ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನರು ತತ್ತರಿಸಿದ್ದಾರೆ. ಅದರಲ್ಲೂ ಗದಗ್ ಜಿಲ್ಲೆಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ.
ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.ಬೆಣ್ಣೆ ಹಳ್ಳದ ಪ್ರವಾಹಕ್ಕೆ ಶ್ವಾನಗಳು ಕೊಚ್ಚಿಕೊಂಡು ಹೋಗಿರುವ ಘಟನೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಸೇತುವೆ ಬಳಿ ನಡೆದಿದೆ. ಜನರು ನೋಡ ನೋಡುತ್ತಿದ್ದಂತೆ ಜೋಡಿ ಶ್ವಾನಗಳು ನೀರು ಪಾಲಾಗಿವೆ. ಈಜಿ ದಡಸೇರಲು ಶ್ವಾನಗಳ ಪರದಾಟ ನಡೆಸುತ್ತಿರುವ ದೃಶ್ಯಗಳು ಪ್ರತ್ಯಕ್ಷದರ್ಶಿಗಳ ಮೊಬೈಲ್ನಲ್ಲಿ ಸೆರೆಯಾಗಿದೆ.

ಈ ನಡುವೆ, ಇಂದು ಬೆಳ್ಳಂ ಬೆಳ್ಳಗೆ ಲಾರಿ ಚಾಲಕನೋರ್ವ ಬೆಣ್ಣೆಹಳ್ಳದ ಸೇತುವೆ ಜಲಾವೃತವಾಗಿದ್ದರೂ, ಅದರಲ್ಲಿ ಲಾರಿ ಡಾಟಿಸಲು ಹೋಗಿ ಅವಘಡಕ್ಕೆ ಸಾಕ್ಷಿಯಾಗಿದ್ದಾನೆ. ಲಾರಿಯು ಹಳ್ಳದಲ್ಲಿ ಪಲ್ಟಿಯಾಗಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದಿಂದ ಯಾವಗಲ್ ಗ್ರಾಮದ ಮಾರ್ಗವಾಗಿ ಸೇತುವೆ ದಾಟಿ ರೋಣ ಪಟ್ಟಣಕ್ಕೆ ಹೋಗುತ್ತಿದ್ದ ಲಾರಿ ಇದಾಗಿದೆ.
ಬೆಣ್ಣೆಹಳ್ಳ ತುಂಬಿ ಹರಿಯುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಿದ್ದರೂ ಲಾರಿ ಚಾಲಕ ತನ್ನ ವಾಹನವನ್ನು ದಾಟಿಸುವ ದುಸಾಹಸಕ್ಕಿಳಿದಿದ್ದ. ಆದರೆ ನೀರಿನ ರಭಸಕ್ಕೆ ಈ ಲಾರಿ ಪಲ್ಟಿಯಾಗಿದೆ. ಚಾಲಕ ಮಾತ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನಾದರೂ, ಲಾರಿಯಲ್ಲಿದ ಗೂಡ್ಸ್ ಸಾಮಗ್ರಿಗಳು ನೀರು ಪಾಲಾಗಿವೆ.