ಬೆಂಗಳೂರು: ಕುರ್ಚಿ ಗುದ್ದಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ಪಕ್ಷದ ಹೈಕಮಾಂಡ್ಗೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕುರಿತುವಯಾವ ನಾಯಕರೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ವರಿಷ್ಠರು ತಾಕೀತು ಮಾಡಿದ್ದಾರೆ. ಆದರೂ ನಾಯಕರ ಹೇಳಿಕೆಗಳು ಮುಂದುವರಿದಿದೆ.
ಈ ನಡುವೆ, ಪಕ್ಷದ ಶಿಸ್ತು ಉಲ್ಲಂಘಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವ ಸಚಿವರ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಹೈಕಮಾಂಡ್ ಆದೇಶ ಉಲ್ಲಂಘಸುವವರು ಕಾಂಗ್ರೆಸ್ನ ಶಿಸ್ತಿನ ಸಿಪಾಯಿಗಳಲ್ಲ ವರಿಷ್ಠರ ಅಭಿಪ್ರಾಯ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವವು ನಮ್ಮ ಪಕ್ಷದಲ್ಲಿ ಬಲಿಷ್ಠವಾಗಿದೆ. ಕೆಪಿಸಿಸಿ ಅಧ್ಯಕ್ಷರು,ಹಾಗೂ ಮುಖ್ಯಮಂತ್ರಿಗಳನ್ನು. ಸಚಿವರನ್ನು ಯಾವಾಗ ಬದಲಾವಣೆ ಮಾಡಬೇಕು? ಮುಂದುವರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಸಚಿವರು ಹೇಳಿಕೆಯನ್ನು ಕೊಡಬಾರದು.
ನಾಯಕತ್ವ ಬದಲಾವಣೆಯ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ. ನಮ್ಮ ಪಕ್ಷದ ಹೈಕಮಾಂಡ್ ಆಗಿದೆ. ಹೀಗಾಗಿ ಪಕ್ಷದ ನಾಯಕರು ಯಾವುದೇ ವಿಷಯಗಳು ಇದ್ದರೂ ಮೊದಲಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕೇ ವಿನಃ ಮಾಧ್ಯಮಗಳ ಮುಂದಲ್ಲ. ಇಂಥ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್ ನಾಯಕರು ಕೇಳಿದ್ದಾರೆ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಸಚಿವರು ತಮ್ಮ ಇಲಾಖೆಯಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ? ಎಂಬುದು ಪ್ರಶ್ನೆಯಾಗಿದೆ. ಹಾಗೂ ಈಗಾಗಲೇ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ತೀರ್ಮಾನವನ್ನು ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು. ಅನೇಕ ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವವರ ಸಂಪೂರ್ಣ ವರದಿ ಕೇಳಿದೆ ಎಂದವರು ತಿಳಿಸಿದ್ದಾರೆ.
ಸಚಿವರ ಬಗ್ಗೆ ಹೈಕಮಾಂಡ್ ಕೇಳಿರುವ ಪ್ರಶ್ನೆಗಳು:
-
ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರಾ? ಇಲ್ಲವಾ?
-
ಪಕ್ಷದ ಸಂಘಟನೆಗೆ ಒತ್ತು ಕೊಡಲಾಗುತ್ತದೆಯೋ ಇಲ್ಲವೋ?
-
ಪ್ರಣಾಳಿಕೆಯಲ್ಲಿ ಕೊಟ್ಟಿರುವ ಯೋಜನೆಗಳನ್ನು ಜಾರಿ ಮಾಡಲು ಇವರು ಪಕ್ಷ ಮತ್ತು ಸರ್ಕಾರ ಕ್ಕೆ ಸಹಕಾರ ಕೊಡುತ್ತಿದ್ದಾರೋ ಇಲ್ಲವೋ?
-
ತಮ್ಮ ಇಲಾಖೆಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದಾರಾ ಇಲ್ಲವಾ?
ಸಚಿವರ ಕುರಿತ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್ ಕೇಳಿದೆ. ಅಲ್ಲದೆ, ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪದೇ ಪದೆ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಚಿವರ ಸಂಪೂರ್ಣ ವಿವರಗಳನ್ನು ಕೊಡುವಂತೆ ಹೈಕಮಾಂಡ್ ಸೂಚಿಸಿದೆ ಎಂದವರು ತಿಳಿಸಿದ್ದಾರೆ.
‘ಪಕ್ಷ ತಾಯಿ ಇದ್ದಂತೆ, ಸರ್ಕಾರ ಮಗು ಇದ್ದಂತೆ. ಯಾರೂ ಸಹ ಪಕ್ಷದ ಘನತೆಗೆ ಚ್ಯುತಿ ತರಬಾರದು’ ಎಂಬ ಸಂದೇಶವನ್ನು ಎಐಸಿಸಿ ಕರ್ನಾಟಕ ಉಸ್ತುವಾರಿ ಆಗಿರುವ ರಣದೀಪ್ ಸುರ್ಜೇವಾಲ ಈಗಾಗಲೇ ನೀಡಿದ್ದಾಾರೆ. ಇದರ ಮಧ್ಯೆಯೂ ಕೆಲವು ನಾಯಕರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕೆಲವು ಸಚಿವರು ಪದೇ ಪದೆ ಮಾತನಾಡುತ್ತಿದ್ದಾರೆ. ಇದು ಸರಿ ಅಲ್ಲವೇ ಅಲ್ಲ ಎಂದು ಪ್ರತಿಪಾದಿಸಿರರುವ ಮಂಜುನಾಥ ಭಂಡಾರಿ, ಸಚಿವರಾದ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಹಾಗೂ HC ಮಹದೇವಪ್ಪ ಅವರು ಪದೇ ಪದೆ ಮಾತನಾಡುತ್ತಿದ್ದು, ಹೈಕಮಾಂಡ್ ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದೆ. ಎಲ್ಲಾ ಸಚಿವರ ರಿಪೋರ್ಟ್ ಕಾರ್ಡ್ಗಳನ್ನು ಸಹ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದ ಮೇಲೆಯೂ ಪದೇ ಪದೆ ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ಮಂಜುನಾಥ ಭಂಡಾರಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.