ದೊಡ್ಡಬಳ್ಳಾಪುರ: ಮನುಷ್ಯ ಸಾವು-ಬದುಕಿನ ಮಧ್ಯೆ ಸಾರ್ಥಕ ಕೆಲಸ ಮಾಡಿದಾಗ ಮಾನವನ ಜೀವನ ಸಾರ್ಥಕ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನ್ಯೂಸ್ ಫೌಂಡೇಶನ್ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಕರೊನಾ ಸಂಧರ್ಭದಲ್ಲಿ ಮಾನವನ ಅತಿಯಾಸೆ, ಜೀವ, ಜೀವನ, ಶ್ರೀಮಂತಿಕೆಗಳ ಬಗ್ಗೆ ತೀಕ್ಷ್ಣವಾಗಿ ಅರ್ಥವಾಗಿದೆ. ಹಲವು ಮಂದಿಗೆ ಭಗವಂತನು ಶ್ರೀಮಂತಿಕೆ ಕೊಟ್ಟಿರುತ್ತಾನೆ. ಆದರೆ ಸಮಾಜ ಸೇವೆ, ಬಡ-ಬಗ್ಗರಿಗೆ ಸಹಾಯ ಮಾಡುವಂತ ಮನಸ್ಸು ಕೊಟ್ಟಿರುವುದಿಲ್ಲ. ಕರೊನಾ ಬಂದ ಬಳಿಕ ಸಾಕಷ್ಟು ಮಂದಿ ಬದಲಾಗಿದ್ದಾರೆ. ನ್ಯೂಸ್ ಫೌಂಡೇಶನ್ ಕೂಡ ಬಡಬಗ್ಗರು, ತೀರಾ ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿ ಈಗಾಗಲೇ ಕರೊನಾ, ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಮಂದಿ ನಿರ್ಗತಿಕರಿಗೆ ಬಟ್ಟೆ, ಬೆಡ್ ಶಿಟ್ ಗಳ ವ್ಯವಸ್ಥೆ ಮಾಡಿ ಸಾರ್ಥಕ ಕೆಲಸ ಮಾಡಿದ್ದಾರೆ. ಲಾಕ್ ಡೌನ್ ಆಗಿದ್ದ ಮೂರು ತಿಂಗಳು ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಸಾಮಾಜಿಕ ಕೆಲಸ ಮುಂದುವರಿಸಲಿ. ನಾನು ಕೂಡ ಈ ಸಂಸ್ಥೆ ಜೊತೆ ಕೈಜೋಡಿಸುತ್ತೇನೆ ಎಂದರು.
ನ್ಯೂಸ್ ಫೌಂಡೇಶನ್ ಅಧ್ಯಕ್ಷ ರಾಮೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನತೆ ಕರೊನಾ ಬಂದ ಬಳಿಕ ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದೊತ್ತಿನ ಊಟ, ಮಕ್ಕಳ ವಿದ್ಯಾಭ್ಯಾಸ, ಆರ್ಥಿಕವಾಗಿಯೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಜನತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರಕ್ತದಾನ ಶಿಬಿರ, ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಮಾಡಲಾಗುವುದು ಎಂದರು. ಹೆಚ್ಚಿನ ಚಿಕಿತ್ಸೆ ಅವಶ್ಯ ಉಳ್ಳವರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬಡಬಗ್ಗರಿಗೆ ಬೆಡ್ ಶಿಟ್, ಮಹಿಳೆಯರಿಗೆ ಸೀರೆ ಮತ್ತು ಕರೊನಾ ಸಂಧರ್ಭದಲ್ಲಿ ಗಣನೀಯ ಸೇವೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು.
ನ್ಯೂಸ್ ಫೌಂಡೇಶನ್ ಅಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ಪರಮೇಶ್, ದಯಾನಂದ, ಮನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೈರೈಗೌಡ, ಅಪ್ಪಿ ವೆಂಕಟೇಶ, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ ಉಪಾಧ್ಯಕ್ಷ ಎಸ್.ಯು ರಮೇಶ್, ಕೊನಘಟ್ಟ ವಿಎಸ್ಎಸ್ಎನ್ ಉಪಾಧ್ಯಕ್ಷ ರಮೇಶ್, ಕೊನಘಟ್ಟ ಗ್ರಾ.ಪಂ ಸದಸ್ಯರಾದ ಆರಾಧ್ಯ, ಮಂಜುನಾಥ, ಬಾಲರಾಜು, ಜ್ಯೋತಿರಮೇಶ್, ಸುಧಾ, ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.