ಗದಗ: ನವೀಲು ತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿ ನೀರು ಬಿಡುಗಡೆ ಮಾಡಿರುವ ಕಾರಣ ಪ್ರವಾಹದ ಆತಂಕ ಎದುರಾಗಿದೆ.
ನರಗುಂದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ ಕೆಲವು ದಿನಗಳಿಂದ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನವೀಲುತೀರ್ಥ ಆಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏಕಾಎಕಿ ಆರು ಅಡಿಯಷ್ಟು ಹೆಚ್ಚಾಗಿದ್ದು ಆಣೆಕಟ್ಟಿನ ಒತ್ತಡವನ್ನು ನಿಯಂತ್ರಿಸಲು ಡ್ಯಾಂ ನಿಂದ ಹದಿನೆಂಟು ಸಾವಿರ ಕ್ಯೂಸೆಕ್ಸ ನೀರನ್ನು ನದಿಗೆ ಹಾಗೂ ಎಡ ದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಹರಿಬಿಡಲಾಗುತ್ತಿದೆ. ಜೂನ್ 1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಪ್ರತಿಶತ 46 ರಷ್ಟು ಹೆಚ್ಚಿನ ಮಳೆಯಾಗಿದ್ದು ಜಿಲ್ಲೆಗೆ ಪ್ರವಾಹ ಎದುರಾದಲ್ಲಿ ಇದನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನಧವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 56 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು ಅದರಲ್ಲಿ ಒಂದು ಕಾಳಜಿ ಕೇಂದ್ರವನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನಧವಾಗಿದೆ ಎಂದು ಹೇಳಿದ್ದಾರೆ. ನವೀಲು ತೀರ್ಥ ಆಣೆಕಟ್ಟಿನಿಂದ ಹೆಚ್ಚಿನ ನೀರು ಬಿಡುಗಡೆಯಾದ ಕಾರಣ ನರಗುಂದ ತಾಲೂಕಿನ ಲಕಮಾಪುರ ಗ್ರಾಮದ ಸುತ್ತ ನೀರು ಆವರಿಸಿದ್ದು ಗ್ರಾಮದ 156 ಜನರು, 76 ಜಾನುವಾರುಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಂತ ಎಲ್ಲರಿಗೂ ಗುಣಮಟ್ಟದ ಊಟ ಉಪಹಾರ ನೀಡುವದರ ಜೊತೆಗೆ ಕುಡಿಯಲು ಬಿಸಿ ನೀರು ಒದಗಿಸುವಂತೆ ಸೂಚಿಸಲಾಗಿದ್ದು ಇದಕ್ಕಾಗಿಯೇ ಒಬ್ಬ ನೋಡೆಲ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ ಎಂದರು. ಜಾನುವಾರುಗಳಿಗೆ ಎರಡು ಮೆಟ್ರಿಕ ಟನ್ ಮೇವು ದಾಸ್ತಾನು ಮಾಡಲಾಗಿರುತ್ತದೆ. ಕಾಳಜಿ ಕೇಂದ್ರಕ್ಕೆ ಗರ್ಭಿಣಿಯರು ಆಗಮಿಸಿದರೆ ಅವರಿಗೆ ಪೌಷ್ಠಿಕ ಆಹಾರ ಹಾಗೂ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದ್ದು, ಕಾಳಜಿ ಕೇಂದ್ರಗಳಲ್ಲಿ ಅಗತ್ಯದ ಎಲ್ಲ ಔಷಧಗಳನ್ನು ದಾಸ್ತಾನು ಮಾಡಲಾಗಿದ್ದು ಜೊತೆಗೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ವಿವರಿಸಿದ್ದಾರೆ.