ಬೆಂಗಳೂರು: ಮಾರಣಾಂತಿಕ ಸೋಂಕು ಕೊರೋನಾ ವೈರಾಣು ದೇಶಕ್ಕೆ ಕಾಲಿಟ್ಟು ವರ್ಷ ಕ್ರಮಿಸಿದೆ. ತಿಂಗಳ ಹಿಂದೆ ಈ ಸೋಂಕಿನ ಅಬ್ಬರ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಈಗ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳಚಾಗುತ್ತಿದೆ.
ಕೇರಳ, ಮಹಾರಾಷ್ಟ್ರ ಸಹಿತ ಕರ್ನಾಟಕಕ್ಕೆ ಸಮೀಪವಿರುವ ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಆತಂಕಕಾರಿ ಮಟ್ಟದಲ್ಲಿರುವುದರಿಂದ ಇತ್ತ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಉಂಟಾಗಿದ್ದು ಹಲವು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ.
ಗುರುವಾರ ಸಂಜೆಯಿಂದ ಶನಿವಾರ ಸಂಜೆಯ ನಡುವೆ ರಾಜ್ಯದಲ್ಲಿ 833 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,58,417ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 526 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.
ಕೊರೋನಾ ಸೋಂಕಿನಿಂದ ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 12,386ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.






































































