ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಕುಡುಕರ ಗುಂಪೊಂದು ಮಚ್ಚು-ಲಾಂಗ್ ಝುಳಪಿಸಿ ಗ್ರಾಮಸ್ಥರ ಮೇಲೆ ದಾಂಧಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ಸುಮಾರು 8 ಗಂಟೆಯಲ್ಲಿ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಯುವಕರ ಗುಂಪೊಂದು ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ತೆರಳಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಕುಡಿದು ವಾಪಸಾಗುವ ವೇಳೆ ಪಾಲ್ ಪಾಲ್ ದಿನ್ನೆ ಬಸ್ಸ್ಟಾಂಡ್ ಬಳಿ ನಡು ರಸ್ತೆಯಲ್ಲಿ ಕೆಲವರು ಖಾಲಿ ಎಣ್ಣೆ ಬಾಟಲಿಗಳನ್ನು ಹೊಡೆದು ವಾಹನ ಸವಾರರಿಗೆ ಕಿರುಕುಳ ನೀಡಿದ್ದಾರೆ. ಇದನ್ನು ಗ್ರಾಮಸ್ಥನೊಬ್ಬ ಪ್ರಶ್ನೆ ಮಾಡಿದಾಗ ಗಲಾಟೆ ಶುರುವಾಗಿದೆ.
ಮತ್ತಿನಲ್ಲಿದ್ದ ದಾಂಡಿಗರು ಸಿಕ್ಕಸಿಕ್ಕವರ ಮೇಲೆ ಹಲ್ಲೆಗೆ ಮುಂದಾಗಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಊರಿನ ಗ್ರಾಮಸ್ಥರು ಜಮಾಯಿಸಿ ಕುಡುಕರ ಹುಚ್ಚಾಟವನ್ನು ನಿಯಂತ್ರಿಸಲು ಮುಧಾದಾಗ ದಿಕ್ಕಾಪಾಲಾಗಿ ಓಡಿಹೋದ ಕೆಲ ಕಿರಿಕ್ ಪಾರ್ಟಿಗಳ ಪೈಕಿ, ಕೆಲವರು ಗ್ರಾಮಸ್ಥರ ಕೈಗೆ ಸಿಕ್ಕಿದಿದ್ದಾರೆ. ಅವರನ್ನು ಗ್ರಾಮಸ್ಥರು ಪೊಲೀಸರ ಕೈಗೆ ಒಪ್ಪಿಸಿದ್ದಾರೆ
ಈ ಬಗ್ಗೆ ಗ್ರಾಮಸ್ಥರ ದೂರನ್ನಾಧರಿಸಿ ತನಿಖೆ ಕೈಗೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.