಬ ಹೆಸರಿನ ಮೊದಲ ಕೊಂಕಣಿ ಮಕ್ಕಳ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು, ಇದು ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಭಾರತ ಸರ್ಕಾರದ CFSI ಯ ಅಂತರರಾಷ್ಟ್ರೀಯ ಮಕ್ಕಳ ಉತ್ಸವ ಸೇರಿದಂತೆ ಅನೇಕ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದೆ ಮತ್ತು ಪ್ರದರ್ಶಿಸಲ್ಪಟ್ಟಿದೆ.
ಕುಮುದಾ ಗಡಕರ್ (ಕೊಂಕಣಿ ಜಾನಪದ)
ತಮ್ಮ ಬಾಲ್ಯದ ದಿನಗಳಲ್ಲಿ ಇವರ ತಾಯಿಯವರು ಜಾನಪದ ಕಲೆಗಳ ಪ್ರದರ್ಶನ ನೀಡುತ್ತಿದ್ದರು. ಅದುವೇ ಇವರಿಗೆ ಬಾಲ್ಯದಿಂದ ಬಳುವಳಿಯಾಗಿ ಬಂದಿದೆ. ಜೊತೆಗೆ ಇವರ ಪತಿ ಸಂಗೀತ ಶಿಕ್ಷಕರು ಹಾಗೂ ಕೀರ್ತನಕಾರರಾಗಿದ್ದು ಮಾವನವರು ಪ್ರಸಿದ್ಧ ತಬಲಾ ವಾದಕರಾಗಿದ್ದರು. 60-70 ಕೊಂಕಣಿ ನಾಟಕದಲ್ಲಿಯೂ ಹಾಗೂ 100ಕ್ಕೂ ಮೀರಿ ಜಾನಪದ ಪೌರಾಣಿಕ ಕೊಂಕಣಿ ಖೇಳ್ (ಯಕ್ಷಗಾನ) ಪಾತ್ರ ನಿರ್ವಹಿಸಿದ್ದಾರೆ .ಈ ಕಳೆದ 55 ವರ್ಷದಿಂದ ಕೊಂಕಣಿ ಜಾನಪದ ಕಲೆಗಳಾದ ಧಾಲೊ, ಮಾಂಡೊ ಮಗಡಿ, ತೊಣೆಯಾಚ್, ದೀಪ ಮಾಳನಾಯಾಟೆ, ಸಂಪ್ರದಾಯ ಗೀತೆಗಳನ್ನು ಪ್ರದರ್ಶನ ಮಾಡುತ್ತಾ 1992 ರಿಂದ ಸತತ 10-15 ವರ್ಷ ಕಾರವಾರ ಕರಾವಳಿ ಉತ್ಸವದಲ್ಲಿ, 2009 ರಿಂದ 2011 ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಮ್ಮಿಕೊಂಡ ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಕೊಂಕಣಿ ಜಾಗೃತ ಅಭಿಯಾನದಲ್ಲಿ ತಂಡದ ನೇತೃತ್ವದೊಂದಿಗೆ ಪಾಲುಗೊಂಡಿದ್ದು, ಮಾಂಡ್ ಸೊಭಾಣ್ ಮಂಗಳೂರು ವತಿಯಿಂದ ಮಂಗಳೂರಲ್ಲಿ ಜರುಗಿದ ವಿಶ್ವ ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ, 2015 ವಿಶ್ವ ಕೊಂಕಣಿ ಕೇಂದ್ರದಿಂದ ಮುಂಬೈಯಲ್ಲಿ ಜರುಗಿದ ಶಿಗ್ಮೋತ್ಸವ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಗಡಿನಾಡ ಉತ್ಸವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಭಾಷಾ ಭಾವೈಕ್ಯತಾ ಸಮಾವೇಶ ಹೀಗೆ ಹಲವಾರು ತಾಲೂಕಾ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗಿನ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಅನುಭವ ಇವರದು. ವಿವಿಧ ಇಲಾಖೆ ಹಾಗೂ ಗಣ್ಯರಿಂದ ಸತ್ಕಾರ-ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
























































