ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ದ ಬೆಳಗಾವಿ ಜಿಲ್ಲೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದ್ದು ಇದರಿಂದ ಅಭಿವೃದ್ಧಿ ಸಾಧ್ಯವಾಗಲಿದೆ. ಈ ಸಂಬಂಧದ ವಿದೇಯಕಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲೂ ಅಂಗೀಕಾರ ದೊರೆತಿದೆ.
ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಸಿಕ್ಕಿದ್ದು, ವಿಧಾನ ಪರಿಷತ್ನಲ್ಲೂ ಅಂಗೀಕಾರ ದೊರೆತಿದೆ. ಈ ಮೂಲಕ ಆಸ್ತಿಕ ಸಮೂಹದ ಬಹುಕಾಲದ ಕನಸು ನನಸಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ..
ಪ್ರಾಧಿಕಾರಗಳ ರಚನೆಯ ಉದ್ದೇಶವು ಸಸಿಯೊಂದು ಹೆಮ್ಮರವಾಗಿ ಬೆಳೆದು ಜನರಿಗೆ ನೆರಳು ಮತ್ತು ಫಲ ನೀಡುವಂತಹ ಕಲ್ಪನೆ ಹೊಂದಿದೆ. ಪ್ರಾಧಿಕಾರಗಳ ರಚನೆಯೊಂದಿಗೆ ಸಮಗ್ರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ. ಇದನ್ನು ಮನಗೊಂಡಿರುವ ಮಾನ್ಯ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿರವರು ಕಳೆದ ಒಂದು ವರ್ಷದ ಅವಧಿಯಲ್ಲಿ ಚಾಮುಂಡಿ ಬೆಟ್ಟ ಕ್ಷೇತ್ರ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ, ಹುಲಿಗೆಮ್ಮ ಕ್ಷೇತ್ರಗಳನ್ನು ಪ್ರಾಧಿಕಾರಗಳಾಗಿ ರಚಿಸಿದ್ದಾರೆ. ಆ ನಿಟ್ಟಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ನೂತನವಾಗಿ ಸೇರ್ಪಡೆಯಾಗುತ್ತಿದೆ.
ಇದೀಗ ಸರ್ಕಾರದ ಕ್ರಮದ ನಂತರ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರವು ‘ಎ’ ವರ್ಗದ ದೇವಸ್ಥಾನವಾಗಿದೆ. ಒಟ್ಟು 88. 37 ಎಕರೆ ವಿಸ್ತೀರ್ಣವನ್ನು ಈ ದೇವಾಲಯ ಹೊಂದಿದೆ.
ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧಿನಿಯಮ ಮತ್ತು ಉದ್ದೇಶಿತ ಪ್ರಾಧಿಕಾರದೊಂದಿಗೆ Master Plan ಅಭಿವೃದ್ಧಿಪಡಿಸಿ ಭಕ್ತಾಧಿಗಳಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವನ್ನಾಗಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ವಿವರಿಸಿದ್ದಾರೆ.
ರಸ್ತೆ, ಕುಡಿಯುವ ನೀರು, ಗ್ರಾಮ ನೈರ್ಮಲ್ಯಗಳಂತಹ ಮೂಲಸೌಕರ್ಯ ಅಭಿವೃದ್ಧಿ. ಸಮರ್ಪಕವಾಗಿ ಭಕ್ತಾಧಿಗಳಿಗೆ ವಸತಿ, ದರ್ಶನ, ಪ್ರಸಾದ ವಿನಿಯೋಗ ಸೌಲಭ್ಯ ಒದಗಿಸುವುದು. ದೇವಸ್ಥಾನದ ಆದಾಯ ವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.