ದೊಡ್ಡಬಳ್ಳಾಪುರ: ಕ್ಯಾಂಟರ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೆಸ್ಕಾಂ ಸಿಬ್ಬಂದಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನಂದಿ ಮೋರಿ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ಬೆಸ್ಕಾಂ ನಗರ ಉಪವಿಭಾಗದ ಕಂದಾಯ ವಿಭಾಗದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಲ್.ರಘುನಂದನ್ ಮೃತರು.
ಭಾನುವಾರ ರಾತ್ರಿ 10.30 ರ ಸುಮಾರಿಗೆ ನಂದಿ ಮೋರಿ ಕಡೆಯಿಂದ ಬರುತ್ತಿದ್ದಾಗ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ತಕ್ಷಣವೇ ಕ್ಯಾಂಟರ್ ಚಾಲಕ ಅಂಬುಲೆನ್ಸ್ ಕರೆಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ರಘುನಂದನ್ ಮೃತಪಟ್ಟಿದ್ದಾರೆ.
ರಘುನಂದನ್ ಅವರು ಮೂಲತಃ ಕನಕಪುರದವರಾಗಿದ್ದು, ಕೆಲಸದ ನಿಮಿತ್ತ ದೊಡ್ಡಬಳ್ಳಾಪುರ ಬಳಿ ವಾಸವಾಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















































