ಬೆಂಗಳೂರು: ಬಡವರ ಪಾಲಿಗೆ ಶಿಕ್ಷಣ ಕೊಡಿಸಿದ ಹರೇಕಳ ಹಾಜಬ್ಬ ಒಂದೆಡೆಯಾದರೆ, ಬಡಜನರಿಗೆ ಉದ್ಯೋಗ ಕೊಡಿಸಿರುವ ಡಾ.ಗೋವಿಂದ ಬಾಬು ಪೂಜಾರಿ ಅವರು ಇನ್ನೊಂದೆಡೆ. ಈ ಇಬ್ಬರೂ ಕರಾವಳಿ ಕರುನಾಡಿನ ಎರಡು ಮುತ್ತುಗಳು.
ಹೌದು, ಬಡತನದಲ್ಲಿ ಹುಟ್ಟಿ ಬೆಳೆದ ಇವರಿಬ್ಬರೂ ತಾವು ಹಚ್ಚೇನೂ ಕಲಿಯದಿದ್ದರೂ, ಸಮಾಜಕ್ಕೆ ಶಕ್ತಿ ತುಂಬಿದವರು. ಹಾಜಬ್ಬ ಅವರು ಸರ್ಕಾರ, ಜನಪ್ರತಿನಿಧಿಗಳ ಸಹಕಾರದೊಂದಿಗೆ ಶಿಕ್ಷಣ ಸಂಸ್ಥೆ ಕಟ್ಟಿ ದೇಶದ ಗಮನಸೆಳೆದರೆ, ಇನ್ನೊಂದೆಡೆ ಡಾ.ಗೋವಿಂದ ಬಾಬು ಪೂಜಾರಿಯವರು ಸ್ವಂತ ದುಡ್ಡಿನಲ್ಲೇ ಹಲವಾರು ಸಂಸ್ಥೆಗಳನ್ನು ಕಟ್ಟಿ ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಕೆಲಸ ಕೊಟ್ಟು ಕರಾವಳಿಯ ಶ್ರೇಷ್ಠ ಉದ್ಯೋಗದಾತರೆನಿಸಿದ್ದಾರೆ.

ChefTalk ಹೆಸರಲ್ಲಿ ಆಹಾರೋದ್ದಿಮೆ ಸಂಸ್ಥೆ ಆರಂಭಿಸಿರುವ ಡಾ.ಗೋವಿಂದ ಬಾಬು ಪೂಜಾರಿಯವರು, ಮಹಾರಾಷ್ಟ್ರ, ಗುಜರಾತ್, ಹೈದರಾಬಾದ್, ತೆಲಂಗಾಣ ರಾಜ್ಯಗಳಲ್ಲಿ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದ್ದಾರೆ. ಅದರಲ್ಲೂ ಕರ್ನಾಟಕದ ಚಿನ್ನದ ನಾಡು ಕೋಲಾರದಲ್ಲೂ ಇದೀಗ ಹೊಸ ಶಾಖೆ ಆರಂಭಿಸಿ ನೂರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ.
ಕೋಲಾರದ ನರಸಾಪುರ ಕೈಗಾರಿಕಾ ಕೇಂದ್ರದಲ್ಲಿ ಆರಂಭವಾಗಿರುವ ChefTalk ಸಂಸ್ಥೆಯ ವಿಸ್ತರಣಾ ಕೇಂದ್ರವು ಆ ಭಾಗದ ಉದ್ದಿಮೆ ಸಂಸ್ಥೆಗಳ ದುಡಿಯುವ ಮಂದಿಗೆ ಕಡಿಮೆ ವೆಚ್ಚದಲ್ಲಿ ಉತ್ಕೃಷ್ಟ ಆಹಾರ ಪೂರೈಸುವ ಪ್ರಯತ್ನಕ್ಕಿಳಿದಿದೆ. ನರಸಾಪುರದಲ್ಲಿನ ಈ ನೂತನ ಸರ್ವೀಸ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಹಾಗೂ ಶ್ರೀ ಜೈನ ಯಕ್ಷೇಶ್ವರಿ, ಶ್ರೀ ಶನೇಶ್ವರ ಪಾತ್ರಿಗಳಾದ ವಿಜಯ್ ಪೂಜಾರಿ ಉಪ್ಪುಂದ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, ಚೆಫ್ಟಾಕ್ ಸಂಸ್ಥೆಯ ಮಾಲೀಕರಾದ ಡಾ.ಗೋವಿಂದ ಬಾಬು ಪೂಜಾರಿಯವರು ಲಾಭಕ್ಕಿಂತ, ಸೇವೆಗಿಂತ ನಿರುದ್ಯೋಗ ನಿವಾರಣೆಯ ಕೆಲಸದಲ್ಲಿ ತೊಡಗಿದ್ದಾರೆ ಎಂದು ಗುಣಗಾನ ಮಾಡಿದರು.
ಇದೇ ವೇಳೆ ಅಭಿಪ್ರಾಯ ಹಂಚಿಕೊಂಡ ಶಾಸಕ ಗೋವಿಂದರಾಜು, ಕೂಡಾ ಗೋವಿಂದ ಬಾಬು ಪೂಜಾರಿ ಅವರ ಉದ್ಯೋಗ ಪರ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೋವಿಂದ ಬಾಬು ಪೂಜಾರಿಯ ಸಾಧನೆಗೆ ಸಿಕ್ಕಿದೆ ಗೌರವ ಡಾಕ್ಟರೇಟ್
ಬೆಂಗಳೂರು ಮೂಲದ ಖ್ಯಾತ ಆಹಾರೋದ್ದಿಮೆ ಸಂಸ್ಥೆ ChefTalk ಕಂಪೆನಿಯ ಸಂಸ್ಥಾಪಕರಾಗಿರುವ, ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿಯವರು, ಮಹಾರಾಷ್ಟ್ರ, ಆಂಧ್ರ, ದೆಹಲಿ, ಗುಜರಾತ್, ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ತಮ್ಮ ಕಂಪೆನಿಯನ್ನು ವಿಸ್ತರಿಸಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಮೀನುಗಾರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮತ್ಸ್ಯಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಚಿಪ್ಸ್, ಖಾದ್ಯಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಿದ್ದಾರೆ. ಕರಾವಳಿಯ ಯುವಜನರಿಗೆ ಉದ್ಯೋಗ ಕಲ್ಪಿಸಲು ರೆಸಾರ್ಟ್ ಸಹಿತ ಪ್ರವಾಸೋದ್ಯಮ ಯೋಜನೆಗೂ ಮುನ್ನುಡಿ ಬರೆದಿದ್ದಾರೆ.
ಸ್ವ ಉದ್ಯೋಗ ಕೈಗೊಳ್ಳಲು ಬಯಸುವ ಮಂದಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ಹತ್ತಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿರುವ ಇವರು, ಅನೇಕರಿಗೆ ವೈದ್ಯಕೀಯ ನೆರವು ನೀಡಿ ಆಪತ್ಪಾಂಧವ ಎನಿಸಿದ್ದಾರೆ. ಇವರ ಈ ಸಾಧನೆಯನ್ನು ಗೌರವಿಸಿ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಮುಂದೆ ಆಧುನಿಕ ಸೌಲಭ್ಯಗಳ ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಜನರಿಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸುವ ಹೆಬ್ಬಯಕೆ ಗೋವಿಂದ ಬಾಬು ಪೂಜಾರಿ ಅವರದ್ದು.


























































