ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕತೆ ಮುಂದುವರಿದಿದೆ. ಚುನಾವಣೆ ಸಂದರ್ಭದಲ್ಲಿ ಉಗ್ರರು ದಾಳಿಗೆ ಸಂಚು ರೂಪಿಸಿದ್ದು, ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಕೃತ್ಯಗಳು ನಡೆದಿವೆ.
ಶೋಪಿಯಾನ್ನ ಹಿರ್ಪೋರಾ ಪ್ರದೇಶದಲ್ಲಿ ರಾತ್ರಿ ಉಗ್ರರು ಬಿಜೆಪಿಯ ಮಾಜಿ ಎನ್ನಲಾದ ಸರಪಂಚ್ ಐಜಾಜ್ ಶೇಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ದಾಳಿಯಲ್ಲಿ ಜೈಪುರದ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದಾರೆ.
ಹಲವು ದಿನಗಳಿಂದ ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ಸರಣಿ ಎನ್ಕೌಂಟರ್ ಘಟನೆಗಳು ನಡೆದಿವೆ. ಇದೀಗ ಉಗ್ರರನ್ನು ಮಟ್ಟಹಾಕಲು ಸೇನಾಪಡೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.