ಉಡುಪಿ: ಶೋಷಿತ ಸಮಾಜಕ್ಕೆ ಆಧಾರವಾಗಿ ನಿಂತಿರುವ ಸಾಮಾಜಿಕ ಹರಿಕಾರ ಡಾ.ಗೋವಿಂದ ಬಾಬು ಪೂಜಾರಿ ಇದೀಗ ಮತ್ತೊಂದು ಜನಸ್ನೇಹಿ ನಡೆಯಿಂದ ಗಮನಸೆಳೆದಿದ್ದಾರೆ. ಅಕ್ಷರ ದಾಸೋಹ, ಉದ್ಯೋಗ ಪರ್ವ ಮೊದಲಾದ ಕೈಂಕರ್ಯದಲ್ಲಿ ತಲ್ಲೀನರಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು, ಕಡು ಬಡತನದಲ್ಲಿರುವ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಮಹಾ ಕಾರ್ಯದಲ್ಲೂ ತೊಡಗಿದ್ದಾರೆ. ಅವರು ನಿರ್ಮಿಸಿಕೊಟ್ಟಿರುವ 6ನೇ ಮನೆ ಹಸ್ತಾಂತರ ಕಾರ್ಯಕ್ರಮವು ಇಡೀ ಊರಿಗೆ ಹಬ್ಬದಂತೆ ಕಂಡುಬಂತು.
ಲಾಕ್ಡೌನ್ ಮತ್ತಿತರ ಆಪತ್ಕಾಲ ಸಂದರ್ಭಗಳಲ್ಲಿ ಅಸಹಾಯಕರಿಗೆ ಅನ್ನ-ಆಹಾರ-ಪಡಿತರ ನೀಡಿ ಆಪತ್ಬಾಂಧವನೆನಿಸಿದ್ದ ಡಾ.ಗೋವಿಂದ ಬಾಬು ಪೂಜಾರಿ ಅವರು ಇದೀಗ ಬಡವರಿಗೆ ಮನೆ ನಿರ್ಮಿಸಿಕೊಡುವತ್ತ ಗಮನಹರಿಸಿದ್ದಾದರೂ ಏಕೆ ಎಂಬ ಕುತೂಹಲ ಎಲ್ಲರದ್ದು.
ಕಷ್ಟದ ಹಾದಿಯಲ್ಲಿ ಬೆಳೆದು ಬಂದ ಇವರು ಮೇಧಾವಿ ಎನಿಸಿದ್ದಾರೆ. ಬಡವರ ಕಷ್ಟಗಳಿಗೆ ಮಮ್ಮಲ ಮರುಗುತ್ತಿರುವ ಇವರು, ಅಸಹಾಯಕರ ಸೇವೆಯನ್ನು ದೇವಕಾರ್ಯ ಎಂದು ಪರಿಗಣಿಸಿ ಈ ನಡೆ ಅನುಸರಿಸಿದ್ದಾರಂತೆ.
ಉಡುಪಿ ಜಿಲ್ಲೆ ಮುಳ್ಳಿಕಟ್ಟೆ ಸಮೀಪ ಹೊಸಾಡು ಗ್ರಾಮದ ನಿವಾಸಿಯಾದ ಸುಶೀಲಾ ಪೂಜಾರ್ತಿ ಕುಟುಂಬಕ್ಕೆ ಗೋವಿಂದ ಬಾಬು ಪೂಜಾರಿ ಅವರು, ತಮ್ಮ ಸಾರಥ್ಯದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೂತನ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಜನವರಿ 7ರಂದು ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ, ಈ ಮನೆಯನ್ನು ಹಸ್ತಾಂತರಿಸಲಾಯಿತು. ಈ ಮನೆ ನಿರ್ಮಾಣದ ಪರಿಪೂರ್ಣ ವೆಚ್ಚವನ್ನು ಡಾ.ಗೋವಿಂದಬಾಬು ಪೂಜಾರಿ ಅವರೇ ಭರಿಸಿದ್ದಾರೆ.
ಈ ವಿಚಾರ ತಿಳಿದ ಕರಾವಳಿಯ ಪುಣ್ಯ ಕ್ಷೇತ್ರ ಕನ್ಯಾಡಿಯ ಶ್ರೀ ರಾಮಕ್ಷೇತ್ರದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿಯವರು ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು. ನೂತನ ಮನೆ ಗೃಹಪ್ರವೇಶ ಕೈಂಕರ್ಯಗಳಿಗೆ ಮುನ್ನುಡಿ ಬರೆದು ಆಶೀರ್ವದಿಸಿದರು.
ಸುಶೀಲಾ ಪೂಜಾರ್ತಿಯವರ ಪತಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸುಶೀಲ ಅವರು ತನ್ನ ಒರ್ವ ಗಂಡು ಮಗು ಹಾಗೂ ತಾಯಿಯ ಜೊತೆಗೆ ಸಂಪೂರ್ಣ ಶಿಥಿಲ ವ್ಯವಸ್ಥೆಯ ಗುಡಿಸಲಿನಲ್ಲಿ ದುಸ್ತರ ಬದುಕು ನಡೆಸುತ್ತಿದ್ದರು. ಇವರ ಅಸಹಾಯಕತೆ ಬಗ್ಗೆ ಸ್ಥಳೀಯ ಬಿಲ್ಲವ ಮುಖಂಡ ಮುಳ್ಳಿಕಟ್ಟೆ ಪ್ರದೀಪ್ ಅವರು ಡಾ. ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ಪಡೆದ ಡಾ.ಗೋವಿಂದ ಬಾಬು ಪೂಜಾರಿಯವರು, ತಾವೇ ಮುಂದೆ ನಿಂತು ಅಸಹಾಯಕ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ.
ನೂತನ ಗ್ರಹ ಪ್ರವೇಶದ ಸಂದರ್ಭದಲ್ಲಿ ಕೊಡುಗೈ ದಾನಿ, ಸಾಮಾಜಿಕ ಹರಿಕಾರ ಡಾ.ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಳ್ಳಿಕಟ್ಟೆಯ ‘ಅಂಬಾ ಫ್ರೆಂಡ್ಸ್’ ವತಿಯಿಂದ ಕೈಗೊಂಡ ಈ ಸನ್ಮಾನ ಸನ್ನಿವೇಶವೂ ಎಲ್ಲರ ಗಮನಕೇಂದ್ರೀಕರಿಸಿತು. ಗೋವಿಂದ ಬಾಬು ಪೂಜಾರಿಯವರ ತಂದೆ-ತಾಯಿ, ಬಿಲ್ಲವ ಸಮುದಾಯದ ಮುಖಂಡರು, ಅಂಬಾ ಫ್ರೆಂಡ್ಸ್ ಮುಳ್ಳಿಕಟ್ಟೆ ಪದಾಧಿಕಾರಿಗಳು, ಗ್ರಾಮದ ಹಿರಿಯರು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.