ದೆಹಲಿ: ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಫೀ ಬೆಳೆಗಾರರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಅದರಲ್ಲೂ ಕೋವಿಡ್-19 ಬಂದ ನಂತರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸುಂದರ ಮಲೆನಾಡಾಗಿರುವ ಕಾಫಿ ಸೀಮೆಯಲ್ಲಿ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಕಾಫೀ ತೋಟಗಳು ಮಾಯವಾಗುತ್ತಿವೆ. ಇದಕ್ಕೆ ಕಾರಣ ಅನೇಕ.
ಆದರೆ ಕಾಫಿ ಬೆಳೆಗಾರರು ಸಾಲು ಸಾಲು ಸಂಕಷ್ಟಗಳನ್ನು ಎದುರಿಸುತ್ತಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಸಂಕಷ್ಠದಲ್ಲಿರುವ ಕಾಫಿ ಬೆಳೆಗಾರರ ಬೆನ್ನಿಗೆ ನಿಂತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಫಿ ಬೆಳೆಗಾರರ ಸಾಲದ ಬಡ್ಡಿ ಮನ್ನಾಗೆ ಹೋರಾಟ ನಡೆಸುತ್ತಿದ್ದಾರೆ. ಕಾಫಿ ನಾಡನ್ನು ಪ್ರತಿನಿಧಿಸುತ್ತಿರುವ ಶಾಸಕರೂ ಆಗಿರುವ ಸಿ.ಟಿ.ರವಿ ಈ ಸಂಬಂಧ ಕೇಂದ್ರ ಹಣಕಾಸು ಸಚಿವರ ಮೇಲೆ ಒತ್ತಡ ಹೇರಿ ಬಡ್ಡಿ ಮನ್ನಾ ಕುರಿತು ಕ್ರಮಕ್ಕೆ ಮುನ್ನುಡಿ ಬರೆಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಸಿ.ಟಿ.ರವಿ, ಮೊದಲಿಗೆ ಸಾಂಕ್ರಾಮಿಕ ರೋಗವಾದ ಕೊರೊನಾವನ್ನು ಹಿಮ್ಮೆಟ್ಟುವ ಸಂಕಲ್ಪದಲ್ಲಿ ಕೇಂದ್ರ ಸರ್ಕಾರ ಯಶ್ವಿಯಾಗಿ ನಿರ್ವಹಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿರ್ವಹಣೆ ಮಾಡುವ ಮೂಲಕ ಭಾರತವನ್ನು ಆರ್ಥಿಕ ಸಂಷಕ್ಟದಿಂದ ಪಾರುಮಾಡಿದ್ದು ಧೀಃಶಕ್ತಿಯಂತೆ ಕಂಡಿದ್ದಾರೆ ಎಂದಿರುವ ಅವರು, ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವ ಮತ್ತು ಭಾರತದಲ್ಲಿ ಕೊರೊನಾ ಸಂಕಷ್ಟಕ್ಕೆ ಪ್ರತಿ ವ್ಯಕ್ತಿಯೂ ನಲುಗಿ ಹೋಗಿದ್ದಾನೆ. ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಮತ್ತು ಮತ್ತು ಕಾಫಿ ಉದ್ಯಮಿಗಳು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಷಕ್ಟ ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದ ಮೇಲೆ ವಿಧಿಸುತ್ತಿರುವ ಬಡ್ಡಿಯಿಂದ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಕೇಂದ್ರ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರು ಹೊಂದಾಣಿಕೆಗೆ ಸ್ಪಷ್ಟ ಸೂಚನೆಯಿದ್ದರೂ ಕೂಡ ಹಲವು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ನವೀಕರಿಸಲು ಮಾಡಲು ಹಿಂಜರಿಯುತ್ತಿವೆ. ಈ ಬಗ್ಗೆಯೂ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.
ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದವರು ಸಂತಸ ಹಂಚಿಕೊಂಡರು.
ಆರ್ಥಿಕ ಹೊಡೆತದಿಂದ ನಲುಗಿರುವ ಕಾಫಿ ಉದ್ಯಮ ಮತ್ತು ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಮರುಸಾಲನೀಡುವಂತೆ ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ ಇತರೆ ಕೃಷಿ ಕ್ಷೇತ್ರದ ಸಾಲಗಳನ್ನು ಬೆಳೆಗಾರರು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರೆ ಕೃಷಿಯ ಸಮಗ್ರ ಸಾಲಗಳ ಮೇಲಿನ ಬಡ್ಡಿಯನ್ನು ಶೇ.3ರಷ್ಟು ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಅದಕ್ಕೆ ಸಚಿವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದ ಸಿ.ಟಿ.ರವಿ, ಕಾಫಿ ಕೃಷಿಗೆ ಸಂಬಂಧಿಸಿದ ಸಾಲವನ್ನು ಸರ್ಫೇಸಿ ಕಾಯ್ದೆಯಿಂದ (ಸೆಕ್ಯುರಿಟೈಸೇಷನ್ ಅಂಡ್ ರೀಕನ್ಟ್ರಕ್ಷನ್ ಆಫ್ ಫೈನಾನ್ಶಿಯಲ್ ಅಸೆಟ್ ಅಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್) ಹೊರಗಿಡುವಂತೆ ಒತ್ತಾಯಿಸಿದಕ್ಕೆ ಸಕಾರಾತ್ಮಕವಾಗಿ ಒಪ್ಪಿದ್ದಾರೆ ಎಂದರು.
ಇದೀಗ ಕಾಫಿ ಉದ್ಯಮಕ್ಕೇ ಕಂಟಕವಾಗಿರುವ ಸರ್ಫೇಸಿ ಕಾಯ್ದೆಯಿಂದ ಕಾಫಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಾಲವನ್ನು ಹೊರಗಿಡಬೇಕು ವಿತ್ತ ಸಚಿವರನ್ನು ಒತ್ತಾಯಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದ್ದಾರೆ. ಹೆಚ್ಚು, ಗುಡ್ಡ ಜರುಗುವಿಕೆ, ತೋಟಗಾರಿಕೆ ಸಲಕರಣೆಗಳು, ಗಿಡಗಳು ಹಾಳಾಗುತ್ತಿವೆ. ಜೊತೆಗೆ ಸಾಂಕ್ರಾಮಿಕ ರೋಗವಾದ ಕೋವಿಡ್ ನಿಂದ ನಲುಗಿ ಹೋಗಿದ್ದಾರೆ. ಎಲ್ಲವನ್ನು ಪರಿಗಣಿಸಿ ಕಾಫಿ ಬೆಳೆಗಾರರ ನೆರವಿಗೆ ಬನ್ನಿ ಎಂದು ಕೋರಿಕೊಳ್ಳಲಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಲೆ ಭಾರಿ ಕುಸಿತ ಕಂಡಿದೆ. ಹಾಗಾಗಿ ತಾವು ನಿಮ್ಮ ಸಮಯೋಚಿತ ಸಹಾಯವನ್ನು ಹಾಗೂ ಮಧ್ಯ ಪ್ರವೇಶಕ್ಕಾಗಿ ಕೇಂದ್ರದ ಸಹಾಯವನ್ನು ಕೋರಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ಜೀ ಮುಕ್ತ ಮನಸ್ಸಿನಿಂದ ಒಪ್ಪಿ ಮನವಿ ಸ್ವೀಕರಿಸಿದ್ದಾರೆ ಎಂದವರು ತಿಳಿಸಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಸಂದರ್ಭದಲ್ಲಿ ಕಾಫಿ ಬೋರ್ಡ್ ಅಧ್ಯಕ್ಷ ಎಂ.ಎಸ್ ಭೋಜೇಗೌಡ, ಡಾ.ಎಚ್ ಟಿ ಮೋಹನ್ ಕುಮಾರ್ ಹಾಗೂ ಕಾಫಿ ಬೆಳೆಗಾರರ ವಿವಿಧ ಒಕ್ಕೂಟಗಳ ಮುಖಂಡರು ಉಪಸ್ಥಿತರಿದ್ದರು.