ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಆಡಳಿತಾರೂಢ ಬಿಜೆಪಿ ವಿರುದ್ದ ರಣವ್ಯೂಹ ರಚಿಸಿರುವ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಪ್ರಯತ್ನದಲ್ಲಿದೆ .
ರಾಜ್ಯ ರಾಜಕೀಯದಲ್ಲಿ ಇದೀಗ ಅಭ್ಯರ್ಥಿಗಳ ಆಯ್ಜೆಯ ಕ್ಲೈಮ್ಯಾಕ್ಸ್. ಕಾಂಗ್ರೆಸ್ನ ಸಿಎಂ ಅಭ್ಯರ್ಥಿಗಳೆಂದೇ ತಮ್ಮ ಬಳಗದಲ್ಲಿ ಗುರುತಿಸಿಕೊಂಡು ಬಿಜೆಪಿಗೆ ಸೆಡ್ಡುಹೊಡೆದು ಅಖಾಡಕ್ಕೆ ಧುಮುಕಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಘೋಷಿಸಿದೆ . ಸಿದ್ದರಾಮಯ್ಯ ವಿರುದ್ದ ವರುಣಾದಲ್ಲಿ ಸಚಿವ ವಿ.ಸೋಮಣ್ಣಗೆ ಬಿಹೆಪಿ ಟಿಕೆಟ್ ಘೋಷಣೆಯಾಗಿದ್ದರೆ, ಡಿಕೆಶಿ ಪ್ರತಿನಿಧಿಸುತ್ತಿರುವ ಕನಕಪುರಕ್ಕೆ ಹಿರಿಯ ನಾಯಕ ಆರ್.ಅಶೋಕ್ ಅವರಿಗೆ ಟಿಕೆಟ್ ಪ್ರಕಟವಾಗಿದೆ.
ಅಶೋಕ Vs ಸುರೇಶ್..?
-
ಪ್ರಸ್ತುತ ಪರಿಸ್ಥಿತಿಯಲ್ಲಿ ಕನಕಪುರ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳು ತೀವ್ರ ಜಿದ್ದಾಜಿದ್ದಿನ ಅಖಾಡವೆನಿಸುವ ಲಕ್ಷಣಗಳು ಗೋಚರಿಸುತ್ತಿದೆ. ಬಿಜೆಪಿ ವಿರುದ್ದ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಕಾಂಗ್ರೆಸ್ನ ಅಧ್ಯಕ್ಷರನ್ನೇ ಕಟ್ಟಿಹಾಕಲು ರಣತಂತ್ರ ರೂಪಿಸಿರುವ ಕಮಲ ಸೈನ್ಯ ಡಿ.ಕೆ.ಶಿವಕುಮಾರ್ ಸ್ಪರ್ಧಿಸುವ ಕನಕಪುರಕ್ಕೆ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಪದ್ಮನಾಭನಗರ ಹಾಗೂ ಕನಕಪುರ ಕ್ಷೇತ್ರಗಳಲ್ಲಿ ಆರ್.ಅಶೋಕ್ ಸ್ಪರ್ಧಿಸಲಿದ್ದಾರೆ.
-
ಇದಕ್ಕೆ ಪ್ರತಿತಂತ್ರ ರೂಪಿಸಿರುವ ಡಿಕೆಶಿ, ಕನಕಪುರದಲ್ಲಿ ತಮ್ಮ ವಿರುದ್ದ ಸ್ಪರ್ಧಿಸಲಿರುವ ಆರ್. ಅಶೋಕ್ ಅವರಿಗೆ ಪದ್ಮನಾಭನಗರದಲ್ಲಿ ಟಕ್ಕರ್ ಕೊಡುವ ಸಲುವಾಗಿ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಪದ್ಮನಾಭನಗರ ಕ್ಷೇತ್ರಕ್ಕೆ ಕೈ ಅಭ್ಯರ್ಥಿಯಾಗಿ ರಘುನಾಥ್ ನಾಯ್ಕ್ ಅವರನ್ನು ಘೋಷಿಸಲಾಗಿದೆಯಾದರೂ ತರಾತುರಿಯಲ್ಲಿ ಬಿಫಾರಂ ನೀಡುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ರಘುನಾಥ್ ನಾಯ್ಡು, ಡಿಕೆ.ಸುರೇಶ್ ಸ್ಪರ್ಧಿಸುವುದಾದರೆ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಹೇಳಿಕೊಂಡಿರುವುದು ಕಾಂಗ್ರೆಸ್ ಪಕ್ಷದ್ದೇ ಆದ ಬೆಳವಣಿಗೆ.
ಡಿಕೆಶಿ, ಅಶೋಕ್, ಸುರೇಶ್ ಸೇಫ್..?
ಸದ್ಯದ ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಕ್ಷೇತ್ರಗಳಲ್ಲಿ ಆಶೋಕ್ ಹಾಗೂ ಡಿಕೆಶಿಗೆ ಯಾವುದೇ ತೊಂದರೆ ಆಗದು ಎಂಬುದು ರಾಜಕೀಯ ಪಂಡಿತರ ಅಭಿಮತ. ಕನಕಪುರರದಲ್ಲಿ ಆರ್.ಅಶೋಕ್ ಗೆಲ್ಲುವ ಹಠ ತೋರಿದ್ದೇ ಆದಲ್ಲಿ, ಪದ್ಮನಾಭನಗರದಲ್ಲಿ ಅಶೋಕ್ ಗೆಲುವಿಗೆ ತೊಂದರೆಯಾಗುವುದು ಖಚಿತ. ಹಾಗಾಗಿ ಅಶೋಕ್ ಅವರು ಕನಕಪುರಕ್ಕೆ ಒತ್ತು ನೀಡುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಡಿಕೆಶಿ ವಿರುದ್ದದ ಸ್ಪರ್ಧೆಗೆ ಆದ್ಯತೆ ನೀಡದಿದ್ದಲ್ಲಿ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಅವರು ಗೆಲುವಿಗೆ ಪಣತೊಡಲಾರರು ಎಂಬ ಸಾಧ್ಯಾಸಾಧ್ಯತೆಗಳ ಮಾತುಗಳೂ ಕೇಳಿಬರುತ್ತಿವೆ. ಹಾಗೊಂದು ವೇಳೆ ಉಭಯ ನಾಯಕರು ರಹಸ್ಯ ನಿಲುವು ತಳೆದದ್ದೇ ಆದಲ್ಲಿ ಡಿಕೆಶಿ ಹಾಗೂ ಅಶೋಕ್ ಇಬ್ಬರೂ ಸೇಫ್. ಡಿ.ಕೆ.ಸುರೇಶ್ ಅವರು ಪದ್ಮನಾಭನಗರದಲ್ಲಿ ಸೋಲೊಪ್ಪಿಕೊಂಡರೂ ಅವರು ಇನ್ನೂ ಒಂದು ವರ್ಷ ಸಂಸದರಾಗಿ ಇರುವುದರಿಂದ ರಾಜಕೀಯ ನಷ್ಟವೇನೂ ಆಗದು.
ಬಿಜೆಪಿ ಬಗ್ಗೆ ಜೆಡಿಎಸ್ಗೆ ಅನುಮಾನ?
ಆರ್.ಅಶೋಕ್ ಅವರನ್ನು ಪದ್ಮನಾಭನಗರದ ಜೊತೆಗೆ ಡಿ.ಕೆ.ಶಿವಕುಮಾರ್ ವಿರುದ್ದ ಕನಕಪುರದಲ್ಲೂ ಕಣಕ್ಕಿಳಿಸಿರುವ ಬಿಜೆಪಿ ವರಿಷ್ಠರ ನಡೆ ಬಗ್ಗೆ ಜೆಡಿಎಸ್ ಲೇವಡಿ ಮಾಡಿದೆ. ಕನಕಪುರದಲ್ಲಿ ಅಶೋಕ್ ಅವರನ್ನು ಕಣಕ್ಕಿಳಿಸಿ ಪ್ರಬಲ ಸ್ಪರ್ಧೆಯ ನಾಟಕವಾಡಿ ಡಿಕೆಶಿಯನ್ನು ಗೆಲ್ಲಿಸುವ ಒಳ ಒಪ್ಪಂದ ಕಾಂಗ್ರೆಸ್-ಬಿಜೆಪಿಯದ್ದಾಗಿದೆ ಎಂದು ಜೆಡಿಎಸ್ ನಾಯಕರು ಟೀಕಿಸಿದ್ದಾರೆ. ಆರ್.ಅಶೋಕ್ ಅವರು ಬಿಜೆಪಿಯ ಪ್ರಬಲ ನಾಯಕೇ ಆಗಿದ್ದಲ್ಲಿ, ಅವರನ್ನು ಕನಕಪುರ ಕ್ಷೇತ್ರವೊಂದರಲ್ಲೇ ಕಣಕ್ಕಿಳಿಸಬಹುದಿತ್ತಲ್ಲ? ಎಂಬ ಪ್ರಶ್ನೆ ಜೆಡಿಎಸ್ ನಾಯಕರದ್ದು.
























































ಅಶೋಕ Vs ಸುರೇಶ್..?
ಬಿಜೆಪಿ ಬಗ್ಗೆ ಜೆಡಿಎಸ್ಗೆ ಅನುಮಾನ?