ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒಟ್ಟು 112 ಹೊಸ ಪೂರ್ಣ ಕವಚ ನಿರ್ಮಿತ, ಬಿ.ಎಸ್-IV ವೇಗದೂತ ಬಸ್ಗಳನ್ನು 46.48 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಖರೀದಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಿರ್ಣಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಕಾಲೇಜು ಅಂಗವಿಕಲರಿಗೆ, ಅಂಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಹಿರಿಯ ನಾಗರಿಕರಿಗೆ, ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಪ್ರಯಾಣ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದಿದ್ದಾರೆ.
ಕಲ್ಯಾಣ ಪ್ರದೇಶಾಭಿವೃದ್ಧಿ ಕರ್ನಾಟಕ ಮಂಡಳಿ ವ್ಯಾಪ್ತಿಯ 7 ಜಿಲ್ಲೆಗಳಿಗೆ.112 ಹೊಸ ಪೂರ್ಣ ಕವಚ ನಿರ್ಮಿತ ಬಿಎಸ್-6 ಬಸ್ಸುಗಳನ್ನು ಖರೀದಿಸಲಾಗುವುದು. 62 ಹೊಸ ಬಸ್ಗಳನ್ನು ಖರೀದಿಸಲು 50 ಬಸ್ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾಯಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದವರು ತಿಳಿಸಿದ್ದಾರೆ.
ಸುರಕ್ಷೆಗಾಗಿ ಕ್ಯಾಮೆರಾ ಕಣ್ಣು:
ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 612 ಬಸ್ಸುಗಳಲ್ಲಿ 2 ಕ್ಯಾಮರಗಳನ್ನು ಹಾಗೂ 250 ಬಸ್ಸುಗಳಲ್ಲಿ 4 ಕ್ಯಾಮರಗಳನ್ನು ಅಳವಡಿಸಿದೆ. ಕ್ಯಾಮೆರಾ ಜೋಡಿಸಿದ ಎಲ್ಲಾ 862 ಬಸ್ಗಳಲ್ಲಿ 30 ದಿನಗಳ ರೆಕಾರ್ಡಿಂಗ್ ಸೇವ್ ಆಗಿರುತ್ತದೆ.
250 ವಾಹನಗಳಲ್ಲಿ ಕ್ಯಾಮೆರಾಗಳನ್ನು ವಾಹನ ಬಸ್ಸಿನ ಹೊರ ಭಾಗಕ್ಕೆ ಜೋಡಿಸಿದ್ದು ಹಾಗೂ ಪ್ರಯಾಣಿಕರ ಚಲನವಲನ ಗಮನಿಸಲು ಒಳಬಾಗದಲ್ಲಿಯೂ ಸಹ 2 ಕ್ಯಾಮೆರಾ ಗಳನ್ನು ಜೋಡಿಸಿದ್ದು, ಅಪಘಾತ ತಡೆಗಟ್ಟಲು ಪರಿಣಾಮಕಾರಿಯಾಗಿ ನೆರವಾಗುತ್ತದೆ ಎಂದವರು ತಿಳಿಸಿದ್ದಾರೆ.