ಚಾಮರಾಜನಗರ: ಕೋವಿಡ್ ಸಂಕಟ ಕಾಲದಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಸಹಿತ ವಿವಿಧ ಕಾರಣಗಾಲಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆಂಬ ಸುದ್ದಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಧ್ಯರಾತ್ರಿಯಿಂದಲೂ ಸರ್ವ ಪ್ರಯತ್ನ ಪಟ್ಟು ಆ್ಯಕ್ಸಿಜನ್ ತರಿಸಿದ್ದೇವೆ, ಸರ್ಕಾರ ನೇರವಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸಬೇಕು, ಮೈಸೂರಿನಿಂದ ಏಕೆ..? ಎಂದು ಪ್ರಶ್ನಿಸಿದರು. ಮೈಸೂರಿನ ಜಿಲ್ಲಾಧಿಕಾರಿಗಳು ಅವರ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಾಗ ನಮಗೆಲ್ಲಿ ಸಿಗುತ್ತದೆ, ಆ್ಯಕ್ಸಿಜನ್ ಕೊರತೆ ಇರುವುದು ನಿಜ, ಈ ಘಟನೆಗೆ ಸರ್ಕಾರವೇ ಹೊಣೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿರುದ್ದವೂ ಅವರು ಕಿಡಿಕಾರಿದರು. ಉಸ್ತುವಾರಿ ಹೊತ್ತುಕೊಂಡು ಏನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



























































